ಲಾಕ್ಡೌನ್ ನಡುವೆ ಮಗ ನಿಖಿಲ್ ಸರಳ ಮದುವೆ: ಕುಮಾರಸ್ವಾಮಿ ಹೇಳಿದ್ದೇನು?
ನಟ, ರಾಜಕಾರಣಿ ನಿಖಿಲ್ ಕುಮಾರ್ ಮತ್ತು ರೇವತಿ ಶುಕ್ರವಾರ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ. ಲಾಕ್ಡೌನ್ ನಡುವೆಯೂ ಪೂರ್ವನಿಗದಿಗೊಳಿಸಿದ್ದ ಸಮಯದ ಮುಹೂರ್ತದಲ್ಲಿ ನಿಖಿಲ್ ಮತ್ತು ರೇವತಿ ವೈವಾಹಿಕ ಬಂಧನಕ್ಕೆ ಒಳಪಟ್ಟರು. ರಾಮನಗರದ ಕೇತಗಾನಹಳ್ಳಿಯ ಫಾರ್ಮ್ ಹೌಸ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಸ್ತ್ರ ನೆರವೇರಿತು.
Recommended Video
ಈ ಹಿಂದೆ ರಾಮನಗರ ಸಮೀಪದ ಜಾನಪದ ಲೋಕದಲ್ಲಿ ಅದ್ಧೂರಿಯಾಗಿ ಮದುವೆ ನಡೆಸಲು ತೀರ್ಮಾನಿಸಲಾಗಿತ್ತು. ಕೊರೊನಾ ವೈರಸ್ ಹಾವಳಿ ಹೆಚ್ಚಾದ ಕಾರಣ ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಆದರೆ ಲಾಕ್ಡೌನ್ ಜಾರಿಗೊಳಿಸಿದ್ದರಿಂದ ಕುಮಾರಸ್ವಾಮಿ ಅಥವಾ ರೇವತಿ ಅವರ ಮನೆಯಲ್ಲಿ ಸರಳವಾಗಿ ನಡೆಸಲು ಉದ್ದೇಶಿಸಲಾಗಿತ್ತು.
ತಮ್ಮ ರಾಜಕೀಯ ಕರ್ಮಭೂಮಿಯಾದ ರಾಮನಗರದಲ್ಲಿಯೇ ಮದುವೆ ನಡೆಸಬೇಕೆಂಬ ಕುಮಾರಸ್ವಾಮಿ ಅವರ ಸೆಂಟಿಮೆಂಟ್ ಕಾರಣಕ್ಕೆ ತೋಟದ ಮನೆಯಲ್ಲಿ ಮದುವೆ ನಡೆಸಲಾಗಿದೆ. ಬಂಧುಗಳು, ಮಿತ್ರರು, ಅಭಿಮಾನಿಗಳು ಸೇರಿದಂತೆ ಲಕ್ಷಾಂತರ ಮಂದಿ ಭಾಗವಹಿಸಬೇಕಿದ್ದ ಮದುವೆ ಕೆಲವೇ ಜನರ ನಡುವೆ ಮುಗಿದು ಹೋಯಿತು. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದೇನು? ಮುಂದೆ ಓದಿ...

ಮಾರ್ಗಸೂಚಿ ಅನ್ವಯ ಮದುವೆ
ಇಡೀ ಜಗತ್ತು ಕೊರೋನಾ ವೈರಸ್ ಎಂಬ ಮಹಾಮಾರಿಯಿಂದ ತತ್ತರಿಸುತ್ತಿರುವ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ವ್ಯವಸ್ಥಿತವಾಗಿ ಸಾಮಾಜಿಕ ಅಂತರ ಹಾಗೂ ಮುನ್ನೆಚ್ಚರಿಕೆಯ ನಡುವೆ ವಿವಾಹ ಅಚ್ಚುಕಟ್ಟಾಗಿ ನೆರವೇರಿದೆ ಎಂದು ತಿಳಿಸಿದ್ದಾರೆ.

ನಿಮ್ಮ ಸ್ಪಂದನೆ ಅನುಕರಣೀಯ
ಶಾಸಕರು, ಕಾರ್ಯಕರ್ತರು, ಮುಖಂಡರು, ಕುಟುಂಬದ ಹಿತೈಷಿಗಳು ಸೇರಿದಂತೆ ನಾಡಿನ ಲಕ್ಷಾಂತರ ಜನರು ನನ್ನ ಕುಟುಂಬದ ಕುಡಿಯ ವಿವಾಹಕ್ಕೆ ಮನೆಯಿಂದಲೇ ಹರಸಿದ್ದೀರಿ. ನಾನು ಮತ್ತು ನನ್ನ ಕುಟುಂಬ ವರ್ಗ ಮಾಡಿದ ಮನವಿಗೆ ನೀವುಗಳು ಸ್ಪಂದಿಸಿದ ರೀತಿ ಅನುಕರಣೀಯ ಮತ್ತು ಮಾದರಿ ಎಂದು ಹೇಳಿದ್ದಾರೆ.

ಜತೆಗೆ ಕುಳಿತು ಊಟ ಮಾಡೋಣ
ಜಗತ್ತು ಪ್ರಸಕ್ತ ಎದುರಿಸುತ್ತಿರುವ ಈ ಗಂಡಾಂತರ ಕಳೆದು ಪರಿಸ್ಥಿತಿ ಸಹಜವಾದಾಗ ನಾವು ಮತ್ತು ನೀವುಗಳು ಜತೆ ಸೇರಿ ಒಟ್ಟಿಗೆ ಕುಳಿತು ಊಟ ಮಾಡೋಣ. ನಿಮ್ಮ ಹೃದಯ ವೈಶಾಲ್ಯ ಮತ್ತು ಪ್ರೀತಿಗೆ ನಾವುಗಳು ಸದಾ ಋಣಿ. ನವದಂಪತಿಗೆ ಹರಸಿದ ಪ್ರತಿಯೊಬ್ಬರಿಗೂ ಮತ್ತೊಮ್ಮೆ ಹೃದಯತುಂಬಿದ ಕೃತಜ್ಞತೆಗಳು ಎಂದು ಕುಮಾರಸ್ವಾಮಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.


Click it and Unblock the Notifications











