ಪ್ರತಿಕ್ರಿಯೆ ನೀಡದೆ ಹೊರಟ ಹಂಸಲೇಖ: ಪೊಲೀಸರ ವಿಚಾರಣೆಯಲ್ಲಿ ನಡೆದಿದ್ದೇನು?
ಮೈಸೂರಿನಲ್ಲಿ ನಡೆದಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಿವಂಗತ ಪೇಜಾವರ ಶ್ರೀಗಳ ವಿರುದ್ಧ ನಾದಬ್ರಹ್ಮ ಹಂಸಲೇಖ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಹಂಸಲೇಖ ಹೇಳಿಕೆಯನ್ನು ಖಂಡಿಸಿ, ಕೆಲವು ಸಂಘಟನೆಗಳು ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ, ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಹಂಸಲೇಖಗೆ ನೋಟಿಸ್ ನೀಡಿದ್ದರು.
ಬಸವನಗುಡಿ ಪೊಲೀಸರು ಮೊದಲ ಬಾರಿ ಹಂಸಲೇಖಗೆ ನೀಡಿದ ನೋಟಿಸ್ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಎರಡನೇ ಬಾರಿ ನೋಟಿಸ್ ಜಾರಿ ಮಾಡಿ ವಿಚಾರಣೆ ಹಾಜರಾಗುವಂತೆ ತಿಳಿಸಲಾಗಿತ್ತು. ಹಂಸಲೇಖ ಕೂಡ ಅನಾರೋಗ್ಯದ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದರು. ಈ ಬೆನ್ನಲ್ಲೇ ಪೊಲೀಸರು ಗಡುವು ನೀಡಿದ ಹಿನ್ನೆಲೆ ಇಂದು( ನವೆಂಬರ್ 25) ಬಸವನಗುಡಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಪೊಲೀಸರು ಹೇಳಿದ ಪ್ರಶ್ನೆಗೆ ಉತ್ತರಿಸಿ ನಿರ್ಗಮಿಸಿದ್ದಾರೆ.

ಹಂಸಲೇಖ ವಿಚಾರಣೆಯಲ್ಲಿ ನಡೆದಿದ್ದೇನು?
ಸಂಗೀತ ನಿರ್ದೇಶಕ ಹಂಸಲೇಖರನ್ನು ಇಂದು( ನವೆಂಬರ್ 25) ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಈ ಸಂಬಂಧ ಹಂಸಲೇಖ ತಮ್ಮ ಪರ ವಕೀಲ ದ್ವಾರಕಾನಾಥ್ ಹಾಗೂ ಪತ್ನಿಯೊಂದಿಗೆ ಬಸವನಗುಡಿ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಬಸವನಗುಡಿ ಠಾಣಾಧಿಕಾರಿ ಇನ್ಸ್ಪೆಕ್ಟರ್ ರಮೇಶ್ ನೇತೃತ್ವದಲ್ಲಿ ವಿಚಾರಣೆ ನಾದಬ್ರಹ್ಮ ಹಂಸಲೇಖ ವಿಚಾರಣೆ ನಡೆದಿದೆ. ಪೊಲೀಸ್ ಮಾಹಿತಿ ಪ್ರಕಾರ, ಹಂಸಲೇಖರಿಗೆ ಕೇಳಲೆಂದೇ 25 ರಿಂದ 30 ಪ್ರಶ್ನೆಗಳನ್ನು ಪೊಲೀಸರು ಸಿದ್ಧಪಡಿಸಿಕೊಂಡಿದ್ದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಹಂಸಲೇಖ ವಿಚಾರಣೆ ಮಾಡಲಾಯಿತು.

ಅಗತ್ಯ ಬಿದ್ದರೆ ಠಾಣೆಗೆ ಬರಲು ಸೂಚನೆ
ವಿಚಾರಣೆ ಬಳಿಕ ಹಂಸಲೇಖ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ. ಆದರೆ, ಹಂಸಲೇಖ ಪರ ವಕೀಲ ದ್ವಾರಕಾನಾಥ್ ವಿಚಾರಣೆಗೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ." ಇಂದು ಹಂಸಲೇಖ ಅವರ ವಿಚಾರಣೆ ಮುಗಿದಿದೆ. ಮತ್ತೆ ವಿಚಾರಣೆ ಬರಬೇಕು ಅಂದರೆ ಬರುತ್ತೇವೆ. ಸದ್ಯ ಇವತ್ತು ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಹಂಸಲೇಖ ಉತ್ತರಿಸಿದ್ದಾರೆ. ಆದರೆ, ವಿಚಾರಣೆಯಲ್ಲಿ ಅವರು ಕೇಳಿದ ಪ್ರಶ್ನೆ ಏನು ಅನ್ನುವುದು ಹೇಳಲು ಸಾಧ್ಯವಿಲ್ಲ. ಕಾನೂನಿನ ಮೇಲೆ ನಮಗೆ ನಂಬಿಕೆ ಇದೆ. ಹೋರಾಟ ಮುಂದುವರೆಸುತ್ತೇವೆ. ಅಗತ್ಯ ಬಿದ್ದರೆ ನೋಟಿಸ್ ಕೊಡುತ್ತೇವೆ ಬನ್ನಿ ಅಂದಿದ್ದಾರೆ. ಕರೆದರೆ ವಿಚಾರಣೆ ಬರುತ್ತೇವೆ." ಎಂದು ಹಂಸಲೇಖ ಪರ ವಕೀಲ ದ್ವಾರಕನಾಥ್ ಹೇಳಿದ್ದಾರೆ.

ಕಾನೂನು ಪ್ರಕಾರ ತನಿಖೆ ಮಾಡುತ್ತೇವೆ
ಹಂಸಲೇಖ ವಿಚಾರಣೆ ಬಳಿಕ ಡಿಸಿಪಿ ಹರೀಶ್ ಪಾಂಡೆ ಪ್ರತಿಕ್ರಿಯಿಸಿದ್ದಾರೆ." ತನಿಖಾಧಿಕಾರಿಗಳು ಹಂಸಲೇಖಾ ವಿಚಾರಣೆ ಮಾಡಿದ್ದಾರೆ. ಏನೆಲ್ಲಾ ಪ್ರಶ್ನೆಗಳು ಬೇಕೋ ಅದನ್ನೆಲ್ಲಾ ಕೇಳಿದ್ದಾರೆ. ಮತ್ತೆ ಅವಶ್ಯಕತೆ ಇದ್ದರೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲಾಗುತ್ತದೆ. ಕೋರ್ಟ್ ಗೆ ನಾವು ಎಲ್ಲಾ ರೀತಿಯಿಂದಲೂ ಉತ್ತರ ನೀಡಬೇಕು. ಆ ಸಲುವಾಗಿ ಎಲ್ಲಾ ರೀತಿಯಿಂದಲೂ ತನಿಖೆ ಮಾಡುತ್ತೇವೆ. ಠಾಣೆಯ ಮುಂದೆ ಹೈಡ್ರಾಮಾ ಅಂತೆಲ್ಲಾ ಏನು ನಡೆದಿಲ್ಲ. ಪರ ಹಾಗೂ ವಿರೋಧ ಮಾಡುವವರು ಪ್ರತಿಭಟನೆ ಮಾಡಿದ್ದಾರೆ. ಅಧಿಕಾರಿಗಳು ಪ್ರತಿಭಟನಾಕಾರರನ್ನು ವಾಪಾಸ್ ಕಳುಹಿಸಿದ್ದಾರೆ. ಕಾನೂನು ಪ್ರಕಾರ ತನಿಖೆ ಮಾಡುತ್ತೇವೆ." ಎಂದು ಹೇಳಿದ್ದಾರೆ.

ಪೇಜಾವರ ಶ್ರೀಗಳ ವಿರುದ್ಧ ಮಾತಾಡಿದ್ದ ಹಂಸಲೇಖ
ಇತ್ತೀಚೆಗೆ ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಮಾನತೆ ಹಾಗೂ ಅಸ್ಪ್ರಶ್ಯತೆ ಬಗ್ಗೆ ಸಂದೇಶ ಸಾರುವ ವೇಳೆ ಪೇಜಾವರ ಶ್ರೀಗಳ ವಿಷಯವನ್ನು ಪ್ರಸ್ತಾಪಿಸಿದ್ದರು. "ಪೇಜಾವರ ಶ್ರೀಗಳು ದಲಿತರ ಮನೆಗೆ ಹೋದರು ಎಂದು ಸುದ್ದಿಯಾಗಿತ್ತು. ದಲಿತರ ಮನೆಗೆ ಹೋಗಿ ಪೇಜಾವರ ಶ್ರೀಗಳು ಅಲ್ಲಿ ಕುಳಿತಿದ್ದರಷ್ಟೆ. ಅವರು ಕೋಳಿ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಿದ್ದರೇನು?" ಎಂದು ಹಂಸಲೇಖ ಪ್ರಶ್ನೆ ಮಾಡಿದ್ದರು. ಈ ವಿಚಾರವಾಗಿ ದಿವಂಗತ ಪೇಜಾವರ ಶ್ರೀಗಳ ಭಕ್ತಗಣ ತಿರುಗಿಬಿದ್ದಿತ್ತು.


Click it and Unblock the Notifications











