ರಾಜಕೀಯಕ್ಕೆ 'ಟೆನ್ನಿಸ್': ಆಪ್ ಮೂಲಕ ಕೃಷ್ಣ ರಾಜಕೀಯ ಎಂಟ್ರಿ!
ಇದೂವರೆಗೂ ಕನ್ನಡದ ಅದೆಷ್ಟೋ ತಾರೆಯರು ರಾಜಕೀಯ ಪ್ರವೇಶ ಮಾಡಿದ್ದಾರೆ. ಸಿನಿಮಾದಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಕಲಾವಿದರು, ತಂತ್ರಜ್ಞರಲ್ಲಿ ಕೆಲವರಿಗೆ ಸಕ್ಸಸ್ ಸಿಕ್ಕಿದೆ. ಮತ್ತೆ ಕೆಲವರಿಗೆ ನಿರಾಸೆಯಾಗಿದೆ. ಆದರೂ, ಇನ್ನೂ ಹಲವರಿಂದ ಪ್ರಯತ್ನ ನಡೆಯುತ್ತಲೇ ಇದೆ. ಈ ಸಾಲಿಗೀಗ ಕನ್ನಡದ ಹಾಸ್ಯ ನಟ ಟೆನ್ನಿಸ್ ಕೃಷ್ಣ ಸೇರಿಕೊಳ್ಳಿದ್ದಾರೆ.
ಟೆನ್ನಿಸ್ ಕೃಷ್ಣ ಯಾರಿಗೆ ಗೊತ್ತಿಲ್ಲ. ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ಇಷ್ಟು ದಿನ ಕನ್ನಡ ಸಿನಿಪ್ರೇಮಿಗಳನ್ನು ರಂಜಿಸಿದ್ದಾರೆ. ಇಂದಿಗೂ ಟೆನ್ನಿಸ್ ಕೃಷ್ಣ ಕಾಮಿಡಿ ಸೀನ್ಗಳನ್ನು ನೋಡಿ ಎಂಜಾಯ್ ಮಾಡುವ ಬಹುದೊಡ್ಡ ವರ್ಗವೇ ಇದೆ. ಇಷ್ಟು ಹಾಸ್ಯ ಕಲಾವಿದರನ್ನಾಗಿ ನೋಡಿದವರು ಇನ್ನುಂದೆ ರಾಜಕೀಯ ಮುಖಂಡನಾಗಿ ನೋಡಲಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಕನ್ನಡದ ಮೇರು ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿರೋ ಟೆನ್ನಿಸ್ ಕೃಷ್ಣ ರಾಜಕೀಯ ಎಂಟ್ರಿ ಹೇಗಿರುತ್ತೆ? ಅನ್ನುವ ಕುತೂಹಲವಿದೆ. ರಾಜಕೀಯ ಮತ್ತು ಸಿನಿಮಾ ಕ್ಷೇತ್ರಕ್ಕೆ ಬಹಳ ಹಿಂದಿನ ಒಡನಾಟವಿದ್ದು, ಇಷ್ಟು ದಿನ ಸಿನಿಮಾ ರಂಗದಲ್ಲಿ ಟೆನ್ನಿಸ್ ಆಡಿದ್ದ ಕೃಷ್ಣ ರಾಜಕೀಯ ರಂಗದಲ್ಲಿ ಹೇಗೆ ಆಟ ಆಡುತ್ತಾರೆ ಅನ್ನೋದು ಬಹಳ ಮುಖ್ಯ.

ಆಪ್ ಪಕ್ಷಕ್ಕೆ ಟೆನ್ನಿಸ್ ಕೃಷ್ಣ
ತೆರೆಮೇಲೆ ಹೊಟ್ಟೆ ಹುಣ್ಣಾಗಿಸುವಷ್ಟು ಟೆನ್ನಿಸ್ ಕೃಷ್ಣ ನಗಿಸಿದ್ದಾರೆ. ಆದರೆ, ಕೆಲವು ವರ್ಷಗಳಿಂದ ಹಿರಿಯ ಹಾಸ್ಯ ನಟನೆಯಿಂದ ದೂರ ಉಳಿದಿದ್ದರು. ಇದೇ ವೇಳೆ ಕೆಲವು ದಿನಗಳಿಂದ ಇವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂದೇ ಹೇಳಲಾಗಿತ್ತು. ಅಂತೆಯೇ ನಾಳೆ (ಆಗಸ್ಟ್ 4)ರಂದು ಟೆನ್ನಿಸ್ ಆಪ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್ನಲ್ಲಿ ಅಧಿಕೃತವಾಗಿ ಆಪ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದು, ಈ ವಿಷಯವನ್ನು ಸ್ವತ: ಆಪ್ ಪಕ್ಷವೇ ಸ್ಪಷ್ಟಪಡಿಸಿದೆ.

ಆಪ್ ಸಿದ್ದಾಂತ ಒಪ್ಪಿ ಸೇರ್ಪಡೆ
ಟೆನ್ನಿಸ್ ಕೃಷ್ಣ ಆಪ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಆಪ್ ಸೇರ್ಪಡೆಯಾಗುತ್ತಾರೆ ಎಂದು ರಾಜಕೀಯ ಪಕ್ಷ ಹೇಳಿಕೊಂಡಿದೆ. "ಕನ್ನಡ ಚಲನಚಿತ್ರರಂಗದ ಹೆಸರಾಂತ ಹಾಸ್ಯ ಕಲಾವಿದ ಟೆನಿಸ್ ಕೃಷ್ಣರವರು ಆಮ್ ಆದ್ಮಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷದೊಂದಿಗೆ ಕೈ ಜೋಡಿಸುತ್ತಿರುವ ವಿಚಾರವನ್ನು ತಿಳಿಸಲು ಹರ್ಷಿಸುತ್ತೇವೆ. ಈ ಸಂಬಂಧ ನಾಳೆ ಪಕ್ಷಕ್ಕೆ ಅಧಿಕೃತವಾಗಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಇನ್ನಿತರ ಹಿರಿಯ ಮುಖಂಡರ ಸಮ್ಮುಖದಲ್ಲಿ ಸೇರ್ಪಡೆ ಆಗುತ್ತಿದ್ದಾರೆ." ಎಂದು ಆಪ್ ಪಕ್ಷ ಹೇಳಿದೆ.

ಚಿತ್ರರಂಗಕ್ಕೂ ರಾಜಕೀಯಕ್ಕೂ ನಂಟು
ಟೆನ್ನಿಸ್ ಕೃಷ್ಣಗೂ ಮುನ್ನ ಕನ್ನಡ ಹಲವು ಕಲಾವಿದರು ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅಂಬರೀಶ್, ಜಗ್ಗೇಶ್, ಬಿಸಿ ಪಾಟೀಲ್, ಶಶಿಕುಮಾರ್, ಉಮಾಶ್ರೀ ಸೇರಿದಂತೆ ಹಲವರು ರಾಜಕೀಯಕ್ಕೆ ಸೇರ್ಪಡೆಯಾಗಿ ಚುನಾವಣೆಗೂ ನಿಂತು ಗೆದ್ದಿದ್ದರು. ಹಾಗೇ ತಾರಾ, ಶೃತಿ, ಭಾವನಾ, ಮಳವಿಕಾ ಅವಿನಾಶ್, ಮುಖ್ಯಮಂತ್ರಿ ಚಂದ್ರು, ಎಸ್.ನಾರಾಯಣ್, ಸಾಧು ಕೋಕಿಲಾ ಸೇರಿದಂತೆ ಹಲವು ಬೇರೆ ಬೇರೆ ರಾಜಕೀಯ ಪಕ್ಷದಲ್ಲಿ ಸದಸ್ಯರಾಗಿದ್ದಾರೆ. ಈಗ ಆಪ್ ಪಕ್ಷದ ಮೂಲಕ ಟೆನ್ನಿಸ್ ಕೃಷ್ಣ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

'ಟೆನ್ನಿಸ್' ಮುಂದಿರುವ ಸವಾಲು
ಟೆನ್ನಿಸ್ ಕೃಷ್ಣ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗಿರುವುದೇನೋ ಸರಿ. ಇವರಿಗೆ ಪಕ್ಷದಲ್ಲಿ ಯಾವ ಸ್ಥಾನ ಮಾನ ಸಿಗುತ್ತೆ? ಚುನಾವಣೆ ಸ್ಪರ್ಧೆ ಮಾಡುತ್ತಾರಾ? ಚುನಾವಣೆ ನಿಲ್ಲುತ್ತಾರಾ? ಇಲ್ಲಾ ಪಕ್ಷದ ಏಳಿಗೆಗಾಗಿ ದುಡಿಯುತ್ತಾರಾ? ಆಪ್ ಪಕ್ಷ ಇವರನ್ನು ಜನಪ್ರಿಯ ವ್ಯಕ್ತಿ ಅನ್ನುವ ಕಾರಣಕ್ಕೆ ಸೇರಿಸಿಕೊಂಡಿದೆಯಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಹೀಗಾಗಿ ಟೆನ್ನಿಸ್ ರಾಜಕೀಯ ಜರ್ನಿಯಲ್ಲಿ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸಲೇಬೇಕಿದೆ.


Click it and Unblock the Notifications











