ಕಿಚ್ಚ ಸುದೀಪ್ ಚಿತ್ರಕ್ಕಾಗಿ ಶಿವಣ್ಣನ ಚಿತ್ರ ಎತ್ತಂಗಡಿ
ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಅಭಿನಯದ 'ಲಕ್ಷ್ಮಿ' ಚಿತ್ರವನ್ನು ವೀರೇಶ್ ಚಿತ್ರಮಂದಿರದಿಂದ ಎತ್ತಂಗಡಿ ಮಾಡಲಾಗಿದೆ. ಅದೇ ಚಿತ್ರಮಂದಿರದಲ್ಲಿ ಜ.25ರಂದು ಸುದೀಪ್ ಅಭಿನಯದ 'ವರದನಾಯಕ' ತೆರೆಕಾಣುತ್ತಿದ್ದು ಸ್ಯಾಂಡಲ್ ವುಡ್ ನಲ್ಲಿ ಬಿಗ್ ಪೈಟ್ ಆರಂಭವಾಗಿದೆ.
ಕಳೆದ ವಾರ ಬೆಂಗಳೂರು ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರದಲ್ಲಿ ಲಕ್ಷ್ಮಿ ಚಿತ್ರ ಬಿಡುಗಡೆಯಾಗಿತ್ತು. ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದರೂ ತಮ್ಮ ಚಿತ್ರವನ್ನು ಎತ್ತಂಗಡಿ ಮಾಡಿದ್ದಾರೆ ಎಂದು ಚಿತ್ರತಂಡ ಆರೋಪಿಸಿದೆ. ಈಗ ಅದೇ ಜಾಗಕ್ಕೆ ವರದನಾಯಕ ಬರುತ್ತಿರುವುದು ಸ್ಯಾಂಡಲ್ ವುಡ್ ನಟದಿಗ್ಗಜರಿಬ್ಬರ ನಡುವೆ ನೇರಾನೇರ ಪೈಪೋಟಿ ಎದುರಾಗಿದೆ. (ಲಕ್ಷ್ಮಿ ಚಿತ್ರವಿಮರ್ಶೆ ಓದಿ)
ಈಗ 'ಲಕ್ಷ್ಮಿ' ಚಿತ್ರವನ್ನು ಮಿನಿ ವೀರೇಶ್ ಚಿತ್ರಮಂದಿರಕ್ಕೆ ಎತ್ತಂಗಡಿ ಮಾಡಲಾಗಿದೆ. ಈ ಸಂಬಂಧ ಚಿತ್ರತಂಡ ಹಾಗೂ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಕರ್ನಾಟಕ ಚಲನಚಿತ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಂಡಳಿ ಸಭೆ ನಡೆಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದೆ.
'ಲಕ್ಷ್ಮಿ' ಚಿತ್ರದ ನಿರ್ದೇಶಕ ರಾಘವ ಲೋಕಿ ಅವರು ಮಾತನಾಡುತ್ತಾ, "ತಮ್ಮ ಚಿತ್ರ ವೀರೇಶ್ ಚಿತ್ರಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದರೂ ಎತ್ತಂಗಡಿ ಮಾಡಿದ್ದಾರೆ. ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಚಿತ್ರವನ್ನು ಏಕಾಏಕಿ ಎತ್ತಂಗಡಿ ಮಾಡುವುದು ಎಷ್ಟು ಸರಿ" ಎಂದು ಅವರು ಪ್ರಶ್ನಿಸಿದ್ದಾರೆ.
ಈ ಹಿಂದೆಲ್ಲಾ ಕನ್ನಡ ಚಿತ್ರಗಳಿಗೆ ಪರಭಾಷಾ ಚಿತ್ರಗಳು ಪೈಪೋಟಿ ನೀಡುತ್ತಿದ್ದವು. ಈಗ ಕನ್ನಡ ಚಿತ್ರಕ್ಕೆ ಮತ್ತೊಂದು ಕನ್ನಡ ಚಿತ್ರ ಸವಾಲೊಡ್ಡಿರುವುದು ವಿಶೇಷ. ಒಟ್ಟಾರೆಯಾಗಿ 'ಲಕ್ಷ್ಮಿ' ಹಾಗೂ 'ವರದನಾಯಕ' ಚಿತ್ರಗಳ ನಡುವಿನ ಜಗಳ ಮೂರನೆಯ ಚಿತ್ರ 'ವಿಶ್ವರೂಪಂ'ಗೆ ಲಾಭವಾಗದಿದ್ದರೆ ಅಷ್ಟೇ ಸಾಕು ಎನ್ನುತ್ತಿದ್ದೆ ಕನ್ನಡ ಚಿತ್ರೋದ್ಯಮ. (ಒನ್ಇಂಡಿಯಾ ಕನ್ನಡ)


Click it and Unblock the Notifications











