ಶಿವಣ್ಣ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಜನವೋ ಜನ
ಗೆಲುವು ಕನ್ನಡ ಗೆಳೆಯರ ಸಮಿತಿ ಬೆಂಗಳೂರು ವಿದ್ಯಾಪೀಠದ ಶಂಕರನಾಗ್ ವೃತ್ತದ ಬಳಿಯ ಕೆಂಪೇಗೌಡ ಆಟದ ಮೈದಾನದಲ್ಲಿ 'ಕರುನಾಡ ಸಂಭ್ರಮ 2013' ಕಾರ್ಯಕ್ರಮ ಆಯೋಜಿಸಿತ್ತು. ಡಿಸೆಂಬರ್ ಐದರಿಂದ ಆರಂಭವಾದ ಈ ವಿಜ್ರುಂಭಣೆಯ ಕಾರ್ಯಕ್ರಮಕ್ಕೆ ಭಾನುವಾರ (ಡಿ 8) ತೆರೆಬಿತ್ತು.
ಕಾರ್ಯಕ್ರಮದ ಕೊನೆಯ ದಿನವಾದ ಭಾನುವಾರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಸಮಿತಿ 'ಕನ್ನಡ ಕಲಾಭೂಷಣ' ಪ್ರಶಸ್ತಿ ಪ್ರಧಾನ ಮಾಡುವ ಕಾರ್ಯಕ್ರಮ ಹಮ್ಮಿ ಕೊಂಡಿತ್ತು. ಸಮಾರಂಭಕ್ಕೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದರು.
ಶಿವರಾಜ್ ಕುಮಾರ್ ವೀಕ್ಷಿಸಲು ಜನಸಾಗರವೇ ಹರಿದು ಬಂದಿತ್ತು. ಕಿಕ್ಕಿರಿದು ತುಂಬಿದ್ದ ಮೈದಾನಕ್ಕೆ ಕ್ರೇನ್ ಮೂಲಕ ಶಿವರಾಜ್ ಕುಮಾರ್ ಎಂಟ್ರಿ ಕೊಟ್ಟರು. ಅವರಿಗೆ ಯುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಾಥ್ ನೀಡಿದರು.

ಭಜರಂಗಿ ಚಿತ್ರದ ಹಾಡಿನ ಮೂಲಕ ಶಿವಣ್ಣ ಅವರನ್ನು ಸ್ವಾಗತಿಸಲಾಯಿತು. ಪ್ರೇಕ್ಷಕರ ಒತ್ತಾಯದ ಮೇರೆಗೆ ಶಿವಣ್ಣ ಅಂಡಮಾನ್ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧ್ರುವ್ ಸರ್ಜಾ ಅದ್ದೂರಿ ಮತ್ತು ಬಹದ್ದೂರ್ ಚಿತ್ರದ ಡೈಲಾಗ್ ಹೊಡೆದು ನಂತರ ಅದ್ದೂರಿ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು.
ಕನ್ನಡ ಕಲಾಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿವಣ್ಣ, ನನಗೆ ನಿಮ್ಮ ಆಶೀರ್ವಾದ ಬೇಕು. ಇದೇ ಡಿಸೆಂಬರ್ ಹನ್ನೆರಡರಂದು ಭಜರಂಗಿ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರ ನೋಡಿ ನಮ್ಮನ್ನು ಹರಸಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿ ಕೊಂಡರು. (ಭಜರಂಗಿ ಚಿತ್ರದ ಆಡಿಯೋ ವಿಮರ್ಶೆ)
ಕಾರ್ಯಕ್ರಮದಲ್ಲಿ ಉದ್ಯಮಿ ವಿಜಯ್ ಸಂಕೇಶ್ವರ್, ಅಶೋಕ್ ಖೇಣಿ, ನಿರ್ದೇಶಕ ನಾಗಾಭರಣ, ಸಂಗೀತ ನಿರ್ದೇಶಕ ಭಗವಾನ್, ನಟರಾದ ಶ್ರೀನಗರ ಕಿಟ್ಟಿ, ಯೋಗೀಶ್, ಸರಿಗಮ ವಿಜಿ, ತಬ್ಲಾ ನಾಣಿ, ಪತ್ರಕರ್ತ ತಿಮ್ಮಪ್ಪ ಭಟ್ ಮುಂತಾದವರು ಭಾಗವಹಿಸಿದ್ದರು.
ಅರ್ಜುನ್ ಜನ್ಯ, ಹೇಮಂತ್ ಕುಮಾರ್, ಅನುರಾಧ ಭಟ್, ಶಮಿತಾ ಮಲ್ನಾಡ್ ನಡೆಸಿ ಕೊಟ್ಟ ಸಂಗೀತ ಸಂಜೆ ಕಾರ್ಯಕ್ರಮ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು.


Click it and Unblock the Notifications











