ದರ್ಶನ್ ಮೇಲೆ ಚಪ್ಪಲಿ ಎಸೆದ ಮೂವರು ಆರೋಪಿಗಳ ಬಂಧನ: ಇನ್ನು ಉಳಿದವರಿಗಾಗಿ ಶೋಧ!
ಹೊಸಪೇಟೆಯಲ್ಲಿ 'ಕ್ರಾಂತಿ' ಸಿನಿಮಾ ಹಾಡನ್ನು ಬಿಡುಗಡೆ ಮಾಡುವುದಕ್ಕೆ ತೆರಳಿದ್ದ ದರ್ಶನ್ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದಿದ್ದರು. ಈ ಪ್ರಕರಣದ ಬಳಿಕ ದರ್ಶನ್ ಫ್ಯಾನ್ಸ್ ರೊಚ್ಚಿಗೆದ್ದಿದ್ದರು. ಕೂಡಲೇ ಆರೋಪಿತರನ್ನು ಬಂಧಿಸುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆಯನ್ನು ಖಂಡಿಸಿ ಪ್ರತಿಭಟನೆಗಳು ಕೂಡ ನಡೆದಿದ್ದವು. ಇದೇ ಸಂಬಂಧ ದರ್ಶನ್ ಫ್ಯಾನ್ಸ್ ಹಾಗೂ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಯುದ್ಧ ಕೂಡ ನಡೆದಿತ್ತು.
ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಮೂವರು ಆರೋಪಿತರನ್ನು ಬಂಧಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊಸಪೇಟೆ ಪೊಲೀಸ್ ಠಾಣೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.

ಮೂವರು ಆರೋಪಿತರ ಬಂಧನ
ಇದೇ ತಿಂಗಳ 18ನೇ ತಾರೀಕು ಹೊಸಪೇಟೆಯಲ್ಲಿ 'ಕ್ರಾಂತಿ' ಸಿನಿಮಾದ ಎರಡನೇ ಸಾಂಗ್ ರಿಲೀಸ್ ಮಾಡಲು ಹೋಗಿದ್ದರು. ಈ ವೇಳೆ ಕಿಡಿಗೇಡಿಗಳು ಚಪ್ಪಲಿ ಎಸೆದಿದ್ದರು. ಈ ಸಂಬಂಧ ಕ್ರಾರ್ಯಕ್ರಮದ ಆಯೋಜಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಲ್ಲಿ ಅಪರಾಧ ಸಂಖ್ಯೆ 180/2022 ಅಡಿಯಲ್ಲಿ ದೂರನ್ನು ದಾಖಲಿಸಿ, ತನಿಖೆಯನ್ನು ನಡೆಸಲಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿತರನ್ನು ಬಂಧಿಸಿದ್ದು, ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿತರಿಗೆ ನ್ಯಾಯಾಂಗ ಬಂಧನ
ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಆರೋಪಿಯನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಎಸ್ಪಿ ಮಾರ್ಗದರ್ಶನದಲ್ಲಿ ಹಾಗೂ ಡಿಎಸ್ಪಿ ಅವರ ನೇತೃತ್ವದಲ್ಲಿ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮೂವರು ಆರೋಪಿತರು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ.

ಉಳಿದವರಿಗಾಗಿ ಪತ್ತೆ ಕಾರ್ಯ ಶುರು
ಹೊಸಪೇಟೆ ಪೊಲೀಸ್ ಠಾಣೆಯ ಪಿ ಐ ಬಾಳನ ಗೌಡ, ಮುನಿರತ್ನಂ ಪಿಎಸ್ಐ ಸಿಬ್ಬಂದಿಯವರಾದ ರಾಘವೇಂದ್ರ, ಪ್ರಕಾಶ್ ಕಳಕ ರೆಡ್ಡಿ, ಶ್ರೀನಿವಾಸ, ಜಾವೇದ್ ಹಾಗೂ ಪರಶುರಾಮ ನಾಯ್ಕ ತಂಡವು ಆರೋಪಿಗಳನ್ನು ಬಂಧಿಸಿದ್ದು, ಇನ್ನು ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸದ್ಯ ಆರೋಪಿಗಳ ಹೆಸರನ್ನು ಬಹಿರಂಗ ಪಡಿಸದ ಪೊಲೀಸರು ಇನ್ನು ಉಳಿದವರಿಗಾಗಿ ಬಲೆ ಬೀಸಿದ್ದಾರೆ.

'ಕಾಲರ್ ಎತ್ತಿಕೊಂಡು ಓಡಾಡೋಣ'
ನಿನ್ನೆ (ಡಿಸೆಂಬರ್ 25)ರಂದು ದರ್ಶನ್ ಹುಬ್ಬಳ್ಳಿಯಲ್ಲಿ 'ಕ್ರಾಂತಿ' ಸಿನಿಮಾದ ಮೂರನೇ ಸಾಂಗ್ ಅನ್ನ ರಿಲೀಸ್ ಮಾಡಿದ್ದಾರೆ. ಈ ವೇಳೆ ಚಪ್ಪಲಿ ಎಸೆದವರ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. "ನೀವು ಏನೇ ಮಾಡಿದ್ರೂ ನಾವು ತಲೆಗೂ ಹಾಕಿಕೊಳ್ಳಲ್ಲ. ನೊಂದುಕೊಳ್ಳಲ್ಲ. ಬೇಜಾರು ಮಾಡಿಕೊಳ್ಳಲ್ಲ. ಹಿಂಗೆ (ಕಾಲರ್) ಅಂದ್ಕೊಂಡೇ ಓಡಾಡೋಣ. ಇನ್ನೂ ಒಂದು ಸ್ಟೆಪ್ ಮುಂದಕ್ಕೆ ಹೋಗಿ ಉರಿಸಬೇಕು ಅಂದ್ರೆ, ಇನ್ನೂ ಜಾಸ್ತಿ ಉರಿಸೋಣ. ನಾವು ಮಾತಾಡೋದು ಬೇಡ. ನಮ್ಮ ಕೆಲಸ ಮಾತಾಡಲಿ ಅಂತಾನೇ ನಾನು ಬಯಸೋದು." ಎಂದು ದರ್ಶನ್ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.


Click it and Unblock the Notifications











