'ನೀವು ಈ ರೀತಿ ಮಾಡಬಾರದು': ಕಿಚ್ಚ ಸುದೀಪ್ ಹಾಕಿದ ವಿಡಿಯೋಗೆ ತೀವ್ರ ಆಕ್ಷೇಪ
ಕೊರೊನಾ ವೈರಸ್ ಕುರಿತಾದ ವಿಡಿಯೋವೊಂದನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಂಚಿಕೊಂಡಿದ್ದಾರೆ. ಆದರೆ ಜವಾಬ್ದಾರಿಯುತ ನಟನಾಗಿ ಇಂತಹ ಅವೈಜ್ಞಾನಿಕ ಸಂಗತಿಯನ್ನು ಹಚ್ಚಿಕೊಳ್ಳುವುದು ಸರಿಯಲ್ಲ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Recommended Video
ಜನತಾ ಕರ್ಫ್ಯೂಗೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಸಂಜೆ ಐದು ಗಂಟೆಗೆ ಐದು ನಿಮಿಷ ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ 'ಸೈನಿಕ'ರಿಗೆ ಕೃತಜ್ಞತೆ ಸಲ್ಲಿಸಿ ಎಂದು ಹೇಳಿದ್ದರು. ಆದರೆ ಅನೇಕರು ಇದಕ್ಕೆ ರೆಕ್ಕೆಪುಕ್ಕಗಳನ್ನು ಸೇರಿಸಿ ಸುಳ್ಳು ಸಂದೇಶಗಳನ್ನು ಹರಿಬಿಟ್ಟಿದ್ದರು. ಹೀಗೆ ಚಪ್ಪಾಳೆ ತಟ್ಟುವುದರಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ರಾಹುವಿನ ಪ್ರಭಾವದಿಂದ ವೈರಸ್ಗಳು ಹರಡುತ್ತವೆ. ಸಂಜೆ ಈ ವೇಳೆಗೆ ಚಪ್ಪಾಳೆ ತಟ್ಟುವುದರಿಂದ ವೈರಸ್ ನಾಶವಾಗುತ್ತದೆ ಎಂದು ಅನೇಕರು ವಾಟ್ಸಾಪ್ನಲ್ಲಿ ಸುದ್ದಿ ಹಬ್ಬಿಸಿದ್ದರು ಇದನ್ನು ಅನೇಕರು ನಂಬಿದ್ದರು. ಆದರೆ ಕಿಚ್ಚ ಸುದೀಪ್ ಕೂಡ ಇದನ್ನು ನಂಬಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಮುಂದೆ ಓದಿ...
ಸುದೀಪ್ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?
'ಚಪ್ಪಾಳೆ ತಟ್ಟುವುದರಿಂದ ವೈರಸ್ಗಳನ್ನು ಸಾಯಿಸಬಹುದು. ಈ ಸಂಗತಿಯನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಹೆಚ್ಚು ಜನರು ಭಾಗವಹಿಸಿ ಈ ಸಂದೇಶವನ್ನು ಹೆಚ್ಚು ಜನರಿಗೆ ತಲುಪಿಸಿ. ಮೋದಿ ಅವರು ನಿಮ್ಮ ಮೂಲಕ ಎನರ್ಜಿ ಮೆಡಿಸಿನ್ ಅನ್ನು ಸೃಷ್ಟಿಸುತ್ತಿದ್ದಾರೆ. ಅವರು ನಿಮ್ಮನ್ನು ಎಲ್ಲಿಗೂ ಕೊಂಡೊಯ್ಯುತ್ತಿಲ್ಲ. ನಿಮ್ಮ ಬಾಲ್ಕನಿಗೆ ಮಾತ್ರ ಬರುವಂತೆ ಹೇಳುತ್ತಿದ್ದಾರೆ. ಹೀಗಾಗಿ ಮಾರ್ಚ್ 5 ಗಂಟೆಗೆ ಐದು ನಿಮಿಷ ಚಪ್ಪಾಳೆ ತಟ್ಟಿ, ಹೆಚ್ಚು ಸದ್ದು ಮಾಡಿ' ಎಂದು ಮಹಿಳೆಯೊಬ್ಬರು ಹೇಳುವ ವಿಡಿಯೋವನ್ನು ಸುದೀಪ್ ಶೇರ್ ಮಾಡಿದ್ದಾರೆ.

ಇದು ನಮ್ಮದೇ ಬದುಕಿಗಾಗಿ
'ಇದನ್ನು ಕೇಳಿ ದಯವಿಟ್ಟು ಭಾಗವಹಿಸಿ. ನಾವು ಏನನ್ನಾದರೂ ಕಳೆದುಕೊಳ್ಳುತ್ತೇವೆಯೇ? ಇಲ್ಲ. ನಾವು ಏನನ್ನಾದರೂ ಪಡೆದುಕೊಳ್ಳುತ್ತೇವೆಯೇ? ಬಹುಶಃ. ಆದರೆ ಕಡೇಪಕ್ಷ ಪ್ರಯತ್ನಿಸೋಣ. ಇಷ್ಟಕ್ಕೂ ಮಿಗಿಲಾಗಿ ಇದು ನಮ್ಮದೇ ಬದುಕಿಗಾಗಿ' ಎಂದು ಸುದೀಪ್ ಹೇಳಿದ್ದರು.

ಜನರಿಗೆ ಬೇಕಿರುವುದನ್ನು ಕೇಳಿ
ಇದನ್ನು ಅನೇಕರು ಟೀಕಿಸಿದ್ದಾರೆ. ನೀವೊಬ್ಬ ಸುಶಿಕ್ಷಿತ ಎಂಜಿನಿಯರ್. ಜನರಿಗೆ ಸಹಾಯ ಮಾಡುವ ಮೂಲಕ ಪ್ರಭಾವ ಬೀರುತ್ತಿರುವವರು. ನಾನು ನಿಮ್ಮ ಅಭಿಮಾನಿ. ದಿನಗೂಲಿ ಅವಲಂಬಿಸಿರುವ ಜನರಿಗೆ ಆರ್ಥಿಕ ಪ್ಯಾಕೇಜ್ಗಳು, ಚಿಕಿತ್ಸೆಗಾಗಿ ಕಿಟ್ಸ್, ಲ್ಯಾಬ್ಗಳು ಆಸ್ಪತ್ರೆಗಳನ್ನು ಒದಗಿಸುವಂತೆ ಸರ್ಕಾರವನ್ನು ಕೇಳುವ ಬದಲು ಇಂತಹ ಅಸಂಬದ್ಧ ವಿಡಿಯೋಗಳನ್ನು ಹಂಚಿಕೊಳ್ಳುತ್ತೀರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಆ ದಿನಗಳು' ಚೇತನ್ ಆಕ್ಷೇಪ
ನಟ 'ಆ ದಿನಗಳು' ಚೇತನ್ ಕುಮಾರ್ ಕೂಡ ಸುದೀಪ್ ವಿಡಿಯೋಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ಚಿತ್ರರಂಗದಲ್ಲಿನ ನಿಮ್ಮ ಕಾರ್ಯವನ್ನು ನಾನು ಗೌರವಿಸುತ್ತೇನೆ. ಇಬ್ಬರು ವೈದ್ಯರ ಮಗನಾಗಿ ನಾನು, ನಮ್ಮ ವೈದ್ಯಕೀಯ ಸಿಬ್ಬಂದಿಯನ್ನು ಶ್ಲಾಘಿಸಬೇಕು ಎಂಬುದನ್ನು ಒಪ್ಪುತ್ತೇನೆ. ಆದರೆ ಇಂತಹ 'ಎನರ್ಜಿ ಮೆಡಿಸಿನ್' ಸಿದ್ಧಾಂತಗಳನ್ನು ಹರಡುವುದು ತಪ್ಪು ಮಾಹಿತಿ ನೀಡುತ್ತದೆ ಮತ್ತು ಅತೀಂದ್ರಿಯ ಶಕ್ತಿಗಳ ನಂಬಿಕೆಗೆ ಎಡೆಮಾಡಿಕೊಡುತ್ತದೆ. ಕೊರೊನಾ ವಿರುದ್ಧ ವೈಜ್ಞಾನಿಕವಾಗಿ ಹೋರಾಡೋಣ ಎಂದು ಹೇಳಿದ್ದಾರೆ.

ಅವೈಜ್ಞಾನಿಕವಾಗಿ ದಾರಿ ತಪ್ಪಿಸುತ್ತದೆ
ಮಾನ್ಯ ಸುದೀಪ ಅವರೇ, ನೀವು ನಿಮ್ಮದೇ ಒಂದು ವಿಡಿಯೋ ತುಣುಕು ಮಾಡಿ ಪ್ರಧಾನಿಗಳ ಬೆಂಬಲಕ್ಕೆ ನಿಲ್ಲಬಹುದಿತ್ತು. ಬದಲಿಗೆ ಅವೈಜ್ಞಾನಿಕವಾಗಿ ಎಲ್ಲರ ದಾರಿ ತಪ್ಪಿಸುತ್ತಿರುವ ಇಂತಹವರ ತುಣುಕು ಹಾಕಿ ಅವರನ್ನು ಮುಖ್ಯವಾಹಿನಿಗೆ ತರುವುದಲ್ಲದೇ, ಗಂಟೆಗಳು ಕಳೆದರೂ ಇದನ್ನು ತೆಗೆಯದಿರುವುದು ವಿಪರ್ಯಾಸ. ದಯವಿಟ್ಟು ಇನ್ನೊಮ್ಮೆ ಯೋಚಿಸಿ ಎಂದು ವೈಶಾಖ್ ಬಾಗೀ ಎಂಬುವವರು ಹೇಳಿದ್ದಾರೆ.

ಅರಿಮೆಯ ಕಡೆಗೆ ಸಾಗಿ
ಅಲ್ಲ ಕಿಚ್ಚ ಸುದೀಪ್ ಸಾರ್.. ವೈಜ್ಞಾನಿಕ ತಳಹದಿಯೇ ಇಲ್ಲದೇ ಬೇಕಾದಂತೆ ಹೇಳಿಕೆ ಕೊಟ್ಟಿರೋ ಈ ವ್ಯಕ್ತಿಯ ವಿಡಿಯೋವನ್ನು ಪ್ರಚಾರ ಮಾಡುತ್ತಿರಲ್ಲ ನಿಮಗೇನಾಗಿದೆ ಹೇಳಿ.. ನಮಗೆ ಬೇಕಿರೋದು True Science.. Psuedo Science ಅಲ್ಲ.. ಇಂತಹ ಬೂಟಾಟಿಕೆಯನ್ನು, ಮೌಡ್ಯವನ್ನು ದೂರ ತಳ್ಳಿ.. ಅರಿಮೆಯ ಕಡೆ ಸಾಗಿ.. ಎಂದು ಮಲ್ಲಿಕಾರ್ಜುನ್ ಬಿ ಎಂಬುವವರು ಮನವಿ ಮಾಡಿದ್ದಾರೆ.

ವೈಜ್ಞಾನಿಕ ಸಂಗತಿ ಹಂಚಿಕೊಳ್ಳಿ
ಅಣ್ಣಾ, ಅವತ್ತು ಜೂಜಿನ ಜಾಹಿರಾತು ಮಾಡಿದ್ರಿ ಇವತ್ತು ಇದು! ವೈಜ್ಞಾನಿಕವಾಗಿ ನಿರೂಪಿತವಾದ ಮಾಹಿತಿ ಮಾತ್ರ ಹಂಚಿಕೊಳ್ಳಿ. ಕೊರೊನಾಸೋಂಕಿಗಿಂತ ಜನ ಅನುಭವಿಸುವುದು ಸುಳ್ಸುದ್ದಿ, ಅವೈಜ್ಞಾನಿಕ ವಿಚಾರಗಳು. ಸೋಂಕಿನ ತಪಾಸಣೆ ದೊಡ್ಡ ಸಂಖ್ಯೆಯಲ್ಲಿ ಇನ್ನಷ್ಟು ಹೊಸ ಪ್ರಯೋಗಾಲಯ ತೆಗೆದು ಮಾಡಬೇಕು. ಅದು ಎಲ್ಲರಿಗೂ ಅನುಕೂಲ ಮಾಡುವುದು ಎಂದು ಕೃಷಿಕ್ ಎ.ವಿ. ಹೇಳಿದ್ದಾರೆ.


Click it and Unblock the Notifications











