ಬ್ಲಾಕ್ ಬಸ್ಟರ್ ’ ಬಹದ್ದೂರ್ ’ ಚಿತ್ರಕ್ಕೆ ಇದೆಂಥಾ ಕಾಟ?
2014ರ ಬ್ಲಾಕ್ ಬಸ್ಟರ್ ಧ್ರುವ್ ಸರ್ಜಾ, ರಾಧಿಕಾ ಪಂಡಿತ್ ಪ್ರಮುಖ ಭೂಮಿಕೆಯಲ್ಲಿರುವ ಮತ್ತು ಚೇತನ್ ಕುಮಾರ್ ನಿರ್ದೇಶನದ ಬಹದ್ದೂರ್ ಚಿತ್ರ 'ಪೈರಸಿ' ಕಾಟಕ್ಕೆ ಸಿಲುಕಿ ಕೊಂಡಿದೆ.
ಈ ಹಿಂದೆ ಕೂಡಾ ಕನ್ನಡ ಚಿತ್ರರಂಗ ಪೈರಸಿ ಎನ್ನುವ ಪೆಡಂಭೂತದ ವಿರುದ್ದ ಹೋರಾಟ ನಡೆಸಿತ್ತು. ಆದರೆ ಇದಕ್ಕೆ ಕಡಿವಾಣ ಹಾಕುವ ಕಠಿಣ ಕಾನೂನು ಇಲ್ಲದೇ ಇರುವುದು ಈ ದಂಧೆ ಚಿತ್ರೋದ್ಯಮಕ್ಕೆ ಮಾರಕವಾಗಿ ಪರಿಣಮಿಸುತ್ತಲೇ ಬರುತ್ತಿದೆ.
ಸಾಲಗೀಲ ಮಾಡಿಕೊಂಡು ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡುವ ನಿರ್ಮಾಪಕನ ಆರ್ಥಿಕ ಹಣೆಬರಹ ಪೈರಸಿ ಎನ್ನುವ ದುಃಸ್ವಪ್ನಕ್ಕೆ ಒಳಗಾಗುತ್ತಿರುವುದು ವಿಷಾದನೀಯ. (ಮುಂದುವರಿದ ಬಹದ್ದೂರ್ ಅಬ್ಬರ)

ಐವತ್ತು ದಿನ ಪೂರೈಸಿ 65ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಬಹದ್ದೂರ್ ಚಿತ್ರ ಪೈರಸಿ ಕಾಟಕ್ಕೆ ಒಳಗಾಗಿರುವ ಚಿತ್ರಗಳ ಪೈಕಿಗೆ ಕೊಡಬಹುದಾದ ಲೇಟೆಸ್ಟ್ ಉದಾಹರಣೆ.
ಬಹದ್ದೂರ್ ಚಿತ್ರವನ್ನು ಯುಟ್ಯೂಬ್ ನಲ್ಲಿ ಯಾರೋ 'ಕಿಡಿಗೇಡಿಗಳು' ಅಪ್ಲೋಡ್ ಮಾಡಿದ್ದಾರೆ. ಇದಾದ ನಂತರ ಈ ಚಿತ್ರ ಟೊರೆಂಟೊ ಸರ್ವರ್ ನಲ್ಲಿ ಸೇವ್ ಆಗಿದ್ದು, ಕೆಲವೇ ದಿನಗಳಲ್ಲಿ 75 ಸಾವಿರಕ್ಕೂ ಹೆಚ್ಚು ಡೌನ್ ಲೋಡ್ ಆಗಿದೆ.
ಈ ಹಿಂದೆ ಮೂರು ಬಾರಿ ಯುಟ್ಯೂಬ್ ನಲ್ಲಿ ಅಪ್ಲೋಡ್ ಆಗಿದ್ದ ಬಹದ್ದೂರ್ ಚಿತ್ರವನ್ನು ಡಿಲಿಟ್ ಮಾಡಲಾಗಿತ್ತು. ಸರಿಯಾದ ಐಡೆಂಟಿಫಿಕೇಶನ್ ಇಲ್ಲದೇ ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲು ಅವಕಾಶವಿರುವುದಿಲ್ಲ, ಹಾಗಾಗಿ ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಯುಟ್ಯೂಬ್, ಚಿತ್ರತಂಡದ ಮನವಿಗೆ ಸ್ಪಂಧಿಸುತ್ತಿಲ್ಲ.
ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಶೀಘ್ರದಲ್ಲೇ ಐಪಿ ಅಡ್ರೆಸ್ ಅನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆಂದು ಬಹದ್ದೂರ್ ಚಿತ್ರದ ನಿರ್ದೇಶಕ ಚೇತನ್ 'ಫಿಲ್ಮೀಬೀಟ್ 'ಗೆ ತಿಳಿಸಿದ್ದಾರೆ. (ಬಹದ್ದೂರ್ ಚಿತ್ರ ವಿಮರ್ಶೆ)

ಈ ಹಿಂದೆ ಬಹಳಷ್ಟು ಚಿತ್ರಗಳು ಪೈರಸಿ ಕಾಟದಿಂದ ನಷ್ಟ ಅನುಭಸಿವೆ. ಇಂದು ನಮ್ಮ ಚಿತ್ರಕ್ಕೆ ಹೀಗಾಗಿರಬಹುದು, ಮುಂದೆ ನಮ್ಮ ಚಿತ್ರೋದ್ಯಮಕ್ಕೆ ಈ ಕಾಟ ತಪ್ಪಿದ್ದಲ್ಲ. ಚಿತ್ರರಂಗ ಒಕ್ಕೂರಿಲಿನಿಂದ ಇದರ ವಿರುದ್ದ ಹೋರಾಡ ಬೇಕಾಗಿದೆ, ನಮ್ಮ ನೋವನ್ನು ಸರಕಾರಕ್ಕೆ ಮನದಟ್ಟು ಮಾಡಬೇಕಾಗಿದೆ ಎಂದು ಚೇತನ್ ಹೇಳಿದ್ದಾರೆ.
ಕೆಲವೇ ರೂಪಾಯಿಗಳ ಸಿಡಿಗಳಲ್ಲಿ ಅಥವಾ ಅಂತರ್ಜಾಲದಲ್ಲಿ ಹೊಸ ಚಿತ್ರಗಳು ಅಪ್ಲೋಡ್ ಆಗುತ್ತಿರುವ ಮೂಲಕ ಅನ್ನದಾತ ನಿರ್ಮಾಪಕರಿಗೆ ನಷ್ಟವಾಗುತ್ತಿದೆ. ಹಾಗಾಗಿ, ಸರಕಾರ ಇನ್ನಾದರೂ ಎಚ್ಚೆತ್ತು ಸರಿಯಾದ ನಿರ್ಧಾರಕ್ಕೆ ಬರಲಿ ಎನ್ನುವುದು ಎಲ್ಲರ ಆಶಯ.


Click it and Unblock the Notifications











