'ಅಧೀರ'ನಿಗೆ ಸಂಕಷ್ಟ?: ಸಂಜಯ್ ದತ್ ಕನ್ನಡದಲ್ಲಿ ನಟಿಸಬಾರದು ಎಂದು ಕೋರ್ಟ್ಗೆ ಹೋದ ನಿರ್ಮಾಪಕ
ಸಂಜಯ್ ದತ್ ಜನ್ಮದಿನದ ಅಂಗವಾಗಿ ಜುಲೈ 29ರಂದು 'ಕೆಜಿಎಫ್ ಚಾಪ್ಟರ್ 2' ಚಿತ್ರದ 'ಅಧೀರ'ನ ಪಾತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಇಂಗ್ಲಿಷ್ನ ಜನಪ್ರಿಯ ವೆಬ್ ಸೀರೀಸ್ ವೈಕಿಂಗ್ಸ್ನ ಪಾತ್ರವನ್ನು ಹೋಲುವ ಸಂಜಯ್ ದತ್ ಲುಕ್ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿತ್ತು. ಆದರೆ ಆ ಪಾತ್ರಕ್ಕೀಗ ಸಂಕಷ್ಟ ಎದುರಾಗಿದೆ.
'ಕೆಜಿಎಫ್ ಚಾಪ್ಟರ್ 2'ನಲ್ಲಿ ಸಂಜಯ್ ದತ್ ನಟಿಸುವುದನ್ನು ತಡೆಯುವಂತೆ ಕೋರಿ ನಿರ್ಮಾಪಕ ಶಿವಪ್ರಕಾಶ್ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಂಜಯ್ ದತ್ ದೇಶದ್ರೋಹಿಯಾಗಿದ್ದು, ಭಯೋತ್ಪಾದನಾ ಪ್ರಕರಣದಲ್ಲಿ ಅವರ ವಿರುದ್ಧ ಆರೋಪ ಕೇಳಿಬಂದಿತ್ತು. ಇಂತಹ ಕಳಂಕ ಹೊತ್ತಿರುವ ಸಂಜಯ್ ದತ್, ಕನ್ನಡ ಚಿತ್ರದಲ್ಲಿ ನಟಿಸಬಾರದು ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ. ಸಂಜಯ್ ದತ್ 'ಅಧೀರ'ನ ಪಾತ್ರದಲ್ಲಿ ನಟಿಸುವುದು ಖಾತರಿಯಾಗಿ ಸುಮಾರು ಒಂದೂವರೆ ವರ್ಷ ಕಳೆದಿದೆ. ಅದರ ವಿರುದ್ಧ ಈಗ ದೂರು ಸಲ್ಲಿಸಿರುವುದು ಚರ್ಚೆಗೆ ಒಳಗಾಗಿದೆ. ಮುಂದೆ ಓದಿ...

ಶಿಕ್ಷೆ ಅನುಭವಿಸಿದ್ದ ಸಂಜಯ್ ದತ್
ಸಂಜಯ್ ದತ್ 1993ರಲ್ಲಿ ನಡೆದ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಚಾರ್ಜ್ಷೀಟ್ನಲ್ಲಿ ಅವರ ಹೆಸರಿತ್ತು. ಅದಕ್ಕೆ ಅವರು ಶಿಕ್ಷೆಯನ್ನೂ ಅನುಭವಿಸಿದ್ದರು. 2016ರಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು.

ಚಿತ್ರದಿಂದ ಕೈಬಿಡಬೇಕು
ಸಂಜಯ್ ದತ್ ಒಬ್ಬ ದೇಶದ್ರೋಹಿ. ಅವರು ಕರ್ನಾಟಕಕ್ಕೆ ಕಾಲಿಡಬಾರದು. ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಬಾರದು. ಅವರನ್ನು ಈ ಚಿತ್ರದಿಂದಲೇ ಕೈ ಬಿಡಬೇಕು ಎಂದು ಆಗ್ರಹಿಸಿ ಶಿವಪ್ರಕಾಶ್ ಎಂಬುವವರು ಗುರುವಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷದಿಂದಲೇ ನಟನೆ
ಸಂಜಯ್ ದತ್ 'ಕೆಜಿಎಫ್ ಚಾಪ್ಟರ್ 2'ದಲ್ಲಿ ನಟಿಸಲಿದ್ದಾರೆ ಎನ್ನುವುದು 2019ರ ಜನವರಿಯಲ್ಲಿಯೇ ಬಹಿರಂಗವಾಗಿತ್ತು. ಅದರ ನಂತರ ಕಳೆದ ವರ್ಷದ ಜುಲೈನಲ್ಲಿ ಸಂಜಯ್ ದತ್ ಪಾತ್ರದ ಫಸ್ಟ್ ಲುಕ್ ಸಹ ಬಿಡುಗಡೆಯಾಗಿತ್ತು. ಬಳಿಕ ಚಿತ್ರೀಕರಣದಲ್ಲಿ ಸಂಜಯ್ ದತ್ ಭಾಗವಹಿಸಿದ್ದೂ ಸುದ್ದಿಯಾಗಿತ್ತು. ಆದರೆ ಈಗ ಅದರ ವಿರುದ್ಧ ದೂರು ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಚಿತ್ರದ ಬಿಡುಗಡೆ ಯಾವಾಗ?
ಕೆಜಿಎಫ್ ಚಿತ್ರದಲ್ಲಿ ಸಂಜಯ್ ದತ್ 'ಅಧೀರ' ಎಂಬ ಮಹಾಕ್ರೂರಿ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರ ಸೇರಿದಂತೆ ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿದೆ. ಇನ್ನೂ 35-40 ದಿನಗಳ ಚಿತ್ರೀಕರಣ ಬಾಕಿ ಇದೆ. ಅಕ್ಟೋಬರ್ 23ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈ ಹಿಂದೆ ಘೋಷಿಸಿತ್ತು. ಆದರೆ ಚಿತ್ರೀಕರಣ ಸದ್ಯಕ್ಕೆ ಮರು ಆರಂಭವಾಗುವ ಲಕ್ಷಣಗಳಿಲ್ಲ. ಆದರೆ ಸಿನಿಮಾ ಬಿಡುಗಡೆ ದಿನಾಂಕದ ಬದಲಾವಣೆ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.


Click it and Unblock the Notifications











