ಎಂಥಾ ದುರಂತ: ಅಪ್ಪ-ಮಗನ ಪ್ರಾಣ ತೆಗೆದದ್ದು ಒಂದೇ ಕಾರ್ ನಂಬರ್, ಒಂದೇ ಹೈವೇ.!
Recommended Video

ಬುಧವಾರ ನಸುಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೆಲುಗಿನ ಖ್ಯಾತ ನಟ ನಂದಮೂರಿ ಹರಿಕೃಷ್ಣ (61) ಮೃತಪಟ್ಟಿದ್ದಾರೆ. ಅಭಿಮಾನಿಯ ಮದುವೆಯಲ್ಲಿ ಪಾಲ್ಗೊಳ್ಳಲು ನೆಲ್ಲೂರಿಗೆ ಹೊರಟಿದ್ದ ನಂದಮೂರಿ ಹರಿಕೃಷ್ಣ ತೆಲಂಗಾಣದ ನಲ್ಗೊಂಡ ಬಳಿ ಅಪಘಾತಕ್ಕೀಡಾದರು.
ಅತಿ ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದ ನಂದಮೂರಿ ಹರಿಕೃಷ್ಣ, ಎದುರಿಗಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿ ವಾಹನ ಪಲ್ಟಿಯಾಗಿದೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ನಂದಮೂರಿ ಹರಿಕೃಷ್ಣ ಅವರನ್ನು ಕಾಮಿನೇನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿ ಆಗದೆ, ನಂದಮೂರಿ ಹರಿಕೃಷ್ಣ ಕೊನೆಯುಸಿರೆಳೆದರು.
ನಾಲ್ಕು ವರ್ಷಗಳ ಹಿಂದೆ ನಂದಮೂರಿ ಹರಿಕೃಷ್ಣ ಅವರ ಪುತ್ರ ಜಾನಕಿ ರಾಮ್ ಕೂಡ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ವಿಚಿತ್ರ ಅಂದ್ರೆ, ಅಂದು ಜಾನಕಿ ರಾಮ್ ಪ್ರಯಾಣ ಮಾಡಿದ್ದ ಕಾರಿನ ಸಂಖ್ಯೆ ಹಾಗೂ ಇಂದು ನಂದಮೂರಿ ಹರಿಕೃಷ್ಣ ಪ್ರಯಾಣ ಮಾಡುತ್ತಿದ್ದ ಕಾರಿನ ಸಂಖ್ಯೆ ಒಂದೇ.! ಹಾಗೇ, ಎರಡೂ ಅಪಘಾತ ನಡೆದಿರುವುದು ನಲ್ಗೊಂಡ ಬಳಿಯೇ.! ಮುಂದೆ ಓದಿರಿ...

ನಾಲ್ಕು ವರ್ಷಗಳ ಹಿಂದೆ ನಡೆದಿದ್ದೇನು.?
ನಾಲ್ಕು ವರ್ಷಗಳ ಹಿಂದೆ... ಅಂದ್ರೆ, 17 ಡಿಸೆಂಬರ್ 2014 ರಂದು ನಂದಮೂರಿ ಜಾನಕಿ ರಾಮ್ (ನಂದಮೂರಿ ಹರಿಕೃಷ್ಣ ಪುತ್ರ) ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಅಂದು ಜಾನಕಿ ರಾಮ್ ಪ್ರಯಾಣ ಮಾಡಿದ್ದ ಕಾರಿನ ಸಂಖ್ಯೆ AP 29 BD 2323.

ಪ್ರಾಣ ತೆಗೆದಿದ್ದು ಇದೇ ಸಂಖ್ಯೆ.!
ಇಂದು ನಂದಮೂರಿ ಹರಿಕೃಷ್ಣ ಪ್ರಯಾಣ ಮಾಡುತ್ತಿದ್ದ ಕಾರಿನ ಸಂಖ್ಯೆ AP 28 BW 2323. ಈ ಎರಡೂ ಕಾರುಗಳು ಅಪಘಾತಕ್ಕೀಡಾಗಿ, ಪ್ರಯಾಣ ಬೆಳೆಸುತ್ತಿದ್ದವರ ಜೀವವನ್ನ ನುಂಗಿದೆ.

ಡೇಂಜರಸ್ ನಲ್ಗೊಂಡ.!
ನಾಲ್ಕು ವರ್ಷಗಳ ಹಿಂದೆ, ವಿಜಯವಾಡದಿಂದ ಹೈದರಾಬಾದ್ ಗೆ ಜಾನಕಿ ರಾಮ್ ಪ್ರಯಾಣ ಮಾಡುತ್ತಿದ್ದರು. ನಲ್ಗೊಂಡ ಹತ್ತತ್ರ ಸಮೀಪಿಸುತ್ತಿದ್ದಂತೆಯೇ ಜಾನಕಿ ರಾಮ್ ಪ್ರಯಾಣ ಮಾಡುತ್ತಿದ್ದ ಕಾರು ಆಕ್ಸಿಡೆಂಟ್ ಆಯ್ತು. ಇನ್ನೂ ನಂದಮೂರಿ ಹರಿಕೃಷ್ಣ ಕೂಡ ನಲ್ಗೊಂಡ ಬಳಿಯೇ ಅಪಘಾತಕ್ಕೀಡಾಗಿದ್ದಾರೆ.

ಜೂ.ಎನ್.ಟಿ.ಆರ್ ಗೂ ಆಗಿತ್ತು ಅಪಘಾತ
2009 ರಲ್ಲಿ ಚುನಾವಣೆ ಪ್ರಚಾರ ನಡೆಸಿ ವಾಪಸ್ ಹೈದರಾಬಾದ್ ಗೆ ತೆರಳುತ್ತಿದ್ದಾಗ, ಜೂ.ಎನ್.ಟಿ.ಆರ್ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಯಿತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಜೂ.ಎನ್.ಟಿ.ಆರ್ ಪಾರಾದರು. ಕಾಕತಾಳೀಯ ಅಂದ್ರೆ, ಅಂದು ಜೂ.ಎನ್.ಟಿ.ಆರ್ ಗೆ ಆಕ್ಸಿಡೆಂಟ್ ಆಗಿದ್ದು ಇದೇ ನಲ್ಗೊಂಡ ಬಳಿ.!

ನಂದಮೂರಿ ಹರಿಕೃಷ್ಣ ಕುರಿತು
1956ರ ಸೆಪ್ಟೆಂಬರ್ 2ರಂದು ಆಂಧ್ರಪ್ರದೇಶದ ನಿಮ್ಮಕರುದಲ್ಲಿ ಜನಿಸಿದ್ದವರು ನಂದಮೂರಿ ಹರಿಕೃಷ್ಣ. ತೆಲುಗು ಚಿತ್ರರಂಗದ ಖ್ಯಾತ ನಟ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಂದಮೂರಿ ತಾರಕ ರಾಮರಾವ್ (ಎನ್ಟಿಆರ್) ಅವರ ನಾಲ್ಕನೆಯ ಮಗ ಈ ನಂದಮೂರಿ ಹರಿಕೃಷ್ಣ. ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಂದಮೂರಿ ಹರಿಕೃಷ್ಣ, ಬಳಿಕ ನಾಯಕನಾಗಿ ಟಾಲಿವುಡ್ ನಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತೆಲುಗು ದೇಶಂ ಪಾರ್ಟಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದವರು ನಂದಮೂರಿ ಹರಿಕೃಷ್ಣ. ಹರಿಕೃಷ್ಣ ಅವರಿಗೆ ಮೊದಲ ಪತ್ನಿಯಿಂದ ಜಾನಕಿ ರಾಮ್, ಕಲ್ಯಾಣ ರಾಮ್ ಮತ್ತು ಸುಹಾಸಿನಿ ಎಂಬ ಮಕ್ಕಳಿದ್ದಾರೆ. ಬಳಿಕ ಮತ್ತೊಂದು ಮದುವೆಯಾಗಿದ್ದ ಅವರಿಗೆ ಜೂನಿಯರ್ ಎನ್ಟಿಆರ್ ಎಂದೇ ಖ್ಯಾತರಾದ ತಾರಕ ರಾಮರಾವ್ ಜನಿಸಿದ್ದರು.


Click it and Unblock the Notifications











