'ಕೂರಲು ಜಾಗ ಇಲ್ಲದಿದ್ರೂ ಪರವಾಗಿಲ್ಲ ಒಳಗೆ ಬಿಡಿ ಸರ್ ಎಂದ ದರ್ಶನ್'
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮೆಲ್ಲರನ್ನು ಅಗಲಿದ 19 ದಿನಗಳಾಗಿವೆ. ಇನ್ನೂ ಇಡೀ ಚಿತ್ರರಂಗ ಪುನೀತ್ ನಿಧನದ ನೋವಿನಿಂದ ಹೊರಬಂದಿಲ್ಲ. ಈ ವೇಳೆ ಪುನೀತ್ಗೆ ನಮನ ಸಲ್ಲಿಸುವ ಸಲುವಾಗಿ ಕನ್ನಡ ಚಿತ್ರರಂಗದಿಂದ ಪುನೀತ್ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ಸುಮಾರು 140ಕ್ಕೂ ಅಧಿಕ ಮಂದಿ ಕಲಾವಿದರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಅವರೆಲ್ಲರಿಗೂ ಪಾಸ್ ನೀಡಿದ್ದು, ಅದನ್ನು ತೋರಿಸಿಯೇ ಕಾರ್ಯಕ್ರಮಕ್ಕೆ ಬರೆಬೇಕೆಂದು ಸೂಚನೆ ನೀಡಿತ್ತು.
ಪುನೀತ್ ನಮನ ಕಾರ್ಯಕ್ರಮಕ್ಕೆ ಬರುವಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮಗೆ ಕೊಟ್ಟಿದ್ದ ಪಾಸ್ ಅನ್ನು ಮರೆತು ಬಂದಿದ್ದರು. ಈ ಕಾರಣಕ್ಕೆ ಕೆಲ ಹೊತ್ತು ಪೊಲೀಸರು ದರ್ಶನ್ರನ್ನು ತಡೆದು ನಿಲ್ಲಿಸಿದ್ದರು. ದರ್ಶನ್ ಅದೆಷ್ಟೇ ಪರಿಯಾಗಿ ಬೇಡಿಕೊಂಡರೂ ಒಳಗೆ ಬಿಟ್ಟಿರಲಿಲ್ಲ.

ದರ್ಶನ್ ತಡೆದ ಪೊಲೀಸರು
ಫಿಲ್ಮ್ ಚೇಂಬರ್ ನೀಡಿದ ಆಹ್ವಾನದ ಮೇರೆಗೆ ಚಾಲೆಂಜಿಂಗ್ ದರ್ಶನ್ ಪುನೀತ್ ನಮನ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಟ ಯಶಸ್ ಸೂರ್ಯ ಸೇರಿದಂತೆ ಚಿತ್ರರಂಗದ ಸ್ನೇಹಿತರು ಹಾಗೂ ಆಪ್ತರೊಂದಿಗೆ ದರ್ಶನ ಅರಮನೆ ಮೈದಾನಕ್ಕೆ ಬಂದಿದ್ದರು. ಮೊದಲೇ ಸ್ವಲ್ಪ ತಡವಾಗಿದ್ದರಿಂದ ಬೇಗನೇ ಕಾರ್ಯಕ್ರಮಕ್ಕೆ ಸೇರಿಕೊಳ್ಳಲು ಮುಂದಾಗಿದ್ದ ದರ್ಶನ್ಗೆ ಪೊಲೀಸ್ ತಡೆದಿದ್ದರು. ಪಾಸ್ ತೋರಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ದರ್ಶನ್ ಪಾಸ್ ಮರೆತು ಬಂದಿದ್ದರು. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ಕೆಲ ಸಮಯ ಹೊರಗೆ ನಿಲ್ಲಬೇಕಾಗಿತ್ತು.

ಒಳಗೆ ಬಿಡಿ ಎಂದು ಬೇಡಿದ ದಾಸ
ಪಾಸ್ ಇದ್ದರೆ ಮಾತ್ರ ಒಳಗೆ ಬಿಡ್ತೀವಿ ಎಂದ ಪೊಲೀಸರ ಬಳಿ ದರ್ಶನ್ ಮನವಿ ಮಾಡಿಕೊಳ್ಳುತ್ತಲೇ ಇದ್ದರು. ಪಾಸ್ ಇದ್ದವರಿಗೆ ಮಾತ್ರ ಕೂರಲು ಅವಕಾಶವಿದೆ. ಹಾಗಾಗಿ ಪಾಸ್ ಇದ್ದರೆ ಮಾತ್ರ ಒಳಗೆ ಬಿಡ್ತಿವಿ ಎಂದಿದ್ರೂ ಪೊಲೀಸ್ ಒಪ್ಪಲಿಲ್ಲ. ಬಳಿಕ ದರ್ಶನ್ ಒಳಗೆ ಕೂರಲು ಅವಕಾಶ ಇಲ್ಲದೆ ಇದ್ದರೂ ಪರವಾಗಿಲ್ಲ. ನಿಂತುಕೊಂಡೇ ಕಾರ್ಯಕ್ರಮ ನೋಡುತ್ತೇವೆ. ಕುಡಿಯಲು ನೀರು ಸಿಗದೆ ಇದ್ದರೂ ಪರವಾಗಿಲ್ಲ ಎಂದು ಮನವಿ ಮಾಡಿಕೊಂಡು ಬಳಿಕ ಪೊಲೀಸ್ ಒಳಗೆ ಬಿಟ್ಟಿದ್ದಾರೆ.
ದರ್ಶನ್ ಜೊತೆ ಯಶಸ್ ಸೂರ್ಯ, ವಿನೋದ್ ಪ್ರಭಾಕರ್ ಕೂಡ ಪುನೀತ್ ನಮನ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ, ಯಶಸ್ ಸೂರ್ಯ ಹಾಗೂ ವಿನೋದ್ ಪ್ರಭಾಕರ್ ಬಳಿ ಪಾಸ್ ಇರಲಿಲ್ಲ ಎನ್ನಲಾಗಿದೆ. ಒಳಗೆ ಬಿಡಬಹುದು ಎಂಬ ಅಂದಾಜಿನ ಮೇಲೆ ಬಂದಿದ್ದರು. ಆದರೆ, ಪೊಲೀಸರು ಅವರಿಗೂ ಪಾಸ್ ಕೇಳಿದ್ದರಿಂದ ಕೆಲ ಕಾಲ ಹೊರಗೆ ಉಳಿಯಬೇಕಾಗಿತ್ತು.

ಕಾಣದ ಕೈಯಲ್ಲಿ ಗೊಂಬೆ ನೀನು
ವೇದಿಕೆ ಮೇಲೆ ಬಂದ ದರ್ಶನ್ ಹಾಡೊಂದನ್ನು ನೆನಪಿಸಿಕೊಂಡರು. ನಾಗೇಂದ್ರ ಪ್ರಸಾದ್ ಬರೆದಿದ್ದ ಕಾಣದ ಕೈಯಲ್ಲಿ ಗೊಂಬೆ ನೀನು.. ಹಣೆಮೇಲೆ ಕೆತ್ತಿದ ಮೇಲೆ ತಿದ್ದೋರಾರು.. ಅನ್ನುವ ಸಾಲನ್ನು ನೆನಪಿಸಿಕೊಂಡರು. ಆಸ್ಪತ್ರೆ ಗೇಟಿನೊಳಗೆ ಹೋದವರು ವಾಪಾಸ್ ಬರುತ್ತಾರೆ ಎಂದುಕೊಂಡಿದ್ದೆವು. ಆದರೆ, ಬರೆಲೇ ಇಲ್ಲ. ದೇವರು ಅವರ ಹಣೆಯ ಮೇಲೆ 47 ಅಂತ ಬರೆದಿದ್ದ ಅಂತ ಕಾಣುತ್ತೆ. ಅದನ್ನು ಅವನಿಂದಲೇ ಅಳಿಸಲು ಆಗಿಲ್ಲ. ಪುನೀತ್ ಮಾಡಿದ ಒಳ್ಳೆ ಕೆಲಸಗಳನ್ನು ನಾವು ಮುಂದುವರೆಸಿಕೊಂಡು ಹೋಗೋಣ. ಅವರು ಎಂದಿಗೂ ನಮ್ಮ ನೆನಪಿನಲ್ಲಿ ಉಳಿಯುತ್ತಾರೆ." ಎಂದು ವೇದಿಕೆ ಮೇಲೆ ಪುನೀತ್ ನೆನಪಿಸಿಕೊಂಡರು ದರ್ಶನ್.
ಒಳಗಡೆ ಕೂರಲೂ ಜಾಗವಿರಲಿಲ್ಲ
ಪುನೀತ್ ನಮನ ಕಾರ್ಯಕ್ರಮಕ್ಕೆ ಬಂದಿದ್ದ ದರ್ಶನ್ಗೆ ಒಳಗೆ ಕೂಡ ಕೂರಲು ಜಾಗವಿರಲಿಲ್ಲ. ಸೆಲೆಬ್ರೆಟಿಗಳಿಗೆ ಅಂತ ಮೀಸಲಾಗಿದ್ದ ಆಸನಗಳು ಅದಾಗಲೇ ಫುಲ್ ಆಗಿತ್ತು. ಹೀಗಾಗಿ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕಿತ್ತು. ಅಲ್ಲಿ ಜನರು ಹೆಚ್ಚಿದ್ದರಿಂದ ದರ್ಶನ್ ಹೆಚ್ಚು ಹೊತ್ತು ಇರದೆ ಬೇಗನೆ ಕಾರ್ಯಕ್ರಮದಿಂದ ನಿರ್ಗಮಿಸಿದ್ದರು.


Click it and Unblock the Notifications











