'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನೋಡಲ್ಲ ಎಂದ ಮಾಜಿ ಸಿಎಂ ಸಿದ್ಧರಾಮಯ್ಯ: ಕೊಟ್ಟ ಕಾರಣವೇನು?
ದೇಶದೆಲ್ಲೆಡೆ ಬಾಲಿವುಡ್ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಬಗ್ಗೆನೇ ಚರ್ಚೆಯಾಗುತ್ತಿದೆ. 32 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ನಡೆದ ಘಟನೆಗಳನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಾಶ್ಮೀರದಲ್ಲಿ ನಡೆದಿದ್ದ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಿಸಿದ್ದಾಗಿ ಹೇಳಿದ್ದಾರೆ. ಕೆಲವೆಡೆ 'ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕೆ ತೆರಿಗೆ ವಿನಾಯಿತಿ ಕೂಡ ನೀಡಿದೆ. ಇನ್ನುಕೆಲವು ರಾಜ್ಯಗಳಲ್ಲಿ ಈ ಸಿನಿಮಾವನ್ನು ಉಚಿತವಾಗಿ ತೋರಿಸಲಾಗುತ್ತಿದೆ. ಅದರಂತೆಯೇ ಕರ್ನಾಟಕದಲ್ಲಿಯೂ ಶಾಸಕರಿಗೆ ಸಚಿವರಿಗೆ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
ಕಾಶ್ಮೀರದಲ್ಲಿ ಪಂಡಿತರ ಮಾರಣಹೋಮ ಮತ್ತು ಕಾಶ್ಮೀರದಿಂದ ಹೊರಬಿದ್ದ ಕಾಶ್ಮೀರಿ ಪಂಡಿತರ ಕಥೆಯನ್ನು ಸಿನಿಮಾದಲ್ಲಿ ನೋಡಿ ಹಲವು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು ಈ ಸಿನಿಮಾಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕೆಲವು ರಾಜ್ಯಗಳಲ್ಲಿ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ. ಉಚಿತವಾಗಿ ಸಿನಿಮಾ ನೋಡಲು ಅವಕಾಶ ನೀಡಿದೆ. ಅದೇ ಕರ್ನಾಟಕದಲ್ಲಿ ಶಾಸಕರು ಹಾಗೂ ಸಚಿವರಿಗೆ ವಿಶೇಷ ಪ್ರದರ್ಶನದ ವ್ಯವಸ್ಥೆ ಮಾಡಿದ್ದರ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ. ಆದರೆ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸಿನಿಮಾ ನೋಡುವುದಿಲ್ಲವೆಂದು ಹೇಳಿಕೆ ನೀಡಿದ್ದಾರೆ.

ಸಿನಿಮಾ ನೋಡಲ್ಲ ಎಂದ ಮಾಜಿ ಸಿಎಂ ಸಿದ್ಧರಾಮಯ್ಯ
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಗ್ಗೆ ಇಂದು (ಮಾರ್ಚ್ 14)ರಂದು ಸದನದಲ್ಲಿ ಚರ್ಚೆಯಾಗಿದೆ. ಸಚಿವರು, ಶಾಸಕರಿಗೆ ಈ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಿರುವ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದರು. ಆದರೆ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವಿವಾದಾತ್ಮಕ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ನೋಡುವುದಿಲ್ಲವೆಂದು ತಿಳಿಸಿದ್ದಾರೆ. ನಾಳೆ (ಮಾರ್ಚ್ 15) ಈ ಸಿನಿಮಾ ವೀಕ್ಷಣೆ ಮಾಡುವುದಿಲ್ಲವೆಂದು ಸಿದ್ಧರಾಮಯ್ಯ ಹೇಳಿದ್ದಾರೆ.

ಸಿದ್ಧರಾಮಯ್ಯ ಸಿನಿಮಾ ಯಾಕೆ ನೋಡಲ್ಲ?
ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ಸಿನಿಮಾ ನೋಡಲ್ಲ ಎಂದಿದ್ದಾರೆ. ಯಾಕೆ ಸಿನಿಮಾ ನೋಡಲ್ಲ ಎನ್ನುವುದಕ್ಕೆ ಕಾರಣವನ್ನೂ ನೀಡಿದ್ದಾರೆ. ''ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಿನಿಮಾ ನೋಡಲು ಕರೆದಿದ್ದಾರೆ. ಆ ಸಿನಿಮಾ ನೋಡಲು ಹೋಗುವವರು ಹೋಗಲಿ. ನಾನು ಸಿನಿಮಾ ನೋಡುವುದು ಕಡಿಮೆ. ಈ ಕಾರಣಕ್ಕೆ ನಾಳೆ ಸಿನಿಮಾ ನೋಡಲು ಹೋಗುವುದಿಲ್ಲ.'' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಣ ಕೊಟ್ಟಿದ್ದಾರೆ.

ಶಾಸಕರು, ಸಚಿವರಿಂದ ಸಿನಿಮಾ ವೀಕ್ಷಣೆ
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಣೆ ಬಗ್ಗೆ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶೇಷ ಘೋಷಣೆ ಮಾಡಿದ್ದು, ನಾಳೆ (ಮಾ.15) ಸಂಜೆ 6.45ಕ್ಕೆ ಬೆಂಗಳೂರಿನ ಮಂತ್ರಿ ಮಾಲ್ನಲ್ಲಿ ಶಾಸಕರು ಹಾಗೂ ಸಚಿವರು, 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಲಿದ್ದಾರೆ. ವಿಧಾನಸಭೆ ಸಚಿವಾಲಯದಿಂದ ಈ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಈ ಸಿನಿಮಾ ವೀಕ್ಷಿಸಲು ಬಹುತೇಕ ಆಡಳಿತ ಪಕ್ಷದ ಶಾಸಕರು ಭಾಗವಹಿಸುವ ಸಾಧ್ಯತೆಗಳಿವೆ. ಇನ್ನೊಂದು ಕಡೆ ಮಾಜಿ ಸಿಎಂ ಯುಡಿಯೂರಪ್ಪ ಕೂಡ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸುವುದಾಗಿ ಹೇಳಿದ್ದಾರೆ.

ಸಿನಿಮಾ ವೀಕ್ಷಿಸಿದ ಸಿಎಂ, ಗೃಹ ಸಚಿವ
ಈಗಾಗಲೇ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ವೀಕ್ಷಿಸಿದ್ದಾರೆ. ಉಳಿದವರು ನಾಳೆ(ಮಾರ್ಚ್15) ಸಿನಿ ನೋಡಲಿದ್ದಾರೆ. ಇನ್ನೊಂದು ಕಡೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಉಚಿತ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದು, ಮಾ.21ರಂದು ಜಿಲ್ಲೆಯಲ್ಲಿ 'ದಿ ಕಾಶ್ಮೀರ ಫೈಲ್ಸ್' ಬಿಡುಗಡೆ ಮಾಡಲಾಗುತ್ತಿದೆ. ಮಧ್ಯ ಪ್ರದೇಶದಲ್ಲಿಯೂ ಪೊಲೀಸರಿಗೆ ಉಚಿತವಾಗಿ ಸಿನಿಮಾ ತೋರಿಸಲಾಗಿದೆ.


Click it and Unblock the Notifications











