ತಮ್ಮನನ್ನು ಕಳೆದುಕೊಂಡು ತಿಂಗಳಾಗಿದೆ ಅಷ್ಟೇ: ಹಿರಿಯ ನಟ ಶಿವರಾಂ ನೆನೆದು ಶಿವಣ್ಣ ಭಾವುಕ
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶಿವರಾಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ. ಅವರ ಮೆದುಳು ನಿಷ್ಕ್ರಿಯಗೊಂಡಿದ್ದು, ಶಿವರಾಂ ಕೋಮಾಗೆ ಜಾರಿದ್ದಾರೆಂದು ಆಸ್ಪತ್ರೆ ಮೂಲಗಳ ವರದಿ ಮಾಡಿವೆ. ಆದರೆ, ಅವರ ಬಿಪಿ, ಕಿಡ್ನಿ ಎಲ್ಲವೂ ಸರಿಯಾಗಿಯೇ ಕೆಲಸ ಮಾಡುತ್ತಿದೆ. ವೆಂಟೆಲೇಟರ್ ಸಹಾಯದಿಂದ ಅವರು ಉಸಿರಾಡುತ್ತಿದ್ದಾರೆ. ಏನಾದರೂ ಪವಾಡ ನಡೆಯಬೇಕೆಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಶಿವರಾಂ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಹಿರಿಯ ಕಲಾವಿದ ಶಿವರಾಂ ಅವರಿಗೆ ಅಪಘಾತವಾಗಿತ್ತು. ಈ ವೇಳೆ ಆಸ್ಪತ್ರೆಗೆ ಹೋಗಿ ಸ್ಕ್ಯಾನ್ ಮಾಡಿಸಿದಾಗ, ಶಿವರಾಂ ಅವರ ಮೆದುಳಿನಲ್ಲಿ ರಕ್ತಸ್ರಾವವಾಗುತ್ತಿರುವುದು ಗೊತ್ತಾಗಿದೆ. ಆದರೆ, 83 ವರ್ಷ ಆಗಿದ್ದರಿಂದ ಶಸ್ತ್ರ ಮಾಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಅಯ್ಯಪ್ಪನ ಪೂಜೆ ಮಾಡುತ್ತಿರುವಾಗ, ಮನೆಯಲ್ಲಿ ಬಿದ್ದು ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂದಿದ್ದರು. ಐಸಿಯುನಲ್ಲಿರುವ ಶಿವರಾಂ ಅವರನ್ನು ನೋಡಲು ಶಿವರಾಜ್ಕುಮಾರ್ ಆಸ್ಪತ್ರೆ ಭೇಟಿ ನೀಡಿದರು. ಈ ವೇಳೆ ಅಪ್ಪು ಕಳೆದುಕೊಂಡ ನೋವಿನಲ್ಲಿ ಶಿವರಾಂ ಅವರ ಬಗ್ಗೆ ಒಡನಾಟದ ಬಗ್ಗೆ ಮಾತನಾಡಿದರು.

'ಅಯ್ಯಪ್ಪಸ್ವಾಮಿ ಶಿವರಾಂ ಅವರ ಕೈಬಿಡಲ್ಲ'
"ನನಗೇನೋ ಪಾಸಿಟಿವ್ ಆಗಿದೆ ಅಂತ ಅನಿಸುತ್ತಿದೆ. ದೇವರ ಇಚ್ಚೆ. ನಾನು ಶಿವರಾಮಣ್ಣನನ್ನು ಚಿಕ್ಕ ಮಗುನಿಂದ ನೋಡಿದ್ದೀನಿ. ಸಿನಿಮಾಗಳನ್ನು ಬಿಟ್ಟು ನಮ್ಮ ಫ್ಯಾಮಿಲಿಯಲ್ಲಿ ಒಬ್ಬರು ಎಂದು ಹೇಳಲು ಇಷ್ಟ ಪಡುತ್ತೇನೆ. ಅವರ ಬಗ್ಗೆ ಈತರ ಮಾತನಾಡಲು ನೋವಾಗುತ್ತೆ. ನಮ್ಮ ಫ್ಯಾಮಿಲಿಗೆ ಯಾವುದೇ ರೀತಿ ತೊಂದರೆಯಾದರೂ ಜೊತೆಯಲ್ಲಿ ಇರೋರು. ಅವರಿಗೆ ಹೀಗೆ ಆಗಿರುವುದು ದೇವರ ಪೂಜೆ ಮಾಡಬೇಕಾದರೆನೇ ಅಂತೆ. ಆ ಅಯ್ಯಪ್ಪ ಕೈ ಬಿಡುವುದಿಲ್ಲವೆಂದು ನನ್ನೊಳಗಿನ ಭಾವನೆ ಹೇಳುತ್ತಿದೆ. ದೇವರು ಕೈ ಬಿಡಲ್ಲ ಅಯ್ಯಪ್ಪ ಸ್ವಾಮಿ ಯಾವಾಗಲೂ ಅವರ ಜೊತೆಯಲ್ಲಿ ಇರುತ್ತಾರೆ." ಎಂದು ಹಿರಿಯ ನಟ ಶಿವರಾಂ ನೋಡಿ ಬಳಿಕ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ.

'ವಿಲ್ ಪವರ್ ಅವರನ್ನು ಬದುಕಿಸುತ್ತೆ'
"ಮೂರು ವರ್ಷದ ಹಿಂದೆ ಶಬರಿಮಲೆಗೆ ಹೋಗಿದ್ದೆವು. ಕೊವಿಡ್ ಇದ್ದಿದ್ದರಿಂದ ಶಬರಿ ಮಲೆಗೆ ಹೋಗಲು ಆಗಿರಲಿಲ್ಲ. ಆವಾಗಲೇ 81 ವರ್ಷದಲ್ಲಿ 2 ಗಂಟೆಯಲ್ಲಿ ಶಬರಿಮಲೆ ಹತ್ತೋರು. ಲಾಸ್ಟ್ ಅಷ್ಟೇ ಅವರು ಯಾವತ್ತೂ ಡೊಲಿಯನ್ನು ಬಳಸುತ್ತಿರಲಿಲ್ಲ. ಸ್ಟ್ರಾಂಗ್ ಇದ್ದಾರೆ, ಆ ವಿಲ್ ಪವರ್ ಅವರನ್ನು ಬದುಕಿಸುತ್ತೆ. ದೇವರ ಆಶೀರ್ವಾದವಿರುತ್ತೆ. ಮತ್ತೆ ಅವರು ಗುಣಮುಖರಾಗಿ ಬರಬೇಕು. ವರ್ಷದಲ್ಲಿ ಅವರು ಮೂರು ನಾಲ್ಕು ಬಾರಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಾರೆ." ಎಂದು ಶಿವಣ್ಣ ಹೇಳಿದ್ದಾರೆ.

'ಆ ದೇವರು ಪದೆ ಪದೇ ಯಾಕೆ ಈ ನೋವು ಕೊಡುತ್ತಾನೋ'
"ನನ್ನ ತಮ್ಮನನ್ನು ಕಳೆದುಕೊಂಡು ಒಂದು ತಿಂಗಳಾಗಿದೆ. ಆ ದೇವರು ಯಾಕೆ ಹೀಗೆ ಪದೆ ಪದೇ ನೋವು ಕೊಡುತ್ತಾನೋ ಗೊತ್ತಿಲ್ಲ. ನೋವಾಗುತ್ತೆ. ಬೇಜಾರಾಗುತ್ತೆ. ಆದಷ್ಟು ಬೇಗ ಆ ದೇವರು ಶಿವರಾಮಣ್ಣನನ್ನು ಗುಣಮುಖರನ್ನಾಗಿ ಮಾಡಲಿ ಬೇಡಿಕೊಳ್ಳುತ್ತೇನೆ." ಎಂದು ಅಪ್ಪು ನೆನೆಯುತ್ತಾ ಶಿವರಾಮಣ್ಣ ಬೇಗ ಗುಣಮುಖರಾಗಲಿ ಎಂದು ಶಿವಣ್ಣ ತಿಳಿಸಿದರು.

ಯಾರಿಗೆ ಸಮಸ್ಯೆ ಬಂದರೂ ಶಿವರಾಂ ಇಲ್ಲಿ ಇರ್ತಿದ್ರು
ಕನ್ನಡ ಚಿತ್ರರಂಗದಲ್ಲಿ ಎಲ್ಲರೊಂದಿಗೂ ಹಿರಿಯ ನಟ ಶಿವರಾಂ ಅನ್ಯೋನ್ಯವಾಗಿದ್ದರು. ಯಾರದ್ದೇ ಮನೆಯಲ್ಲಿ ಏನೇ ಶುಭ ಕಾರ್ಯ ನಡೆದರೂ ಅಲ್ಲಿ ಶಿವರಾಂ ಇರುತ್ತಿದ್ದರು. ಯಾರದ್ದೇ ಮನೆಯಲ್ಲಿ ಏನೇ ಸಮಸ್ಯೆ ಆದರೂ ಅಲ್ಲಿಯೂ ಶಿವರಾಂ ಇರುತ್ತಿದ್ದರು. ಹೀಗಾಗಿ ಶಿವರಾಂ ಕನ್ನಡ ಚಿತ್ರರಂಗಕ್ಕೆ ತೀರಾ ಆತ್ಮೀಯರಾಗಿದ್ದರು. ಹೀಗಾಗಿ ಅವರು ಬೇಗನೇ ಗುಣಮುಖರಾಗಿ ಬರಲಿ ಎಂದು ಇಡೀ ಚಿತ್ರರಂಗ ಹಾರೈಸುತ್ತಿದೆ.


Click it and Unblock the Notifications











