ನೆರವು ನೀಡಲು ಹಣಕಾಸಿನ ಕೊರತೆ: ಸಾಲ ಮಾಡಿ ಸಹಾಯ ಮುಂದುವರಿಸಲು ಮುಂದಾದ ಪ್ರಕಾಶ್ ರೈ
ಲಾಕ್ಡೌನ್ ಆರಂಭವಾಗುವ ಮುಂಚೆಯಿಂದಲೂ ನಟ ಪ್ರಕಾಶ್ ರೈ ನೂರಾರು ಜನರಿಗೆ ಸಹಾಯ ಮಾಡುತ್ತಿದ್ದಾರೆ. ತಮ್ಮ ಬಳಿ ಇದ್ದ ಹಣದಿಂದ ತಮ್ಮ ಮನೆ, ತೋಟ, ಸಿನಿಮಾ ನಿರ್ಮಾಣ ತಂಡ, ಫೌಂಡೇಷನ್ ಮತ್ತು ಖಾಸಗಿ ಸಿಬ್ಬಂದಿಗೆ ಮೇ ತಿಂಗಳವರೆಗಿನ ಸಂಬಳವನ್ನು ಅವರು ಮಾರ್ಚ್ನಲ್ಲಿಯೇ ನೀಡುವ ಮೂಲಕ ಮಾದರಿಯಾಗಿದ್ದರು.
ಬಳಿಕ ಪ್ರಕಾಶ್ ರೈ ಫೌಂಡೇಷನ್ ಮೂಲಕ ಪ್ರತಿನಿತ್ಯವೂ 250 ಮಂದಿ ದಿನಗೂಲಿ ಕಾರ್ಮಿಕರು, ನಿರ್ಗತಿಕರಿಗೆ ಆಹಾರ ನೀಡುವ ಕಾರ್ಯ ಆರಂಭಿಸಿದ್ದರು. ತಮ್ಮ ಫಾರ್ಮ್ ಹೌಸ್ನಲ್ಲಿಯೇ ಆಹಾರ ತಯಾರಿಸಿ ಕೋವಲಂನ ಬೀದಿಗಳಿಗೆ ತೆರಳಿ ಹಸಿದವರಿಗೆ ಊಟ ನೀಡುತ್ತಿದ್ದರು. ಇದನ್ನು ಸುಮಾರು ಒಂದು ತಿಂಗಳಿನಿಂದ ನಡೆಸಿಕೊಂಡು ಬಂದಿರುವ ಅವರು, ಈಗ ಸಂಪನ್ಮೂಲದ ಕೊರತೆ ಎದುರಿಸುತ್ತಿದ್ದಾರೆ. ಇದಕ್ಕಾಗಿ ಅವರು ದೇಣಿಗೆ ಪಡೆಯಲು ಮುಂದಾಗಿದ್ದಾರೆ. ಮುಂದೆ ಓದಿ...

ಜನ, ಜಾನುವಾರುಗಳಿಗೆ ಸಹಾಯ
ದಿನವೂ 250 ಜನರಿಗೆ ಊಟ ಎಂದರೆ ಸಾವಿರಾರು ಮಂದಿಗೆ ಪ್ರಕಾಶ್ ರೈ ಈಗಾಗಲೇ ಆಹಾರ ಒದಗಿಸಿದ್ದಾರೆ. ಅಷ್ಟೇ ಅಲ್ಲದೆ ಅವರ ತೋಟದಲ್ಲಿ 30 ನಿರಾಶ್ರಿತ ಹಸುಗಳನ್ನೂ ಸಾಕಿದ್ದಾರೆ. ಅವುಗಳಿಗೆ ಮೇವು ಒದಗಿಸುವ ಕಾರ್ಯವನ್ನೂ ಅವರು ಮುಂದುವರಿಸಿದ್ದಾರೆ.

ಹಣಕಾಸಿನ ಸಂಪನ್ಮೂಲ ಕೊರತೆಯಾಗುತ್ತಿದೆ
ಆದರೆ ನಿರಂತರವಾಗಿ ನೆರವು ಒದಗಿಸುತ್ತಿರುವುರಿಂದ ಪ್ರಕಾಶ್ ರೈ ಅವರ ಹಣಕಾಸಿನ ಸಂಪನ್ಮೂಲ ಕೂಡ ಕರಗುತ್ತಿದೆ. ಲಾಕ್ಡೌನ್ ಮುಂದುವರಿಯುವುದರಿಂದ ಇನ್ನೂ ಹತ್ತಾರು ದಿನ ಜನರಿಗೆ ಆಹಾರ ಒದಗಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಸಂಪನ್ಮೂಲ ಬರಿದಾಗುತ್ತಿದ್ದರೂ ತಮ್ಮ ನೆರವನ್ನು ಸ್ಥಗಿತಗೊಳಿಸದೆ ಇರಲು ಅವರು ತೀರ್ಮಾನಿಸಿದ್ದಾರೆ.

ಸಾಲ ಪಡೆದು ಸಹಾಯ
ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಾಲ ಪಡೆದು ಅವರಿಗೆ ಅಗತ್ಯವಾಗಿರುವುದನ್ನು ತಲುಪಿಸುವ ಕಾರ್ಯ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಏಕೆಂದರೆ ಇದೆಲ್ಲವೂ ಮುಗಿದ ಬಳಿಕ ತಮಗೆ ಯಾವಾಗಬೇಕಾದರೂ ಮತ್ತೆ ದುಡಿಯುವ ಅವಕಾಶವಿದೆ ಎನ್ನುವುದು ಗೊತ್ತಿದೆ ಎಂದಿದ್ದಾರೆ.

ಮಾನವೀಯತೆ ಉಳಿಯಬೇಕಿದೆ
ಈ ಸಂಕಷ್ಟದ ಸಮಯದಲ್ಲಿ ಮಾನವೀಯತೆ ಉಳಿಯಬೇಕಿದೆ ಎಂದಿರುವ ಪ್ರಕಾಶ್ ರೈ, ಜತೆಯಾಗಿ ಹೋರಾಡೋಣ. ಜೀವನಕ್ಕೆ ನಾವು ಮರಳಿ ಕೊಡೋಣ ಎಂದು ತಿಳಿಸಿದ್ದಾರೆ. ಅವರ ಕೋರಿಕೆಗೆ ಅನೇಕರು ಸ್ಪಂದಿಸಿದ್ದಾರೆ. ಅವರ ಫೌಂಡೇಷನ್ಗೆ ದೇಣಿಗೆ ನೀಡಲು ಮುಂದಾಗಿದ್ದಾರೆ. ಆದರೆ ನಾವೇ ಇದನ್ನು ನಿಭಾಯಿಸುತ್ತೇವೆ ಎಂದು ಹೇಳಿದ್ದಾರೆ.

ಆದಷ್ಟು ಸಹಾಯ ಮಾಡಿ
ನಮ್ಮ ಕಾರ್ಯ ನಿಮ್ಮ ಮೇಲೆ ಪ್ರಭಾವ ಬೀರಲಿ ಎಂಬ ಕಾರಣಕ್ಕಾಗಿ ಮಾತ್ರ ಇವುಗಳನ್ನು ಹಂಚಿಕೊಳ್ಳುತ್ತೇನೆ. ನಿಮ್ಮ ಸುತ್ತಲಿನಲ್ಲಿ ನೆರವಿನ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಪ್ರಯತ್ನಿಸಿ. ಹಂಚಿಕೊಳ್ಳುವುದು ಬೇರೆಯವರನ್ನು ಮಾತ್ರ ಗುಣಪಡಿಸುವುದಿಲ್ಲ ಅದು ನಮ್ಮನ್ನೂ ಗುಣಪಡಿಸುತ್ತದೆ ಎಂದಿದ್ದಾರೆ.


Click it and Unblock the Notifications











