ಸಾವಿರ ಜನರನ್ನು ಹಿಂದೆ ಇಟ್ಟುಕೊಂಡವನು ಲೀಡರ್ ಅಲ್ಲ: ಶಿವರಾಜ್ ಕುಮಾರ್
ಅಂಬರೀಶ್ ನಿಧನದ ಬಳಿಕ ಕನ್ನಡ ಚಿತ್ರರಂಗದ ನಾಯಕತ್ವದಲ್ಲಿ ಉಂಟಾಗಿದ್ದ ಖಾಲಿ ಜಾಗವನ್ನು ನಟ ಶಿವರಾಜ್ ಕುಮಾರ್ ತುಂಬಲು ಮುಂದಾಗಿದ್ದಾರೆ. ಚಿತ್ರರಂಗದ ನಾಯಕತ್ವದ ವಿಚಾರ ಹಲವು ಸಮಯದಿಂದ ಚರ್ಚೆಯಲ್ಲಿದೆ. ಚಿತ್ರರಂಗದ ಒಳಗಿನ ಮತ್ತು ಹೊರಗಿನ ಬಿಕ್ಕಟ್ಟುಗಳಿಗೆ ಎಲ್ಲರನ್ನೂ ಒಂದೆಡೆ ಸೇರಿಸಿ ಒಗ್ಗಟ್ಟಿನ ಮಂತ್ರ ಜಪಿಸಿ, ಪ್ರತಿಯೊಬ್ಬರೂ ಒಪ್ಪುವಂತಹ ತೀರ್ಮಾನ ತೆಗೆದುಕೊಳ್ಳಲು ನಾಯಕನ ಅಗತ್ಯವಿದೆ.
Recommended Video
ಅಂಬರೀಶ್ ಅವರಿಂದ ತೆರವಾದ ನಾಯಕನ ಸ್ಥಾನಕ್ಕೆ ಈ ಹಿಂದಿನಿಂದಲೂ ಶಿವರಾಜ್ ಕುಮಾರ್ ಹೆಸರು ಕೇಳಿಬರುತ್ತಿದೆ. ಡಬ್ಬಿಂಗ್ ಹೋರಾಟ ಮತ್ತು ಕಾವೇರಿ ನೀರಿನ ವಿವಾದದ ಹೋರಾಟಗಳಲ್ಲಿ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸಭೆಗಳು ನಡೆದಿದ್ದರೂ, ಅಲ್ಲಿ ಒಗ್ಗಟ್ಟು ಕಂಡಿರಲಿಲ್ಲ. ಆದರೆ, ಕೊರೊನಾ ವೈರಸ್ ಹಾವಳಿಯಿಂದ ಚಿತ್ರರಂಗ ತತ್ತರಿಸಿರುವ ಸನ್ನಿವೇಶದಲ್ಲಿ ಎಲ್ಲರೂ ಒಂದುಗೂಡಿ ತೀರ್ಮಾನ ತೆಗೆದುಕೊಳ್ಳುವ ಅಗತ್ಯವಿದೆ. ಅದಕ್ಕೆ ಒಬ್ಬ ನಾಯಕರ ಅನಿವಾರ್ಯತೆಯೂ ಇದೆ. ಹೀಗಾಗಿ ಹಿರಿಯ ನಟ ಶಿವರಾಜ್ ಕುಮಾರ್ ಅವರನ್ನು ನಾಯಕರನ್ನಾಗಿ ಚಿತ್ರರಂಗದ ವಿವಿಧ ವಿಭಾಗಗಳ ಪ್ರಮುಖರು ಆಯ್ಕೆ ಮಾಡಿದ್ದಾರೆ. ಅವರ ಮುಂದಾಳತ್ವದಲ್ಲಿ ಚಿತ್ರೋದ್ಯಮವನ್ನು ಕೊಂಡೊಯ್ಯಲು ತೀರ್ಮಾನಿಸಿದ್ದಾರೆ. ಮುಂದೆ ಓದಿ...

ಚಿತ್ರರಂಗದ ವಿರೋಧವಿಲ್ಲ
ಈ ಮುಂಚೆಯಿಂದಲೂ ರಾಜ್ ಕುಮಾರ್ ಅವರ ಮನೆಯಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಈಗ ಚಿತ್ರೋದ್ಯಮಕ್ಕೆ ನಾಯಕನ ಅಗತ್ಯವಿದೆ. ಹೀಗಾಗಿ ಶಿವರಾಜ್ ಕುಮಾರ್ ಅವರನ್ನು ನಾಯಕತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದೇವೆ. ಚಿತ್ರರಂಗದಲ್ಲಿ ಇದಕ್ಕೆ ಸ್ವಲ್ಪವೂ ವಿರೋಧವಿಲ್ಲದೆ, ನೂರಕ್ಕೆ ಇನ್ನೂರರಷ್ಟು ಮಂದಿ ಅನುಮೋದನೆ ನೀಡಿದ್ದಾರೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.

ಸಾವಿರ ಜನರು ಹಿಂದಿರುವವರಲ್ಲ
ಎಲ್ಲರೂ ನಾಯಕತ್ವ ವಹಿಸಿಕೊಳ್ಳಿ ಎಂದಿದ್ದಾರೆ. ಸಾವಿರ ಜನರನ್ನು ಹಿಂದೆ ಇಟ್ಟುಕೊಂಡು ಮುಂದೆ ಹೋಗೋನು ನಾಯಕ ಆಗುವುದಿಲ್ಲ. ಎಲ್ಲರನ್ನೂ ಸರಿಸಮಾನವಾಗಿ ತೆಗೆದುಕೊಂಡು ಹೋಗುವವನು ಲೀಡರ್ ಎಂದು ಶಿವರಾಜ್ ಕುಮಾರ್ ಹೇಳಿದರು.

ಕಾಪಾಡಲು ಜನರಿದ್ದಾರೆ
ಎಲ್ಲರ ಜತೆಯಲ್ಲಿ ಇವರಲ್ಲಿ ಒಬ್ಬನಾಗಿ ಸೋ ಕಾಲ್ಡ್ ನಾಯಕ ಎಂದಿರುವುದರಿಂದ ಒಪ್ಪಿಕೊಳ್ಳುತ್ತೇನೆಯೇ ಹೊರತು, ನಾಯಕ ಎಂದು ದುರಹಂಕಾರದಿಂದ ಹೋಗುವುದಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಹೋಗೋಣ. ಉದ್ಯಮ ಬೆಳೆದಿರಲು ಅಭಿಮಾನಿಗಳು ಕಾರಣ. ಕನ್ನಡ ಚಿತ್ರೋದ್ಯಮಕ್ಕೆ ಏನೂ ಆಗುವುದಿಲ್ಲ. ಕಾಪಾಡಲು ಜನರು ಇದ್ದೇ ಇರುತ್ತಾರೆ ಎಂದು ಶಿವರಾಜ್ ಕುಮಾರ್ ಹೇಳಿದರು.

ಸಭೆಯಲ್ಲಿ ಯಾರೆಲ್ಲ ಭಾಗಿ?
ಶಿವರಾಜ್ ಕುಮಾರ್ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಸಾಧು ಕೋಕಿಲಾ, ಜಯಣ್ಣ, ಸೂರಪ್ಪ ಬಾಬು, ಗುರು ಕಿರಣ್, ಕೆ. ಮಂಜು, ಭೋಗೇಂದ್ರ, ಉಮೇಶ್ ಬಣಕಾರ್, ಭಾ.ಮಾ. ಹರೀಶ್, ಪ್ರವೀಣ್ ಕುಮಾರ್, ರಾಮು, ಚಿನ್ನೇಗೌಡ, ಜೆ.ಜೆ. ಕೃಷ್ಣ, ಕೆ.ಪಿ. ಶ್ರೀಕಾಂತ್ ಮುಂತಾದವರು ಪಾಲ್ಗೊಂಡಿದ್ದರು.

ಕಾರ್ಮಿಕರಲ್ಲಿ ಭರವಸೆ
ಕೊರೊನಾ ವೈರಸ್ ಸಂಕಷ್ಟದಿಂದ ಚಿತ್ರರಂಗದ ಚಟುವಟಿಕೆಗಳನ್ನೇ ನೆಚ್ಚಿಕೊಂಡಿದ್ದ ನೂರಾರು ಕುಟುಂಬಗಳು ದುಡಿಮೆಯಿಲ್ಲದೆ ತೀವ್ರ ತೊಂದರೆಯಲ್ಲಿವೆ. ಆರಂಭದಲ್ಲಿ ಹಣಕಾಸಿನ ಮತ್ತು ದಿನಸಿ ಸಹಾಯಗಳನ್ನು ಮಾಡಿದ್ದರೂ ಅದು ಸಾಲುತ್ತಿಲ್ಲ. ಈಗಲೂ ಚಿತ್ರೀಕರಣ ಆರಂಭವಾಗದೆ ಇರುವುದರಿಂದ ಅವರ ಕಷ್ಟಗಳು ಮುಗಿದಿಲ್ಲ. ತೆಲುಗು ಚಿತ್ರರಂಗದಲ್ಲಿ ಹಿರಿಯ ನಟ ಚಿರಂಜೀವಿ ಅವರ ನಿವಾಸಕ್ಕೆ ಸಚಿವರೇ ತೆರಳಿ ಚಿತ್ರರಂಗಕ್ಕೆ ಸಹಾಯ ನೀಡುವ ಕುರಿತು ಮಾತನಾಡಿದ್ದರು. ಇಲ್ಲಿ ಹಾಗೆ ನಡೆಯದೆ ಇದ್ದರೂ ಚಿತ್ರೋದ್ಯಮ ಒಂದಾಗಿ ಶಿವರಾಜ್ ಕುಮಾರ್ ನಾಯಕತ್ವದಲ್ಲಿ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿರುವುದು ಸಿನಿ ಕಾರ್ಮಿಕರಲ್ಲಿ ಭರವಸೆ ಮೂಡಿಸಿದೆ.


Click it and Unblock the Notifications











