'ಪದವಿ ಪೂರ್ವ' ಇಷ್ಟ ಆಗದೆ ಇದ್ದರೆ ದುಪ್ಪಟ್ಟು ಹಣ ವಾಪಸ್: ವಿಡಿಯೋ ಬಿಟ್ಟ ಚಿತ್ರತಂಡ!
ಸ್ಯಾಂಡಲ್ವುಡ್ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿದಾಗಲೇ ಇಂತಹದ್ದೊಂದು ಅನುಮಾನ ಮೂಡಿತ್ತು. ಬಿಗ್ ಬಜೆಟ್ ಸಿನಿಮಾಗಳನ್ನು ನೋಡುವುದಕ್ಕೆ ಜನರು ಥಿಯೇಟರ್ಗೆ ಬಂದಂತೆ ಸ್ಮಾಲ್ ಬಜೆಟ್ ಚಿತ್ರಗಳನ್ನು ನೋಡಲು ಬರುತ್ತಾರಾ? ಅನ್ನೋ ಪ್ರಶ್ನೆ ಕಾಡುತ್ತಲೇ ಇತ್ತು.
ಆ ಪ್ರಶ್ನೆಗಳಿಗೆ ಈಗಾಗಲೇ ಉತ್ತರ ಸಿಕ್ಕಿದೆ. ಅದ್ಭುತ ಕಂಟೆಂಟ್ ಇರುವ ಸ್ಮಾಲ್ ಬಜೆಟ್ ಸಿನಿಮಾಗಳನ್ನು ನೋಡುವುದಕ್ಕೆ ಪ್ರೇಕ್ಷಕರು ಥಿಯೇಟರ್ಗೆ ಬರುತ್ತಿಲ್ಲ. ಈಗ ಮತ್ತೊಂದು ಕನ್ನಡ ಸಿನಿಮಾಗೂ ಇದೇ ಪರಿಸ್ಥಿತಿ ಎದುರಾಗಿದೆ. ಅದುವೇ ಯೋಗರಾಜ್ ಭಟ್ ನಿರ್ದೇಶನದ ಪದವಿಪೂರ್ವ.
'ಪದವಿ ಪೂರ್ವ' ನೋಡಿದವರಿಗೆ ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಹೊಸಬರ ಫ್ರೆಶ್ ಸ್ಟೋರಿಗೆ ಪ್ರೇಕ್ಷಕರು ಮನಸೋತ್ತಿದ್ದರು. ಆದರೂ, ಸಿನಿಮಾ ನೋಡಲು ಥಿಯೇಟರ್ಗೆ ಜನರು ಬರುತ್ತಿಲ್ಲ. ಈ ಕಾರಣಕ್ಕೆ ನಿರ್ದೇಶಕರು ಹಾಗೂ ತಂಡ ಸಿನಿಮಾ ಇಷ್ಟ ಆಗದೇ ಇದ್ದಿದ್ರೆ ಟಿಕೆಟ್ನ ದುಪ್ಪಟ್ಟು ಹಣವನ್ನು ಹಿಂತಿರುಗಿಸುವುದಾಗಿ ಹೇಳಿಕೊಂಡಿದ್ದು, ವಿಡಿಯೋವನ್ನು ರಿಲೀಸ್ ಮಾಡಿದೆ.

'ಪದವಿ ಪೂರ್ವ' ನಿರ್ದೇಶಕನ ವಿಡಿಯೋ
ಸ್ಯಾಂಡಲ್ವುಡ್ನಲ್ಲಿ ಬಹುತೇಕ ಹೊಸಬರ ಸಿನಿಮಾ 'ಪದವಿಪೂರ್ವ'ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಕಥೆ, ಚಿತ್ರಕಥೆ, ನಿರ್ದೇಶನ ಎಲ್ಲವೂ ಪ್ರೇಕ್ಷಕರ ಮನಸ್ಸನ್ನು ಮನಸೂರೆಗೊಳಿಸಿತ್ತು. ಆದರೂ, ಜನರು ಹೊಸಬರನ್ನು ನೋಡಲು ಥಿಯೇಟರ್ಗೆ ಬರುತ್ತಿಲ್ಲ. ಹೀಗಾಗಿ ನಿರ್ದೇಶಕ ಹರಿಪ್ರಸಾದ್ ಜಯಣ್ಣ ತಮ್ಮ ತಂಡದೊಂದಿಗೆ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಥಿಯೇಟರ್ ಬಂದು ಸಿನಿಮಾ ನೋಡಿ, ಇಷ್ಟ ಆಗದೇ ಇದ್ದಲ್ಲಿ ಟಿಕೆಟ್ನ ದುಪ್ಪಟ್ಟ ಹಣವನ್ನು ಹಿಂತಿರುಗಿಸುವುದಾಗಿ ಹೇಳಿಕೊಂಡಿದ್ದಾರೆ.

'ದುಪ್ಪಟ್ಟು ಹಣ ವಾಪಾಸ್ ಕೊಡುತ್ತೇವೆ'
" ಹೊಸತಂಡ ಹೊಸ ಪ್ರಯತ್ನವನ್ನು ಮಾಡಿದ್ದೀವಿ. ಎಲ್ಲರಿಂದ ಪ್ರಶಂಸೆಗಳು ಸಿಗುತ್ತಿವೆ. ಸಿನಿಮಾ ಥಿಯೇಟರ್ಗೋಸ್ಕರ ಮಾಡೋದು. ಟಿವಿ, ಓಟಿಟಿ ಎಲ್ಲಾ ಆಮೇಲೆ. ಥಿಯೇಟರ್ಗೆ ಬಂದು ದಯವಿಟ್ಟು ಸಿನಿಮಾ ನೋಡಿ. ನಿಮಗೆ ಯಾವುದೇ ರೀತಿಯಲ್ಲಿ ಮೋಸ ಆಗಲ್ಲ. ಒಂದು ವೇಳೆ ನಿರಾಸೆ ಆಯ್ತು ಅಂದರೆ, ಮೊದಲೇ ಹೇಳಿದ ಹಾಗೆ ಹಣವನ್ನು ವಾಪಾಸ್ ಕೊಡುತ್ತೇವೆ. ಒಂದು ವೇಳೆ ಇಷ್ಟ ಆಯ್ತು ಅಂದರೆ, ಒಂದು ಮೆಸೇಜ್ ಹಾಕಿ. ನೀವು ಪ್ರೋತ್ಸಾಹ ಕೊಟ್ಟಷ್ಟು, ಪ್ರಶಂಸೆ ನೀಡಿದಷ್ಟು ಒಳ್ಳೆ ಸಿನಿಮಾ ಕೊಡುತ್ತೇವೆ." ಎಂದು ನಿರ್ದೇಶಕ ಹರಿಪ್ರಸಾದ್ ವಿಡಿಯೋದಲ್ಲಿ ಹೇಳಿದ್ದಾರೆ.

'ಖಂಡಿತಾ ನಾವು ಕೆಟ್ಟ ಸಿನಿಮಾ ಮಾಡಿಲ್ಲ'
"ಜನರು ಯಾರು ಯಾರು ಸಿನಿಮಾ ನೋಡಿಲ್ಲ. ಮೂರು ದಿನ ಆದ್ಮೇಲೆ ಸಿನಿಮಾ ನೋಡಬೇಕು ಅಂದುಕೊಂಡಿದ್ದೀರ ಅವರು ಇವತ್ತೇ ಬಂದು ನೋಡಿ. ಖಂಡಿತಾ ನಾವು ಕೆಟ್ಟ ಸಿನಿಮಾ ಅಂತೂ ಮಾಡಿಲ್ಲ. ಒಳ್ಳೆ ಪ್ರಯತ್ನವೇ ಮಾಡಿದ್ದೇವೆ. ಆಮೇಲೆ ನಮ್ಮ ಪ್ರಡ್ಯೂಸರ್ಗೆ ಥ್ಯಾಂಕ್ಸ್ ಹೇಳಬೇಕು. ಎಷ್ಟೇ ಕಷ್ಟ ಆಗಿದ್ದರೂ, ನಮ್ಮ ಜೊತೆ ಇದ್ದಾರೆ." ಎಂದು ನಿರ್ದೇಶಕ ಹರಿಪ್ರಸಾದ್ ಜಯಣ್ಣ ಮನವಿ ಮಾಡಿಕೊಂಡಿದ್ದಾರೆ.

ಪದವಿಪೂರ್ವಗೆ ಯೋಗರಾಜ್ ಭಟ್ ನಿರ್ಮಾಪಕ
ನಿರ್ದೇಶಕ ಯೋಗರಾಜ್ ಭಟ್ ಈ ಯೂತ್ಫುಲ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇದೂವರೆಗೂ ಇಂತಹ ಜಾನರ್ ಸಿನಿಮಾ ಇತ್ತೀಚೆಗೆ ಯಾವುದೂ ಬಂದಿರಲಿಲ್ಲ. ಹೀಗಾಗಿ 'ಪದವಿ ಪೂರ್ವ' ಸಿನಿಮಾ ಬಾಕ್ಸಾಫೀಸ್ನಲ್ಲಿ ಅಬ್ಬರಿಸಬಹುದು. ಪ್ರೇಕ್ಷಕರ ಮನಗೆಲ್ಲಬಹುದು ಎಂದೇ ನಿರೀಕ್ಷೆ ಮಾಡಲಾಗಿತ್ತು. ಅಲ್ಲದೆ, ಸಿನಿಮಾ ಪಾಸಿಟಿವ್ ರಿಸಲ್ಟ್ ಸಿಕ್ಕಿರೋದ್ರಿಂದ ಸಿನಿಮಾ ಗೆಲ್ಲಿಸಲು ಚಿತ್ರತಂಡ ಇಂತಹ ಪ್ರಯತ್ನಕ್ಕೆ ಮುಂದಾಗಿದೆ.


Click it and Unblock the Notifications











