ಕೋಡಿಶ್ರೀಗಳಿಗೆ ಅರಿವಿತ್ತೇ ವಿಷ್ಣುವರ್ಧನ್ ಸಾವಿನ ಮುನ್ಸೂಚನೆ?
ತಾಳೇಗರಿಯ ಮೂಲಕ ರಾಜಕೀಯ, ನೈಸರ್ಗಿಕ ಪ್ರಕೋಪಗಳ ಬಗ್ಗೆ ಭವಿಷ್ಯ ನುಡಿಯುವ ಕೋಡಿಮಠದ ಶ್ರೀಗಳಿಗೆ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಾವಿನ ಬಗ್ಗೆ ಮುನ್ಸೂಚನೆ ಇತ್ತೇ?
ಶ್ರೀಗಳಿಗೆ ಮತ್ತು ಖುದ್ದು ವಿಷ್ಣುವರ್ಧನ್ ಗೆ ತನ್ನ ಸಾವಿನ ಬಗ್ಗೆ ಮುನ್ಸೂಚನೆಯಿತ್ತು ಎನ್ನುವ ಸುದ್ದಿಯನ್ನು ಪ್ರಜಾ ಟಿವಿ ತನ್ನ ಭಾನುವಾರದ (ಆ 23) 'ಮೃತ್ಯು ಮರ್ಮ' ಎನ್ನುವ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿದೆ.
ಕಾರ್ಯಕ್ರಮದಲ್ಲಿ ವಿಷ್ಣು ಬದುಕಿನ ಕೆಲವೊಂದು ಕುತೂಹಲಕಾರಿ ಅಂಶಗಳನ್ನು ಪ್ರಸಾರ ಮಾಡಲಾಗಿತ್ತು. ನಿರ್ಮಾಪಕರು ಮತ್ತು ನಿರ್ದೇಶಕರ ಮೇಲೆ ಎಂದೂ ಒತ್ತಡ ಹೇರದ ವಿಷ್ಣು, ಆಪ್ತರಕ್ಷಕ ಚಿತ್ರದ ಶೂಟಿಂಗ್ ಅನ್ನು ಮಾತ್ರ ಆದಷ್ಟು ಬೇಗ ಮುಗಿಸುವಂತೆ ಸೂಚಿಸಿದ್ದರಂತೆ. (ವಿಷ್ಣು ಸ್ಮಾರಕ ವಿವಾದಕ್ಕೆ ತೆರೆ)
ತನ್ನ ಬದುಕಿನ ಕೊನೆಯ ದಿನಗಳಲ್ಲಿ ಆಧ್ಯಾತ್ಮಿಕದತ್ತ ಮುಖ ಮಾಡಿದ್ದ ವಿಷ್ಣುವರ್ಧನ್ ಅವರನ್ನು ಉಡುಪಿಯ ಬನ್ನಂಜೆ ಗೋವಿಂದಚಾರ್ಯ ಶಿಷ್ಯನಾಗಿ ಸ್ವೀಕರಿಸಿದ್ದರು. ಬನ್ನಂಜೆಯವರಿಂದ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹಲವು ವಿಚಾರಗಳನ್ನು ಕಲಿತು, ತನ್ನ ಜೀವನದಲ್ಲೂ ಅದನ್ನು ವಿಷ್ಣು ಅಳವಡಿಸಿಕೊಂಡಿದ್ದರು.
ಹಿರಿಯ ಗಾಯಕ ಸಿ ಅಶ್ವಥ್ ಸಾವಿನ ಸುದ್ದಿ ಕೇಳಿದಾಗ ವಿಷ್ಣು, ತೀವ್ರ ಭಾವೋದ್ವೇಗಕ್ಕೆ ಒಳಗಾಗಿ, ಗಂಟೆಗಟ್ಟಲೆ ಧ್ಯಾನದಲ್ಲಿ ತೊಡಗಿದ್ದರು ಎಂದು ವಿಷ್ಣು ಆಪ್ತರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ವಿಷ್ಣು ಸಾವಿನ ಬಗ್ಗೆ ಮುನ್ಸೂಚನೆಯಿತ್ತು ಎನ್ನುವ ರೀತಿಯಲ್ಲಿ ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಮುಂದೆ ಓದಿ..

ಶಿರಡಿ ಸಾಯಿಬಾಬ ಚಿತ್ರ
ಶಿರಡಿ ಸಾಯಿಬಾಬನ ಕುರಿತಾದ ಚಿತ್ರದಲ್ಲಿ ನಟಿಸಬೇಕು, ಇದೇ ನನ್ನ ವೃತ್ತಿ ಬದುಕಿನ ಕೊನೆಯ ಚಿತ್ರವಾಗ ಬೇಕೆಂದು ವಿಷ್ಣು ಬಯಸಿದ್ದರಂತೆ. ಈ ಸಂಬಂಧ ನಿರ್ದೇಶಕ ಎಸ್ ನಾರಾಯಣ್ ಅವರ ಬಳಿಯೂ ತಮ್ಮ ಆಸೆಯನ್ನು ತೋಡಿಕೊಂಡಿದ್ದರಂತೆ. ತೆಲುಗಿನ ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ ಅವರ ಬಳಿ ಈ ಬಗ್ಗೆ ವಿಷ್ಣು ಚರ್ಚಿಸಿದ್ದರೂ ಕೂಡಾ ಎಂದು ವಿಷ್ಣು ಆಪ್ತರೊಬ್ಬರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಆಪ್ತರಕ್ಷಕ ಶೂಟಿಂಗ್
ಆಪ್ತರಕ್ಷಕ ಚಿತ್ರದ ಶೂಟಿಂಗ್ ವೇಳೆ ನಡೆದ ಕೆಲವೊಂದು ಘಟನೆಗಳಿಂದ ವಿಷ್ಣು ವಿಚಲಿತರಾಗಿದ್ದರು. ಹೆಚ್ಚುಕಮ್ಮಿ ಪ್ರತೀದಿನ ಸೆಟ್ ನಲ್ಲಿ ಹೋಮಹವನ ನಡೆಸಲಾಗುತ್ತಿತ್ತಂತೆ. ಇದಕ್ಕೆ ಪೂರಕ ಎನ್ನುವಂತೆ ಬೆಂಗಳೂರು ಅರಮನೆ ಆವರಣದಲ್ಲಿ ನಡೆದ ಚಿತ್ರದ ಶೂಟಿಂಗ್ ವೇಳೆ ವಿಷ್ಣು, ಕುದುರೆಯಿಂದ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದರು.

ದಾನಧರ್ಮ
ಮನೆಯಿಂದ ಹೊರ ನಡೆಯುವಾಗ ಅವರ ಕಾರಿನಲ್ಲಿ ಹಣ್ಣುಹಂಪಲು, ಚಾಕೋಲೇಟ್, ಶಾಲು, ದುಡ್ಡು ಇದ್ದೇ ಇರುತ್ತಿತ್ತು. ಬಡವರಿಗೆ, ಅಂಗವಿಕಲರಿಗೆ ವಿಷ್ಣು ದಾನ ಮಾಡುತ್ತಲೇ ಇದ್ದರು. ಬಲಗೈ ದಾನ ಎಡಗೈಗೆ ಗೊತ್ತಾಗದಂತೇ ವಿಷ್ಣು ತಾನು ಮಾಡುತ್ತಿದ್ದ ದಾನಧರ್ಮಗಳನ್ನು ಯಾರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ.

ಕೋಡಿಮಠಕ್ಕೆ ಭೇಟಿ
ಮೂರ್ನಾಲ್ಕು ಬಾರಿ ಕೋಡಿ ಮಠಕ್ಕೆ ಭೇಟಿ ನೀಡಿದ್ದ ವಿಷ್ಣು, ಕೋಡಿಶ್ರೀಗಳ ಬಳಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ತನ್ನ ಮನದಾಳದ ಮಾತನ್ನು ತೋಡಿಕೊಂಡಿದ್ದರಂತೆ. ಅದಕ್ಕಾಗಿ ತೀವ್ರ ಪರಿಶ್ರಮ ಅಗತ್ಯ ಎಂದು ವಿಷ್ಣುಗೆ ಹೇಳಿದ್ದೆ ಎಂದು ಶ್ರೀಗಳು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಹುಟ್ಟೂರು ಮೈಸೂರು
ಪ್ರತೀ ಬಾರಿ ಮಠಕ್ಕೆ ಬರುತ್ತಿದ್ದ ವಿಷ್ಣುಗೆ ಹೋಗಿ ಬಾ ಅನ್ನುತ್ತಿದ್ದೆ. ಅವನ ಸಾವು ಸಂಭವಿಸಿದ ಸ್ವಲ್ಪ ದಿನಗಳ ಮುನ್ನ ಫೋನ್ ಮಾಡಿ, ಗುರುಗಳೇ ನನ್ನ ಹುಟ್ಟೂರು ಮೈಸೂರಿಗೆ ಹೋಗುತ್ತಿದ್ದೇನೆ ಎಂದಿದ್ದ. ಸರಿ ಹೋಗು ಎಂದಿದ್ದೆ. ಯಾಕೆ ಗುರುಗಳೇ ಹೋಗಿಬಾ ಅನ್ನುತ್ತಿಲ್ಲ ಎಂದು ನನ್ನನ್ನು ಪ್ರಶ್ನಿಸಿದ. ಸರೀ ಹೋಗು ಎಂದು ಮತ್ತೆ ನನ್ನ ಬಾಯಿಂದ ಅದೇ ಪದಗಳು ಬಂತು ಎಂದು ಕೋಡಿಶ್ರೀಗಳು ಹೇಳುವ ಮೂಲಕ, ವಿಷ್ಣು ಸಾವಿನ ಮುನ್ಸೂಚನೆಯಿತ್ತು ಎನ್ನುವ ರೀತಿಯಲ್ಲಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಜೀವನದ ಕೊನೆದಿನಗಳು
ತನ್ನ ಜೀವನದ ಕೊನೆಯ ದಿನಗಳನ್ನು ಅವನು ಮೈಸೂರಿನಲ್ಲಿ ಕಳೆಯಲು ಬಯಸಿದ್ದ. ಅವನ ಆಸೆಯಂತೆ ಮೈಸೂರಿನಲ್ಲೇ ಆತನ ಸಾವಾಯಿತು. ದೇವರು,ದಾನಧರ್ಮಗಳಲ್ಲಿ ವಿಷ್ಣು ವಿಶೇಷವಾಗಿ ತೊಡಗಿಕೊಂಡಿದ್ದ ಎಂದು ಕೋಡಿಶ್ರೀಗಳು ಹೇಳಿದ್ದಾರೆ.


Click it and Unblock the Notifications











