ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿಲ್ವರ್ ಜ್ಯುಬಿಲಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐತಿಹಾಸಿಕ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಚಿತ್ರ ಯಶಸ್ವಿ 25ನೇ ವಾರ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ತ್ರಿಭುವನ್ ಚಿತ್ರಮಂದಿರದಲ್ಲಿ 25 ವಾರಗಳನ್ನು ಪೂರೈಸಿದೆ.
ಕೆ.ಎಂ.ದೊಡ್ಡಿಯ ಸುಮ, ಚಿಕ್ಕಮಂಡೆ ಸಾತನೂರಿನ ಶ್ರೀ ವೆಂಕಟೇಶ್ವರ, ಹುಬ್ಬಳ್ಳಿಯ ರೂಪಂ, ಬೆಳವಾವಿಯ ಚಿತ್ರ, ಧಾರವಾಡದ ಪದ್ಮ, ಕಿತ್ತೂರಿನ ಶಿವಶಕ್ತಿ, ಅಣ್ಣಿಗೇರಿಯ ಜನತಾ, ತಿಳುವಳಿಯ ಮಹಾಂತೇಶ್ ಹಾಗೂ ಆದೋಣಿಯ ರಾಜ್ ಚಿತ್ರಮಂದಿರಗಳಲ್ಲಿ ಸಿಲ್ವರ್ ಜ್ಯುಬಿಲಿ ಆಚರಿಸಿಕೊಳ್ಳುತ್ತಿದೆ. (ಚಿತ್ರ ವಿಮರ್ಶೆ ಓದಿ)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೃತ್ತಿಜೀವನದಲ್ಲಿ 'ರಾಯಣ್ಣ' ಚಿತ್ರ ಹೊಸದೊಂದು ಮೈಲಿಗಲ್ಲನ್ನು ಸೃಷ್ಟಿಸಿದೆ. ಫೆಬ್ರವರಿ 5ನೇ ತಾರೀಖಿಗೆ ಈ ಐತಿಹಾಸಿಕ ಚಿತ್ರ ಶತದಿನೋತ್ಸವ ಆಚರಿಸಿಕೊಂಡಿತು. ಈಗ 25ನೇ ವಾರಕ್ಕೆ ಅಡಿಯಿಟ್ಟಿದೆ.'ರಾಯಣ್ಣ' ಚಿತ್ರ ಕೇವಲ ಕನ್ನಡಿಗರನ್ನಷ್ಟೇ ಅಲ್ಲದೆ ಪರಭಾಷಾ ಚಿತ್ರರಸಿಕರನ್ನೂ ಆಕರ್ಷಿಸುತ್ತಿದೆ. ನಾಗಣ್ಣ ನಿರ್ದೇಶನ, ಕೇಶವಾದಿತ್ಯ ಸಂಭಾಷಣೆ, ರಮೇಶ್ ಬಾಬು ಅವರ ಛಾಯಾಗ್ರಹಣವಿರುವ ಚಿತ್ರ ಪ್ರೇಕ್ಷಕರನ್ನು ಸ್ವಾತಂತ್ರ್ಯಪೂರ್ವಕ್ಕೆ ಕರೆದೊಯ್ಯತ್ತದೆ.
ಚಿತ್ರದ ತಾರಾಗಣದಲ್ಲಿ ನಿಖಿತಾ ತುಕ್ರಲ್, ಶ್ರೀನಿವಾಸಮೂರ್ತಿ, ಶೋಭರಾಜ್, ಉಮಾಶ್ರೀ, ದೊಡ್ಡಣ್ಣ, ಸಿ.ಆರ್.ಸಿಂಹ, ರಮೇಶ್ ಭಟ್, ಶಿವಕುಮಾರ್, ಧರ್ಮ, ಸೌರವ್, ಸತ್ಯಜಿತ್, ಬ್ರಹ್ಮಾವರ್, ಕರಿಬಸವಯ್ಯ, ಕಿಲ್ಲರ್ ವೆಂಕಟೇಶ್, ಅರವಿಂದ್ ಬಿರೇದಾರ್, ರಾಜೇಶ್ ಹಾಗೂ ವಿಜಯ ಸಾರಥಿ ಅಭಿನಯಿಸುತ್ತಿದ್ದಾರೆ.
ಸರಿಸುಮಾರು ರು.30 ಕೋಟಿ ಬಜೆಟ್ನಲ್ಲಿ ಚಿತ್ರವನ್ನು ನಿರ್ಮಿಸಲಾಗಿದ್ದು, 77 ವರ್ಷಗಳ ಕನ್ನಡ ಸಿನಿ ಇತಿಹಾಸದಲ್ಲೇ ಭಾರಿ ಬಜೆಟ್ ಚಿತ್ರವಾಗಿ ಹೊಸ ದಾಖಲೆಗೆ ಕಾರಣವಾಗಿದೆ. ಒಟ್ಟು 175 ದಿನಗಳ ಕಾಲ ಚಿತ್ರೀಕರಣಗೊಂಡಿರುವ ಈ ಚಿತ್ರದ ನಿರ್ಮಾಪಕರು ಆನಂದ್ ಅಪ್ಪುಗೋಳ್. (ಏಜೆನ್ಸೀಸ್)


Click it and Unblock the Notifications












