ಈ ಸನ್ಮಾನವನ್ನು ಎಂದಿಗೂ ಮರೆಯಲಾರೆ, ಪುನೀತ್
ರೈತರು ಈ ದೇಶದ ಬೆನ್ನೆಲುಬು, ಲಕ್ಷಾಂತರ ರೈತರ ಆಶೀರ್ವಾದವೇ ನನಗೆ ಅತಿ ದೊಡ್ಡ ಸಂಭಾವನೆ. ಈ ಸನ್ಮಾನವನ್ನು ನಾನು ಎಂದಿಗೂ ಮರೆಯಲಾರೆ ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೇಳಿದ್ದಾರೆ.
ಬೆಂಗಳೂರು - ತುಮಕೂರು ರಾಷ್ಟೀಯ ಹೆದ್ದಾರಿಯ ಮಾದಾವರ ಬಳಿಯ ನೈಸ್ ಮೈದಾನದಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ವತಿಯಿಂದ (ಕೆಎಂಎಫ್) ಶನಿವಾರ (ಫೆ 22) ಆಯೋಜಿಸಿದ್ದ ಭಾರೀ ಸಮಾವೇಶದಲ್ಲಿ ಅಭಿನಂದನೆ ಸ್ವೀಕರಿಸಿ ಪುನೀತ್ ಮಾತನಾಡುತ್ತಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಪುನೀತ್, ನನ್ನ ತಂದೆಯೂ ಈ ಹಿಂದೆ ನಂದಿನಿ ಹಾಲಿಗೆ ರಾಯಭಾರಿಯಾಗಿದ್ದರು. ಅವರೂ ಏನೂ ಸಂಭಾವನೆ ಪಡೆದಿರಲಿಲ್ಲ. [ಸಮಾವೇಶದಲ್ಲಿ ಸಿಎಂ ಹೇಳಿದ್ದೇನು?]

ಲಕ್ಷಾಂತರ ಜನರ ಮುಂದೆ ಮುಖ್ಯಮಂತ್ರಿಗಳಿಂದ ಸನ್ಮಾನ ಸ್ವೀಕರಿಸುವ ಭಾಗ್ಯ ನನ್ನದಾಗಿದೆ. ಇದಕ್ಕಿಂತ ದೊಡ್ಡ ಸಂಭಾವನೆ ಇನ್ನೊಂದು ಬೇಕೇ ಎಂದು ವಿನಮ್ರವಾಗಿ ಪುನೀತ್ ಸಮಾವೇಶದಲ್ಲಿ ಹೇಳಿದರು.
ಕೆಎಂಎಫ್ ನೊಂದಿಗೆ ನಮ್ಮ ಕುಟುಂಬಕ್ಕೆ ಹದಿನೈದು ವರ್ಷಗಳ ಸಂಬಂಧವಿದೆ. ಜನರ ಮತ್ತು ರೈತರ ಆಶೀರ್ವಾದದ ಮುಂದೆ ಯಾವುದೇ ಸಂಭಾವನೆ ಲೆಕ್ಕಕ್ಕಿಲ್ಲ. ಹಸುಗಳನ್ನು ಸಾಂಕ್ರಾಮಿಕ ರೋಗಗಳಿಂದ ತಡೆಗಟ್ಟಲು ಲಸಿಕೆ ಹಾಕಿಸುವುದನ್ನು ರೈತರು ಮರೆಯಬಾರದು ಎಂದು ಪುನೀತ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ನೆಚ್ಚಿನ ನಟನ ಸನ್ಮಾನ ಕಾರ್ಯಕ್ರಮವನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬಂದಿತ್ತು. ಸಂಭಾಗಣ ಕಿಕ್ಕಿರಿದು ತುಂಬಿ, ಹೊರಗೆ ಸಾವಿರಾರು ಮಂದಿ ಜನ ಸಮಾರಂಭ ವೀಕ್ಷಿಸುತ್ತಿದ್ದರು. ತುಮಕೂರು ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.


Click it and Unblock the Notifications











