ಸತೀಶ್ ನೀನಾಸಂ 'ದರ್ಶನ್, ಸುದೀಪ್, ಪುನೀತ್' ಬಗ್ಗೆ ಹೇಳಿದ ಮಾತುಗಳಿವು..
ಅಭಿನಯ ಚತುರ ಸತೀಶ್ ನೀನಾಸಂ ಮತ್ತು ನಟಿ ಶೃತಿ ಹರಿಹರನ್ ನಟಿಸಿರುವ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರ ನೋಡಿದ ಬ್ಯೂಟಿಫುಲ್ ಮನಸ್ಸಿನ ಸಿನಿ ಪ್ರಿಯರು ಮನಸಾರೆ ಮೆಚ್ಚಿದ್ದಾರೆ.['ಬ್ಯೂಟಿಫುಲ್ ಮನಸ್ಸುಗಳು' ಚಿತ್ರಕ್ಕೆ ಕಿಚ್ಚ ಸುದೀಪ್ ವಿಮರ್ಶೆ..!]
ವಿಶೇಷ ಅಂದ್ರೆ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರವನ್ನು ಕಿಚ್ಚ ಸುದೀಪ್ ಅವರಿಗೆ ವಿಶೇಷವಾಗಿ ಬಿಡುಗಡೆಗೂ ಮುನ್ನ ಪ್ರದರ್ಶನ ಮಾಡಲಾಗಿತ್ತು. ಸಿನಿಮಾ ನೋಡಿದ ಕಿಚ್ಚ ಫಿದಾ ಆಗಿ ಖುಷಿಯಲ್ಲಿ ಅಮೇಜಿಂಗ್ ಎಂದು ಹೇಳಿದ್ದರು. ಅಲ್ಲದೇ ಇತರೆ ಸ್ಯಾಂಡಲ್ ವುಡ್ ನಟ-ನಟಿಯರು ಸಹ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾ ಸಕ್ಸಸ್ ಗಾಗಿ ಪ್ರೋತ್ಸಾಹ ನೀಡಿದ ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್ ಅವರಿಗೆ ಸತೀಶ್ ನೀನಾಸಂ ತಮ್ಮ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ. ಸತೀಶ್ ನೀನಾಸಂ ಹೇಳಿದ್ದೇನು ಇಲ್ಲಿದೆ ಮಾಹಿತಿ.

ಸುದೀಪ್ ಸರ್ ನನ್ನ ಒಡಹುಟ್ಟಿದ ಅಣ್ಣ..
"ಸುದೀಪ್ ಸರ್, ನಾನು ಬಿಗ್ ಬಾಸ್ ಮನೆಗೆ ಹೋದಾಗಿನಿಂದ ಹಿಡಿದು, ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮುಂಚಿನಿಂದ, ನನ್ನ ಒಡಹುಟ್ಟಿದ ಅಣ್ಣನಿಗಿಂತ ಹೆಚ್ಚಾಗಿ ಪ್ರೋತ್ಸಾಹಿಸಿದ್ದಾರೆ. ಕಾರಣವಿಲ್ಲದೆ ನನ್ನನ್ನು ಅಪಾರ ಪ್ರೀತಿಸುತ್ತಿದ್ದಾರೆ..ಸಿನಿಮಾ ಗೆದ್ದ ತಕ್ಷಣ ಕರೆ ಮಾಡಿ ಕರೆದು ನನಗಾಗಿ ಪಾರ್ಟಿ ಕೊಟ್ಟು, ಒಂದು ಹೇಳಲಾಗದ ಬಹುದೊಡ್ಡ ಗಿಫ್ಟ್ ನೀಡಿದ್ದಾರೆ. ನಾನು ಯಾವತ್ತು ಅವರಿಂದ ಏನನ್ನು ಅಪೇಕ್ಷೆ ಮಾಡಿಲ್ಲ, ಆದರೂ...ಓಹ್ ಬಿಡಿ ಅವರ ಒಬ್ಬ ದೊಡ್ಡ ಸೂಪರ್ ಸ್ಟಾರ್ ಎನ್ನುವುದಕ್ಕಾಗಿ ಇದನ್ನ ಹೆಮ್ಮೆಯಿಂದ ಹೇಳುತ್ತಿಲ್ಲ, ಒಬ್ಬ ಅದ್ಬುತ ವ್ಯಕ್ತಿಯ ಬಗ್ಗೆ ನಾನು ಮಾತಾಡುತ್ತಿದ್ದೇನೆ" ಎಂದು ಸತೀಶ್ ನೀನಾಸಂ ಫೇಸ್ ಬುಕ್ ನಲ್ಲಿ ಬರೆದು ಕೊಂಡಿದ್ದಾರೆ.[ಬ್ಯೂಟಿಫುಲ್ ಮನಸ್ಸುಗಳು' ಚಿತ್ರ ನೋಡಿದವರ ಟ್ವಿಟರ್ ಕಾಮೆಂಟ್ಸ್]

ದರ್ಶನ್ ತಾವೇ ಗೆದ್ದಂತೆ ಖುಷಿ ಪಟ್ಟರು..
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸತೀಶ್ ಅವರ ಚಿತ್ರಕ್ಕೆ ಸಾಥ್ ಕೊಟ್ಟ ಹಿನ್ನೆಲೆಯಲ್ಲಿ "ದರ್ಶನ್ ಸರ್ ಆಡಿಯೋ ರಿಲೀಸ್ ಗೆ ಕರೆಯಲು ಹೋದಾಗ ಅದೆಷ್ಟೋ ಪ್ರೀತಿಯಿಂದ ಬರಮಾಡಿಕೊಂಡರು, ನಿಮಗೆ ಬೇಕಾದ ದಿನಾಂಕದಲ್ಲಿ ಬಂದು ಬಿಡುಗಡೆ ಮಾಡುತ್ತೇನೆ ಎಂದರು., ಶೂಟಿಂಗಿನಲ್ಲಿ ಕಾಲು ಮುರಿದಿತ್ತು, ಆದರೂ ಬಂದರು ಬಹಳ ಸಂಭ್ರಮದಿಂದ ಆಡಿಯೋ ಬಿಡುಗಡೆ ಮಾಡಿ ತಮ್ಮ ಹಾರವನ್ನ ನಮ್ಮ ಕೊರಳಿಗೆ ಹಾಕಿ, ಅವ್ವ ಕುಳಿತಲ್ಲಿಗೆ ಬಂದು ಸಂತೋಷಪಟ್ಟರು. ಬ್ಯೂಟಿಫುಲ್ ಮನಸ್ಸುಗಳು ನೋಡಬೇಕೆಂದು ಕೇಳಿದಾಗ ಮತ್ತದೇ ಉತ್ತರ ನಿಮ್ಮ ದಿನಾಂಕ ಹೇಳಿ, ನಿಮ್ಮ ಸಮಯಕ್ಕೆ ಬರುತ್ತೇನೆಂದರು,ಸಿನಿಮಾ ಗೆದ್ದ ವಿಷಯ ಕೇಳಿ ತಾವೇ ಗೆದ್ದಂತೆ ಖುಷಿ ಪಟ್ಟರು.." ಎಂದು ಅವರ ಸಹಕಾರ ನೆನೆದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ.

ನಾನು ನಿಮ್ಮ ಅಭಿಮಾನಿ ಎಂದ್ರು ಪುನೀತ್ ಸರ್..
"ಅಪ್ಪು ಸರ್ ರಾಕೆಟ್ಗಾಗಿ ಕರೆದಾಗ ಬಂದು ಹಾಡಿದರು, ಸಿನಿಮಾ ಬಿಡುಗಡೆಗೆ ಸಮಸ್ಯೆಯಾಗಿದೆಯೆಂದು ತಿಳಿದು, ತಕ್ಷಣ ಕರೆ ಮಾಡಿ ವಿಚಾರಿಸಿದರು. ಲೂಸಿಯಾ ನೋಡಿ ನಾನು ನಿಮ್ಮ ಅಭಿಮಾನಿ ಎಂದು, ಅತ್ಯಂತ ಖುಷಿಯಿಂದ ಸುಮಾರು ಅರ್ಧ ಘಂಟೆಗೂ ಹೆಚ್ಚು ಮಾತಾಡಿದರು. ಸೋಮವಾರ ಸ್ವತ: ಬ್ಯೂಟಿಫುಲ್ ಮನಸ್ಸುಗಳು ನೋಡುವುದಾಗಿ ತಿಳಿಸಿ, ಸಿನಿಮಾದ ಬಗ್ಗೆ ಬರುತ್ತಿರುವ ವಿಮರ್ಶೆಗಳನ್ನು ಕೇಳಿ ಅಭಿನಂದಿಸಿದರು" ಎಂದು ಸತೀಶ್ ನೀನಾಸಂ, ಪುನೀತ್ ರಾಜ್ ಕುಮಾರ್ ಬಗೆಗಿನ ಭಾವನಾತ್ಮಕ ಫೀಲ್ ಅನ್ನು ತಮ್ಮ ಸ್ಟೇಟಸ್ ಆಗಿ ಅಪ್ ಡೇಟ್ ಮಾಡಿದ್ದಾರೆ.



Click it and Unblock the Notifications











