ನಟ ದಿಗಂತ್ ವಿರುದ್ಧ ಠಾಣೆಯಲ್ಲಿ ಕೇಸು ದಾಖಲು
ಈ ಅಪಘಾತದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಬೈಕ್ ಸವಾರ ಸಯೀದ್ ಝೈನ್ ಬೈಕು ಜಖಂ ಆಗಿತ್ತು. ಈ ಸಂಬಂಧ ಅವರು ಶಿವಾಜಿನಗರ ಪೊಲೀಸರಿಗೆ ದೂರು ನೀಡಿದ್ದರು. ದಿಗಂತ್ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿಗೂ ಸಾಕಷ್ಟು ಡ್ಯಾಮೇಜ್ ಆಗಿತ್ತು.
ಅಪಘಾತ ಸಂಭವಿಸಿದ ಬಳಿಕ ದಿಗಂತ್ ಹಾಗೂ ಬೈಕ್ ಸವಾರ ಝೈನ್ ರಾಜಿ ಮಾಡಿಕೊಂಡಿದ್ದರು. ಶಾಹಿದ್ಗೆ ರು.15,000 ಕೊಡುವುದಾಗಿ ದಿಗಂತ್ ಪ್ರಾಮಿಸ್ ಮಾಡಿದ್ದರು. ಆದರೆ ಮರುದಿನ ನಟ ದಿಗಂತ್ ಮನೆಗೆ ಹೋದಾಗ ಅವರ ಭದ್ರತಾ ಸಿಬ್ಬಂದಿ ಶಾಹಿದ್ರನ್ನು ಬರಿಗೈಯಲ್ಲಿ ಸಾಗಹಾಕಿದ್ದಾಗಿ ಝೈನ್ ತಿಳಿಸಿದ್ದಾರೆ.
ಬಳಿಕ ದಿಗಂತ್ ಅವರನ್ನು ಝೈನ್ ಫೋನು ಮೂಲಕ ಸಂಪರ್ಕಿಸಿದಾಗ ಅವರು ಹಣಕೊಡಲು ನಿರಾಕರಿಸಿದ್ದಾರೆ. ಹಾಗಾಗಿ ತಾನು ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಯಿತು ಎಂದಿದ್ದಾರೆ ಝೈನ್.
"ಅಪಘಾತ ಸಂಭವಿಸಿದಾಗ ನಾನು ಕಾರನ್ನು ಚಾಲನೆ ಮಾಡುತ್ತಿರಲಿಲ್ಲ, ಡ್ರೈವರ್ ಕಾರು ಚಲಾಯಿಸುತ್ತಿದ್ದರು. ನನ್ನ ಕಾರಿಗೂ ಸಾಕಷ್ಟು ಡ್ಯಾಮೇಜ್ ಆಗಿದೆ. ಅವರ ಬೈಕ್ ಮಡ್ ಗಾರ್ಡ್ ಗೆ ಕ್ರಾಕ್ ಬಂದಿದೆ. ಆದ ನಷ್ಟವನ್ನು ಕಟ್ಟಿಕೊಟ್ಟಿದ್ದೇನೆ. ನಾನೊಬ್ಬ ನಟ ಎಂಬ ಕಾರಣಕ್ಕೆ ಬೈಕ್ ಸವಾರ ಅನಾವಶ್ಯಕ ಪ್ರಚಾರ ಮಾಡುತ್ತಿದ್ದಾರೆ" ಎಂದು ನಮ್ಮ 'ಒನ್ ಇಂಡಿಯಾ ಕನ್ನಡ'ಕ್ಕೆ ದಿಗಂತ್ ತಿಳಿಸಿದ್ದಾರೆ.
ದೊಮ್ಮಲೂರಿನಲ್ಲಿ ಕಾಲ್ ಸೆಂಟರ್ ಉದ್ಯೋಗಿಯಾಗಿರುವ ಝೈನ್ ಶನಿವಾರ ರಾತ್ರಿ ಸುಮಾರು 11.30ರ ಸಮಯದಲ್ಲಿ ಸೇಂಟ್ ಜಾನ್ಸ್ ರಸ್ತೆಯಲ್ಲಿ ಬೈಕನ್ನು ನಿಲ್ಲಿಸಿಕೊಂಡಿದ್ದರಂತೆ. ಆ ವೇಳೆಯಲ್ಲಿ ಕಾರಿನಲ್ಲಿ ಬಂದ ದಿಗಂತ್ ಹಿಮ್ಮುಖವಾಗಿ ಚಾಲನೆ ಮಾಡಿ ತಮ್ಮ ಬೈಕನ್ನು ಜಖಂಗೊಳಿಸಿದರು ಎಂದಿದ್ದಾರೆ. ಅಜಾಗರೂಕ ಚಾಲನೆ ಆರೋಪದ ಮೇಲೆ ದಿಗಂತ್ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)


Click it and Unblock the Notifications












