ಮನೆ-ಮಠ ಎಲ್ಲ ಮಾರಿಯಾಯ್ತು, ಬದುಕೋಕೆ ದಾರಿ ಇಲ್ಲದ ಸ್ಥಿತಿಗೆ ತಲುಪಿದ್ದೇನೆ ಎಂದಿದ್ದ ಕಪಾಲಿ ಮೋಹನ್
ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ನಿರ್ಮಾಪಕ, ಉದ್ಯಮಿ ಕಪಾಲಿ ಮೋಹನ್ ಆತ್ಮಹತ್ಯೆ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಸಿನಿಮಾ ನಿರ್ಮಾಣದಂತಹ ಸಾಹಸಕ್ಕೆ ಕೈ ಹಾಕಿದ್ದರೂ ಕಪಾಲಿ ಮೋಹನ್ ಕೈ ಸುಟ್ಟುಕೊಂಡಿರುವುದು ಇತರೆ ಉದ್ಯಮ ವಹಿವಾಟಿನಲ್ಲಿ.
Recommended Video
ಕುಂದಾಪುರ ಮೂಲದ ವಿ.ಕೆ.ಮೋಹನ್ ವಕ್ವಾಡಿ ಅಲಿಯಾಸ್ ಕಪಾಲಿ ಮೋಹನ್, ಬೆಂಗಳೂರಿನ ಪೀಣ್ಯದ ಬಸವೇಶ್ವರ ಬಸ್ಸ್ಟ್ಯಾಂಡ್ನ ತಮ್ಮದೇ ಹೋಟೆಲ್ನ ಕೋಣೆಯೊಂದರಲ್ಲಿ ನೇಣು ಹಾಕಿಕೊಂಡಿದ್ದರು. ಮಹಾಲಕ್ಷ್ಮಿ ಲೇಔಟ್ನಲ್ಲಿ ಕುಟುಂಬದ ಜತೆ ವಾಸವಿದ್ದ ಅವರು, ಸಿನಿಮಾ ನಿರ್ಮಾಣ, ವಿತರಣೆ, ಫೈನಾನ್ಸ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಅವರು ಬಸವೇಶ್ವರ ನಗರದ ತಮ್ಮು ಸುಪ್ರೀಂ ಹೋಟೆಲ್ಗೆ ರಾತ್ರಿ ತೆರಳಿದ್ದರು. ಅಲ್ಲಿ ಮಗ ಹಾಗೂ ತಮ್ಮ ಸ್ನೇಹಿತ ಮಂಜು ಎಂಬುವವರ ಜತೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.

ವಿಡಿಯೋದಲ್ಲಿ ಸಮಸ್ಯೆ ಹೇಳಿಕೊಂಡಿದ್ದರು
ಆತ್ಮಹತ್ಯೆಗೂ ಮುನ್ನ ಕಪಾಲಿ ಮೋಹನ್ ಒಂದು ಸೆಲ್ಫಿ ವಿಡಿಯೋ ಮಾಡಿದ್ದು, ಅದರಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಅವರಿಗೆ, ಸಾಲದ ಹಣ ಪಾವತಿ ಮಾಡದೆ ಇದ್ದರೆ ಹೋಟೆಲ್ಅನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಬ್ಯಾಂಕ್ ಅಧಿಕಾರಿಗಳು ಎಚ್ಚರಿಸಿದ್ದರು ಎನ್ನಲಾಗಿದೆ.

ಬಸ್ ನಿಲ್ದಾಣದ ಟೆಂಡರ್
ಪೀಣ್ಯದ ಬಸವೇಶ್ವರ ಬಸ್ಸ್ಟ್ಯಾಂಡ್ಗೆ ಅತಿ ಹೆಚ್ಚು ಹಣಕ್ಕೆ ಸಿಂಗಲ್ ಟೆಂಡರ್ ಕೂಗಿದ್ದೇನೆ. ಇದುವರೆಗೂ ಬಸ್ ಬಿಟ್ಟಿಲ್ಲ. ನಾನು ತುಂಬಾ ನೋವು ಅನುಭವಿಸಿದ್ದೇನೆ ಎಂದು ಆತ್ಮಹತ್ಯೆಗೂ ಮುಂಚೆ ಮಾಡಿದ ಸೆಲ್ಫಿ ವಿಡಿಯೋದಲ್ಲಿ ಮೋಹನ್ ಅಳಲು ತೋಡಿಕೊಂಡಿದ್ದರು.

ಏಳು ವರ್ಷದಿಂದ ನೋವು
ಏಳು ವರ್ಷದಿಂದಲೂ ನೋವು ಅನುಭವಿಸುತ್ತಿದ್ದೇನೆ. ನಿಮ್ಮಲ್ಲಿ ಬೇಡಿಕೊಳ್ಳುವುದೇನೆಂದರೆ ನನಗೆ ಇದರಲ್ಲಿ ನ್ಯಾಯ ದೊರಕಿಸಿಕೊಡಿ. ಹಾಗೆಯೇ ಸಿಎಂ ಸಾಹೇಬರಿಗೂ ಬೇಡಿಕೊಳ್ಳುತ್ತಿದ್ದೇನೆ. ಮನೆ ಮಠ ಎಲ್ಲ ಮಾರಿಬಿಟ್ಟಿದ್ದೇನೆ. ಸವದಿ ಸಾಹೇಬರಿಗೂ ಮನವಿ ಮಾಡುತ್ತಿದ್ದೇನೆ, ಬೆಂಗಳೂರಲ್ಲಿ ಮನೆ ಮಠ ಎಲ್ಲ ಮಾರಿಯಾಯ್ತು, ಬದುಕೋಕೆ ದಾರಿ ಇಲ್ಲ. ಆ ಸ್ಥಿತಿಗೆ ಬಂದಿದ್ದೇನೆ ಎಂದು ವಿವರಿಸಿದ್ದರು.

ಬಾಡಿಗೆ ಹಣ ಮನ್ನಾ ಮಾಡಿ
ಕೇವಲ ಬಸ್ಸ್ಟ್ಯಾಂಡ್ ಇಂದಲೇ ಕೋಟ್ಯಂತರ ರೂ ಕಳೆದುಕೊಂಡಿದ್ದೇನೆ. ಏಳು ವಾರದಿಂದ ಬ್ಯಾಂಕ್ ಲೋನ್ ಕೂಡ ಕಟ್ಟುವುದನ್ನು ನಿಲ್ಲಿಸಿದ್ದೇನೆ. ಇಷ್ಟು ಬಾಡಿಗೆ ಕಟ್ಟಿ ಎಂಟು ತಿಂಗಳಿಂದ ಕಟ್ಟುತ್ತಿಲ್ಲ. ದಯವಿಟ್ಟು ಬಸ್ ಬಿಡುವ ತನಕ ನನ್ನ ಬಾಡಿಗೆಯನ್ನು ಮನ್ನಾ ಮಾಡಬೇಕೆಂದು ಮನವಿ ಮಾಡುತ್ತೇನೆ. ಇದನ್ನು ಎಲ್ಲ ರೀತಿಯಲ್ಲಿಯೂ ಬೇಡಿಕೊಳ್ಳುತ್ತೇನೆ. ಸಚಿವರು ಅಧಿಕಾರಿಗಳಿಗೆ ಕೇಳಿಕೊಳ್ಳುತ್ತಿದ್ದೇನೆ ಎಂದು ಮೋಹನ್ ಹೇಳಿದ್ದರು.

ರಾತ್ರಿ ಜೋರಾಗಿ ಮಾತನಾಡುತ್ತಿದ್ದರು
ಪೀಣ್ಯ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಸುಪ್ರೀಂ ಹೋಟೆಲ್ ನಡೆಸುತ್ತಿದ್ದ ಮೋಹನ್, ಅದೇ ಹೋಟೆಲ್ನಲ್ಲಿರುವ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದರು. ಅವರು ರಾತ್ರಿ ಯಾರದ್ದೋ ಬಳಿ ಫೋನಲ್ಲಿ ಕೂಗಾಡುತ್ತಾ ಮಾತನಾಡುತ್ತಿದ್ದರು ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.

30 ಕೋಟಿ ರೂ ಸಾಲ
ಮೋಹನ್ ಅವರು ಬ್ಯಾಂಕ್ ಸೇರಿದಂತೆ ವಿವಿಧ ಕಡೆಗಳಲ್ಲಿ ಸುಮಾರು 30 ಕೋಟಿ ರೂ ಸಾಲ ಮಾಡಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ. ಸಾಲ ಕಟ್ಟದೆ ಇರುವುದಕ್ಕೆ ಹೋಟೆಲ್ ಜಪ್ತಿ ಮಾಡುವುದಾಗಿ ಬ್ಯಾಂಕ್ ಅಧಿಕಾರಿಗಳು ಎಚ್ಚರಿಸಿದ್ದರು. ಮಗಳ ಮದುವೆಗೆ ಕೆಲವೇ ವಾರ ಬಾಕಿ ಇದ್ದಾಗ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಈ ಹಿಂದೆ ಕೂಡ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.


Click it and Unblock the Notifications











