ಯುವರತ್ನ ಸಿನಿಮಾ ಮರುಬಿಡುಗಡೆ ಮಾಡುವಂತೆ ಒತ್ತಾಯ
ಪುನೀತ್ ರಾಜ್ಕುಮಾರ್ ಸಿನಿಮಾ ಒಮ್ಮೆ ನೋಡಿದರೆ ಮತ್ತೆ ನೋಡಬೇಕು ಅನಿಸುತ್ತೆ. ಒಂದು ಸಿನಿಮಾಗೆ ಬೇಕಿರುವ ಎಲ್ಲಾ ಅಂಶಗಳೂ ಆ ಸಿನಿಮಾದಲ್ಲಿ ಇರುತ್ತೆ. ಪುನೀತ್ ಮಾಸ್ ಹೀರೊ ಆಗಿದ್ದರೂ ಆ ಸಿನಿಮಾಗಳಲ್ಲಿ ಒಂದು ಸಂದೇಶವಿರುತ್ತಿತ್ತು. ಪುನೀತ್ ಡ್ಯಾನ್ಸ್, ಫೈಟ್ ಎಲ್ಲವೂ ಅಭಿಮಾನಿಗಳಿಗೆ ಬೇಕಿತ್ತು. ಅದಕ್ಕೆ ತಕ್ಕಂತೆ ನಿರ್ದೇಶಕರು ಕಥೆಯನ್ನೂ ಹೆಣೆಯುತ್ತಿದ್ದರು. ಇವೆಲ್ಲವುಗಳ ಜೊತೆ ಪುನೀತ್ ಸಿನಿಮಾದಲ್ಲಿ ಒಂದು ಮೆಸೇಜ್ ಇರಲೇಬೇಕಿತ್ತು.
ರಾಜಕುಮಾರ್, ನಟಸಾರ್ವಭೌಮ ಕೊನೆಯಲ್ಲಿ ತೆರೆಕಂಡ ಯುವರತ್ನ ಸಿನಿಮಾಗಳಲ್ಲಿ ಅಪ್ಪು ಅಭಿಮಾನಿಗಳಿಗೆ ಬೇಕಿರುವ ಎಲ್ಲಾ ಅಂಶಗಳೂ ಇದ್ದವು. ಜೊತೆ ಸಿನಿಮಾ ನೋಡಿ ಮನೆಗೆ ಹೋಗುವ ಪ್ರೇಕ್ಷಕರಲ್ಲಿ ಮನಃ ಪರಿವರ್ತನೆಯಾಗುವಂತಹ ಅಂಶಗಳೂ ಕೂಡ ಇರುತ್ತಿದ್ದವು. ಅಂತಹ ಕತೆಗಳನ್ನು ಮಾತ್ರ ಪುನೀತ್ ರಾಜ್ಕುಮಾರ್ ಆಯ್ಕೆ ಮಾಡಿಕೊಳ್ಳುತ್ತಿದ್ದರು. ತೆರೆಕಂಡ ಅಪ್ಪುವಿನ ಕೊನೆಯ ಸಿನಿಮಾ ಯುವರತ್ನದಲ್ಲೂ ಇಂತಹದ್ದೇ ಒಂದು ಸಂದೇಶವಿತ್ತು.
ಯುವರತ್ನ ಸಿನಿಮಾ ಮರುಬಿಡುಗಡೆ ಮಾಡಿ
ಯುವರತ್ನ ಸಿನಿಮಾದಲ್ಲಿ ಶಿಕ್ಷಣ ಸಂಸ್ಥೆ ಉಳಿಸಲು ಅಪ್ಪು ಹೋರಾಟದ ಕಥೆಯಿತ್ತು. ಪುನೀತ್ ಉಪನ್ಯಾಸ ಮಾಡುವ ದೃಶ್ಯವಿತ್ತು. ಅಭಿಮಾನಿಗಳು ಹಿಂದೆಂದೂ ನೋಡದ ಅಪ್ಪು ಸಿನಿಮಾ ಆಗಿತ್ತು. ಆದರೆ ಯುವರತ್ನ ಬಿಡುಗಡೆಯಾಗುತ್ತಿದ್ದಂತೆ, ಎರಡನೇ ಅಲೆ ಉಲ್ಬಣಗೊಂಡಿತ್ತು. ಈ ಕಾರಣಕ್ಕಾಗಿಯೇ ಸರ್ಕಾರ ಮತ್ತೆ ಚಿತ್ರಮಂದಿರದಲ್ಲಿ ಶೇ.50ರಷ್ಟು ಆಸನ ವ್ಯವಸ್ಥೆ ಇರಬೇಕೆಂದು ಆದೇಶ ನೀಡಿತ್ತು. ಒಂದು ವಾರ ಚಿತ್ರಮಂದಿರದಲ್ಲಿದ್ದ ಈ ಸಿನಿಮಾವನ್ನು ಸಾಕಷ್ಟು ಅಭಿಮಾನಿಗಳು ನೋಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮತ್ತೆ ಕರ್ನಾಟಕದಾದ್ಯಂತ ಯುವರತ್ನ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಿ ಅಂತ ಅಪ್ಪು ಫ್ಯಾನ್ಸ್ ಬೇಡಿಕೆ ಇಡುತ್ತಿದ್ದಾರೆ.

ಅಪ್ಪು ಅಗಲಿದ ಬಳಿಕವೇ ಯುವರತ್ನ ಬಿಡುಗಡೆ
ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಕೆಲವು ಚಿತ್ರಮಂದಿರಗಳು ಸ್ವಯಂ ಪ್ರೇರಿತರಾಗಿ ಯುವರತ್ನ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಉಚಿತವಾಗಿ ಯುವರತ್ನ ಸಿನಿಮಾವನ್ನು ತೋರಿಸಲಾಗಿತ್ತು. ಆದರೆ, ಅಭಿಮಾನಿಗಳು ಯುವರತ್ನ ಸಿನಿಮಾವನ್ನು ಕರ್ನಾಟಕದಾದ್ಯಂತ ಮತ್ತೆ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್ರಾಮ್ ಬಳಿ ಹೊಸ ಬೇಡಿಕೆ ಇಟ್ಟಿದ್ದಾರೆ.
"ಯುವರತ್ನ ಬಿಡುಗಡೆ ಆದಾಗ ಸಾಕಷ್ಟು ತೊಂದರೆ ಆಗಿ ಚಿತ್ರ ಪ್ರದರ್ಶನ ರದ್ದಾಗಿದೆ. ದಯವಿಟ್ಟು ಈಗಲಾದರೂ ಮತ್ತೊಮ್ಮೆ ರಿಲೀಸ್ ಮಾಡಿ. ಸಿನಿಮಾ ನೋಡೋ ಭಾಗ್ಯ ಮಾಡಿಕೊಡಿ ಅಂತ ಪುನೀತ್ ಅಭಿಮಾನಿ ಬಳಗ ನಿರ್ಮಾಪಕರು ಹಾಗೂ ನಿರ್ದೇಶಕರ ಮುಂದೆ ಬೇಡಿಕೆ ಇಟ್ಟಿದೆ. ಇವರೊಂದಿಗೆ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಕೂಡ ಯುವರತ್ನ ಮತ್ತೆ ಬಿಡುಗಡೆ ಆಗಲೇ ಬೇಕು ಅಂತ ಪಟ್ಟು ಹಿಡಿದಿದ್ದಾರೆ.

ರಿಲೀಸ್ ಆದ 9 ದಿನಕ್ಕೆ ಒಟಿಟಿಯಲ್ಲಿ ಯುವರತ್ನ ರಿಲೀಸ್
ಕೊರೊನಾ 2ನೇ ಅಲೆ ಹೆಚ್ಚಾಗಿದ್ದರಿಂದ ಚಿತ್ರಮಂದಿರದಲ್ಲಿ ಆಸನ ವ್ಯವಸ್ಥೆಯನ್ನು ಶೇ.50 ರಷ್ಟು ಇಳಿಸಲಾಗಿತ್ತು. ಒಂದಿಷ್ಟು ಹೋರಾಟದ ಬಳಿಕ ಒಂದು ವಾರ ಶೇ.100ರಷ್ಟು ಆಸನ ವ್ಯವಸ್ಥೆಯಲ್ಲಿ ಸಿನಿಮಾ ಪ್ರದರ್ಶನ ಮಾಡಲು ಅವಕಾಶ ನೀಡಲಾಗಿತ್ತು. ಆ ಬಳಿಕ ಥಿಯೇಟರ್ನಲ್ಲಿ ಶೇ.50 ರಷ್ಟು ಟಿಕೆಟ್ ನೀಡುವ ಆದೇಶ ಹೊರಬಂದಿದ್ದರಿಂದ, ಯುವರತ್ನ ಬಿಡುಗಡೆಯಾದ 9 ದಿನಕ್ಕೆ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಮಾಡಲಾಯ್ತು. ಇದು ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಬೇಸರ ತರಿಸಿತ್ತು.
ಈಗ ಪುನೀತ್ ರಾಜ್ಕುಮಾರ್ ಅಗಲಿಕೆಯ ನೋವಿನಲ್ಲಿರುವ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ತೆರೆಕಂಡ ಕೊನೆಯ ಸಿನಿಮಾ ಯುವರತ್ನವನ್ನು ಮರುಬಿಡುಗಡೆ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಯುವರತ್ನ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ರಾಮ್ ಅಭಿಮಾನಿಗಳ ಒತ್ತಡಕ್ಕೆ ಮಣಿಯುತ್ತಾರಾ? ಅನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಎದುರಾಗಿದೆ.

ದೊಡ್ಡ ತಾರಾ ಬಳಗವಿದ್ದ ಸಿನಿಮಾ
ಯುವರತ್ನ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇತ್ತು. ಪುನೀತ್ ಜೊತೆ ಸಾಯೇಷಾ ನಾಯಕಿಯಾಗಿ ನಟಿಸಿದ್ದರೆ, ಪ್ರಕಾಶ್ ರೈ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿ ನಟಿಸಿದ್ದರು. ಧನಂಜಯ್, ದಿಗಂತ್, ಸಾಯಿ ಕುಮಾರ್, ಸೋನು ಗೌಡ, ಸುಧಾರಾಣಿ, ರಂಗಾಯಣ ರಘು, ಸಾಧುಕೋಕಿಲಾ, ಅಚ್ಯುತ್ ಕುಮಾರ್ ಸೇರಿದಂತೆ ಸಾಕಷ್ಟು ನಟರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಾಗಿ ಯುವರತ್ನ ನೋಡಲು ಅಪ್ಪು ಅಭಿಮಾನಿಗಳು ಕಾದು ಕೂತಿದ್ದಾರೆ.


Click it and Unblock the Notifications











