'ಪರಿಮಳ ಲಾಡ್ಜ್' ಮತ್ತೆ ಓಪನ್: ದಿ.ಬುಲೆಟ್ ಪ್ರಕಾಶ್ ನೆನೆದು ನಿರ್ದೇಶಕರ ಭಾವನಾತ್ಮಕ ಪತ್ರ!
ಸ್ಯಾಂಡಲ್ವುಡ್ನಲ್ಲಿ ಕುಚೇಷ್ಟೆ ಸಿನಿಮಾಗಳನ್ನೇ ಹೆಚ್ಚಾಗಿ ನಿರ್ದೇಶಿಸುವ ವಿಜಯ್ ಪ್ರಸಾದ್ ಮತ್ತೊಂದನ್ನು ಕೈಗೆತ್ತಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆನೇ 'ಪರಿಮಳ ಲಾಡ್ಜ್' ಅನ್ನೋ ಸಿನಿಮಾ ಸೆಟ್ಟೇರಿತ್ತು. ಆದರೆ, ಈ ಸಿನಿಮಾದ ತುಣುಕು ರಿಲೀಸ್ ಆದ ಬಳಿಕ ಸುದ್ದಿಯೇ ಇರಲಿಲ್ಲ.
'ಪರಿಮಳ ಲಾಡ್ಜ್' ಸಿನಿಮಾದ ತುಣುಕು ರಿಲೀಸ್ ಆಗುತ್ತಿದ್ದಂತೆ ವಿಜಯ್ ಪ್ರಸಾದ್ 'ಪೆಟ್ರೋಮ್ಯಾಕ್ಸ್' ಹಾಗೂ 'ತೋತಾಪುರಿ'ನಲ್ಲಿ ಬ್ಯುಸಿಯಾಗಿಬಿಟ್ರು. ನೀನಾಸಂ ಸತೀಶ್ ಹಾಗೂ ಹರಿಪ್ರಿಯಾ ಈ ಸಿನಿಮಾದಲ್ಲಿ ನಟಿಸಿದ್ದರು. ಈಗ ಮತ್ತೆ 'ಪರಿಮಳ ಲಾಡ್ಜ್' ಸಿನಿಮಾದ ಕಥೆ ಹೆಣೆಯುವುದಕ್ಕೆ ಕೂತಿದ್ದಾರೆ.
ಈ ವೇಳೆ ನಿರ್ದೇಶಕ ವಿಜಯ್ ಪ್ರಸಾದ್ ಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜ ದಿವಂಗತ ಬುಲೆಟ್ ಪ್ರಕಾಶ್ರನ್ನು ನೆನಪಿಸಿಕೊಂಡಿದ್ದಾರೆ. ಅವರನ್ನು ನೆನೆದು ಫೇಸ್ಬುಕ್ನಲ್ಲಿ ಪುಟ್ಟ ಪತ್ರವೊಂದನ್ನು ಬರೆದುಕೊಂಡಿದ್ದಾರೆ. ಅದರ ಸಾರಾಂಶ ಹೀಗಿದೆ ಮುಂದೆ ಓದಿ.

'ಪರಿಮಳ ಲಾಡ್ಜ್' ಮತ್ತೆ ಓಪನ್
'ತೋತಾಪುರಿ' ಹಾಗೂ 'ಪೆಟ್ರೋಮ್ಯಾಕ್ಸ್' ಸಿನಿಮಾ ಸೋಲಿನ ಬಳಿಕ ನಿರ್ದೇಶಕರು ಮತ್ತೆ 'ಪರಿಮಳ ಲಾಡ್ಜ್' ಓಪನ್ ಮಾಡಿದ್ದಾರೆ. ನೀನಾಸಂ ಸತೀಶ್, ಲೂಸ್ ಮಾದ, ದಿ.ಬುಲೆಟ್ ಪ್ರಕಾಶ್, ಸುಮನ್ ರಂಗನಾಥ್, ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾ ಚಿಕ್ಕದೊಂದು ತುಣುಕನ್ನು ಮೂರು ವರ್ಷಗಳ ಹಿಂದೆ ರಿಲೀಸ್ ಮಾಡಿದ್ದರು. ಅಲ್ಲಿಂದ ಇಲ್ಲಿವರೆಗೂ ಕ್ಲೋಸ್ ಆಗಿದ್ದ 'ಪರಿಮಳ ಲಾಡ್ಜ್' ಮತ್ತೆ ಓಪನ್ ಆಗಿದ್ದು ಬುಲೆಟ್ ಪ್ರಕಾಶ್ ಪಾತ್ರವನ್ನು ನೆನಪಿಸಿಕೊಂಡಿದ್ದಾರೆ. ಬುಲೆಟ್ ನಿರ್ವಹಿಸಬೇಕಿದ್ದ 'ಗುಡ್ಡೆ ಮಾಂಸ' ಪಾತ್ರದ ಬಗ್ಗೆ ಪುಟ್ಟ ಪತ್ರ ಬರೆದಿದ್ದಾರೆ.

'ನನ್ನ ಹಂಬಲ ಟ್ರೈಲರ್ಗಷ್ಟೇ ಸೀಮಿತವಾಯ್ತು'
"ನಮಸ್ಕಾರ ಸರ್, ಯಾರಿಗೇ ಪತ್ರ ಬರೆದರೂ ಅಥವಾ ಸಿಕ್ಕರೂ ಮೊದಲಿಗೆ ಹೇಗಿದ್ದೀರಿ, ಕ್ಷೇಮವೇ ಎಂದು ಕೇಳುವುದು ವಾಡಿಕೆ. ಈಗಲೂ ನೀವು ನಮ್ಮೆಲ್ಲರ ಮನಸಿನಲ್ಲೇ ಇರುವುದರಿಂದ ಮತ್ತೇ ಮೇಲಿನ ಪ್ರಶ್ನೆಯನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ ಜೊತೆಗೆ ಸೌಖ್ಯವಾಗೂ ಇದ್ದೀರೆಂದು ನಂಬಿದ್ದೇನೆ. ನೀವು ನನಗೆ ಆಗಾಗ ನೆನಪಾಗುತ್ತಿರಿ. ಹಾಗೆ ನೆನಪಾದಾಗಲೆಲ್ಲಾ ನಿಮ್ಮ ಕಾಮಿಡಿ ದೃಶ್ಯದ ತುಣುಕುಗಳನ್ನ ನೋಡಿ ಮೌನವಾಗಿ ಬಿಡುತ್ತೇನೆ. ಗೆಳೆಯ ಚಿತ್ರದಲ್ಲಿ ನನಗೆ ಸಿಕ್ಕಾಪಟ್ಟೆ ಇಷ್ಟವಾಗಿ ಹೋದಿರಿ. ನಿಮ್ಮೊಳಗಿನ ಹಾಸ್ಯ ಸಮಯದ ಪ್ರಜ್ಞೆ ಅಮೋಘ. ನಿಮ್ಮ ಜೊತೆ ಕೆಲಸ ಮಾಡಬೇಕೆಂಬ ನನ್ನ ಹಂಬಲ ಮತ್ತು ಆಸೆ ಕೇವಲ ಟ್ರೈಲರ್ಗೇ ಸೀಮಿತವಾಗಿ ಹೋಗಿದ್ದು ತುಂಬಾ ನೋವಿನ ವಿಚಾರ." ಎಂದು ನಿರ್ದೇಶಕ ವಿಜಯ್ ಪ್ರಸಾದ್ ಪುಟ್ಟ ಪತ್ರದಲ್ಲಿ ತಿಳಿಸಿದ್ದಾರೆ.

'ಗುಡ್ಡೆಮಾಂಸ' ನಿಮ್ಮಿಂದ ಮಾತ್ರ ಸಾಧ್ಯ!
"ಇಂದು ಆಫೀಸಿನಲ್ಲಿ ' ಪರಿಮಳ ಲಾಡ್ಜ್ ' ಬರವಣಿಗೆಯಲ್ಲಿ ಇದ್ದೆ. ನಿಮ್ಮ ಪಾತ್ರದ ಬಗ್ಗೆ ಬಂದಾಗ ವಿಪರೀತ ನೆನಪಾದಿರಿ ಹಾಗೆ ಸಂಕಟವೂ ಆಯಿತು. ನೀವು ಇದ್ದಿದ್ದರೆ 'ಗುಡ್ಡೆಮಾಂಸ ' ಪಾತ್ರವನ್ನು ನುಂಗಿ ನೀರು ಕುಡಿದು ಬಿಡುತ್ತಿದ್ದಿರಿ. ನಿಮ್ಮಿಂದ ಮಾತ್ರ ಆ ಶೈಲಿ ಸಾಧ್ಯ...! ನಿಮ್ಮ ನೆನಪಿಗಾಗಿ, ಪ್ರೀತಿಗಾಗಿ ಮತ್ತು ಗೌರವಕ್ಕಾಗಿ ಪಾತ್ರದ ಹೆಸರನ್ನು ಬುಲೆಟ್ ಪ್ರಕಾಶ್ ಅಂತಲೇ ಇಟ್ಟು, ಅಡ್ಡ ಹೆಸರಾಗಿ 'ಗುಡ್ಡೆಮಾಂಸ' ಅಂತ ಉಳಿಸಿಕೊಳ್ಳುತ್ತಿದ್ದೇನೆ." ಎಂದು ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.

'ಇಷ್ಟು ಬೇಗ ಹೋಗಬಾರದಿತ್ತು'
"ಆದರೂ ನೀವು ಇಷ್ಟು ಬೇಗ ಹೋಗಬಾರದಿತ್ತು ಹಾಗೆ ಇನ್ನೂ ಬೆಳಗಿ ಬಾಳಬೇಕಿತ್ತು. ಟ್ರೈಲರ್ ಚಿತ್ರೀಕರಣದ ಸಮಯದಲ್ಲಿ ನಿಮ್ಮ ನಗು, ಮಾತು, ಕೀಟಲೆ, ಚೇಷ್ಟೇ ಎಲ್ಲವೂ ನನ್ನಲ್ಲಿ ಇನ್ನೂ ಹಚ್ಚ ಹಸಿರಾಗೇ ಇದೆ. Missing you sir.." ಎಂದು ವಿಜಯ್ ಪ್ರಸಾದ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.


Click it and Unblock the Notifications











