ಹಿಂದೂ ದೇವರ ವಿಗ್ರಹ ಕಳುವು: ಖ್ಯಾತ ನಿರ್ದೇಶಕ ಅರೆಸ್ಟ್
ತನ್ನ ನಿರ್ದೇಶನದ ಚಿತ್ರಗಳ ಹಲವು ಸಂದೇಶ ನೀಡಿದ್ದ ಖ್ಯಾತ ನಿರ್ದೇಶಕರೊಬ್ಬರು ಹಿಂದೂ ದೇವರ ವಿಗ್ರಹ ಕಳುವು ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ.
ಕಾಲಿವುಡ್ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿರುವ ವಿ ಶೇಖರ್, ಸುಮಾರು ಅಂದಾಜು ಮಾರುಕಟ್ಟೆ ಎಂಬತ್ತು ಕೋಟಿ ರೂಪಾಯಿ ವಿಗ್ರಹ ಸ್ಮಗ್ಲಿಂಗ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.
ಕೋಡಿ ವಸಂತಲ್ ಕೋಡಿ ನನ್ಮೈ, ವಿರಾಲುಕ್ಕೀತ ವೀಕ್ಕಂ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿ ನಿರ್ಮಿಸಿದ್ದ ಶೇಖರ್, ನಂತರದ ದಿನಗಳಲ್ಲಿ ಸ್ವಂತ ಬ್ಯಾನರಿನ ಚಿತ್ರದಿಂದ ತೀವ್ರ ನಷ್ಟ ಅನುಭವಿಸಿದ್ದರು.

ಪೊಲೀಸರ ಪ್ರಕಾರ ಶೇಖರ್, ಅಪರೂಪದ ಎಂಟು ಪಂಚಲೋಹ ವಿಗ್ರಹವನ್ನು ಸ್ಮಗಲ್ ಮಾಡಿದ್ದಲ್ಲದೇ, ಇದೇ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಗೆ ಆಶ್ರಯ ನೀಡಿದ್ದಕ್ಕಾಗಿ ಚೆನ್ನೈ ಪೊಲೀಸರು ಶೇಖರ್ ಅವರನ್ನು ಬಂಧಿಸಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.
ಶೇಖರ್ ಅವರು ರಮೇಶ್ ಅರವಿಂದ್ ಮತ್ತು ಮೀನಾ ಮುಖ್ಯ ಭೂಮಿಕೆಯಲ್ಲಿದ್ದ 'ಹೆಂಡ್ತೀರ್ ದರ್ಬಾರ್' ಚಿತ್ರವನ್ನೂ ನಿರ್ದೇಶಿಸಿದ್ದರು.
ಕೆಲವು ತಿಂಗಳ ಹಿಂದೆ ತಮಿಳುನಾಡಿನ ವಿವಿಧ ದೇವಾಲಯಗಳಿಂದ ಎಂಟು ಅಪರೂಪದ, ಪಂಚಲೋಹ ವಿಗ್ರಹಗಳು ಕಳುವಾಗಿದ್ದವು.
ಪುತ್ರನ ಸಿನಿಮಾದಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದ ಶೇಖರ್, ಹಣ ಮಾಡಲು ಈ ಮಾರ್ಗ ಕಂಡು ಹಿಡಿದಿದ್ದಾರೆಂದು ವಿಚಾರಣೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಪ್ರೊಡಕ್ಷನ್ ಮ್ಯಾನೇಜರಾಗಿ ಕಾರ್ಯ ನಿರ್ವಹಿಸುತ್ತಿದ್ದ ಧನಲಿಂಗಂ ಎಂಬ ವ್ಯಕ್ತಿಯನ್ನು ವಿಗ್ರಹ ಕಳವು ಪ್ರಕರಣದ ಕೇಸಿನಲ್ಲಿ ತಮಿಳುನಾಡು ಪೊಲೀಸರು ಬಂಧಿಸಿದ್ದರು.
ಆತ ನೀಡಿದ ಸುಳಿವಿನ ಮೇರೆಗೆ ಶೇಖರ್ ಅವರನ್ನು ಎರಡು ದಿನದ ಹಿಂದೆ ಬಂಧಿಸಲಾಗಿದ್ದು, ಶೇಖರ್ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


Click it and Unblock the Notifications











