ಫಿಲಂ ಸಿಟಿ ನಿರ್ಮಾಣದ ಹೊಣೆಗಾರಿಕೆ ಹೊರಲು ಸಿದ್ಧ ಎಂದ ಶಿವಣ್ಣ
ಚಿತ್ರರಂಗಕ್ಕೆ ಒಂದು ಫಿಲಂ ಸಿಟಿ ಅಗತ್ಯವಿತ್ತು. ಅದಕ್ಕೆ ಈಗ ಅವಕಾಶ ಬಂದಿದೆ. ಈ ಅವಕಾಶವನ್ನು ನಾವು ಮಿಸ್ ಮಾಡಿಕೊಳ್ಳಬಾರದು. ನನ್ನ ಮುಂದಾಳತ್ವದಲ್ಲಿಯೇ ಅದರ ಕಾರ್ಯ ನಡೆಯಬೇಕು ಎಂದರೆ ಅದಕ್ಕೆ ಸಿದ್ಧ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಶಿವಣ್ಣ, ಫಿಲಂ ಸಿಟಿ ನಿರ್ಮಾಣದ ವಿಚಾರದಲ್ಲಿ ಯಾರೂ ಲೀಡರ್ ಅಲ್ಲ. ಎಲ್ಲರೂ ಇದರಲ್ಲಿ ಭಾಗಿದಾರರಾಗಿರುತ್ತಾರೆ. ನಮ್ಮ ಚಿತ್ರರಂಗದಲ್ಲಿ ಹಿರಿಯರಾದ ರವಿಚಂದ್ರನ್, ಅನಂತ್ ನಾಗ್ ಮುಂತಾದವರ ಸಲಹೆ, ಸಹಕಾರ ಬೇಕಿದೆ. ಅವರ ನಾಯಕತ್ವದಲ್ಲಿಯೇ ಫಿಲಂ ಸಿಟಿ ನಿರ್ಮಾಣವಾಗುವುದಕ್ಕೆ ನನ್ನ ಬೆಂಬಲ ಇದೆ. ನನ್ನ ನಾಯಕತ್ವದಲ್ಲಿಯೇ ಮುನ್ನಡೆಸಬೇಕು ಎಂದರೆ ನಾನು ಸಿದ್ಧ ಎಂದು ತಿಳಿಸಿದ್ದಾರೆ.

ಅವಸರಪಟ್ಟರೆ ಕೆಲಸ ಆಗೊಲ್ಲ
ಫಿಲಂ ಸಿಟಿ ಬೆಂಗಳೂರಿನಲ್ಲಿ ಆದರೆ ಹೆಚ್ಚಿನ ಅನುಕೂಲತೆಗಳಿವೆ. ಮೈಸೂರಿನಲ್ಲಿ ಆದರೂ ಒಳ್ಳೆಯದೇ. ಆಗಬೇಕು ಎಂದಾಗ ಖಂಡಿತಾ ಬೇಗ ಆಗುತ್ತದೆ. ಅದು ಸೂಕ್ತವಾದ ಮಾರ್ಗದಲ್ಲಿ ಆಗಬೇಕು. ಅವಸರಪಟ್ಟರೆ ಆಗೊಲ್ಲ. ನಿಧಾನವಾದರೂ ಪ್ರಧಾನವಾಗಿ ಆಗಬೇಕು. ಈಗ ಸಮಯ ಕೂಡಿ ಬಂದಿದೆ. ಅವಕಾಶ ತಪ್ಪಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.

ಅತ್ಯುತ್ತಮ ಫಿಲಂ ಸಿಟಿ ಆಗಬೇಕು
ಫಿಲಂ ಸಿಟಿ ನಿರ್ಮಾಣ ಸಂಪೂರ್ಣವಾಗಿ ಒಳ್ಳೆ ಮಟ್ಟದಲ್ಲಿ ನಡೆಯಬೇಕು. ಭಾರತ ಮಾತ್ರವಲ್ಲ, ವಿಶ್ವದಲ್ಲಿಯೇ ಅತ್ಯುತ್ತಮ ಫಿಲಂ ಸಿಟಿಗಳಲ್ಲಿ ಒಂದು ಎನ್ನುವಂತೆ ಆಗಬೇಕು. ನಮ್ಮದೂ ಐಡಿಯಾಗಳನ್ನು ಹಂಚಿಕೊಳ್ಳುತ್ತೇವೆ, ಯಾವ ರೀತಿ ಮಾಡಬೇಕು ಎಂದು. ವಿಸಿಟರ್ ಒಳಗೆ ಬಂದು ನೋಡಿದಾಗ ಇದು ಅತ್ಯುತ್ತಮ ಫಿಲಂಸಿಟಿ ಎನ್ನಬೇಕು ಎಂದು ಬಯಕೆ ವ್ಯಕ್ತಪಡಿಸಿದ್ದಾರೆ.

ನಮ್ಮ ಹಿರಿಯರನ್ನು ನೆನಪಿಸುವಂತೆ ಇರಬೇಕು
ಉದಯ್ ಕುಮಾರ್, ಕಲ್ಯಾಣ್ ಕುಮಾರ್, ಅಪ್ಪಾಜಿ, ವಿಷ್ಣುವರ್ಧನ್, ಪ್ರಭಾಕರ್, ಬಾಲಕೃಷ್ಣ, ನರಸಿಂಹರಾಜು, ನಿರ್ದೇಶಕರಾದ ಪಂತುಲು, ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ ಹೀಗೆ ಚಿತ್ರರಂಗಕ್ಕೆ ಕಾಣಿಕೆ ಕೊಟ್ಟ ಎಷ್ಟೊಂದು ಜನರು ಇದ್ದಾರೆ. ಫಿಲಂ ಸಿಟಿಯಲ್ಲಿ ಅವರೆಲ್ಲರೂ ನಮಗೆ ಸಿಗಬೇಕು. ಒಂದೊಂದು ಕಟ್ಟಡ, ಮಹಡಿ, ಜಾಗವೂ ಒಂದೊಂದು ಪ್ರಮುಖ ಸಿನಿಮಾ ಅಥವಾ ಚಿತ್ರರಂಗದ ಗಣ್ಯರನ್ನು ನೆನಪಿಸುವಂತೆ ಇರಬೇಕು. ಇಲ್ಲಿಗೆ ಹೊರಗಿನ ಚಿತ್ರರಂಗದವರು ಬಂದು ಶೂಟಿಂಗ್ ಮಾಡಬೇಕು. ಅಂತಹ ವಾತಾವರಣ ನಿರ್ಮಿಸಬೇಕು ಎಂದಿದ್ದಾರೆ.

ಭಯಬೇಡ, ಆದರೆ ಸುರಕ್ಷಿತವಾಗಿರಿ
ಕೊರೊನಾ ವೈರಸ್ ಬಗ್ಗೆ ಜನರು ತೀರಾ ಭೀತಿ ಪಡುವ ಅಗತ್ಯವಿಲ್ಲ. ನಾವು ಭಾರತೀಯರಿಗೆ ಅದನ್ನು ತಾಳಿಕೊಳ್ಳುವ ಶಕ್ತಿ ಇದೆ. ರಾಗಿ ಜಾಸ್ತಿ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಹಾಗೆಂದು ನಿರ್ಲಕ್ಷ್ಯ ಬೇಡ. ನಮ್ಮ ಸುರಕ್ಷತೆಗೆ ಜಾಗ್ರತೆ ವಹಿಸುವುದೂ ಮುಖ್ಯ. ಏನಾದರೂ ಆರೋಗ್ಯ ಸಮಸ್ಯೆ ಕಂಡುಬಂದಾಗ ವೈದ್ಯರ ಬಳಿ ಹೋಗಿ. ಈ ವಯಸ್ಸಿನಲ್ಲಿ ನಾನೂ ಆರೋಗ್ಯದ ಬಗ್ಗೆ ಗಮನ ಹರಿಸುತ್ತೇನೆ. ನನಗೆ ಬದುಕಬೇಕೆಂಬ ಆಸೆ ಇದೆ. ಎಲ್ಲರಿಗೂ ಜೀವನದಲ್ಲಿ ಬದುಕುವ ಆಸೆ ಇರಬೇಕು. ಆರೋಗ್ಯವಾಗಿರಿ, ಆರೋಗ್ಯಯುತ ಆಹಾರ ಸೇವಿಸಿ ಎಂದು ಸಲಹೆ ನೀಡಿದ್ದಾರೆ.

ಭಾನುವಾರ ಶಬರಿಮಲೆಗೆ ಶಿವಣ್ಣ
ಕೊರೊನಾ ಕಾರಣದಿಂದ ಯಾವ ಚಿತ್ರದ ಚಿತ್ರೀಕರಣವನ್ನೂ ನಿಲ್ಲಿಸುತ್ತಿಲ್ಲ ಎಂದು ಶಿವಣ್ಣ ಸ್ಪಷ್ಟಪಡಿಸಿದರು. ಇದೇ ಭಾನುವಾರ ಶಬರಿಮಲೆಗೆ ಹೋಗುತ್ತಿದ್ದೇನೆ. ದೇವರ ರಕ್ಷಣೆ ಕೊಟ್ಟೇ ಕೊಡುತ್ತಾನೆ ಎಂಬ ನಂಬಿಕೆ ಇದೆ. ಇದೇ ಕಾವೇರಿ ನೀರು ಕುಡಿಯುತ್ತಿದ್ದೇನೆ. ಇದು ಪವಿತ್ರ ನೀರು ಅದರಿಂದ ಏನೂ ಆಗೊಲ್ಲ. ಮನಸಿನಲ್ಲಿ ಧೈರ್ಯ ಇರಬೇಕು. ಹಾಗೆಂದು ತಲೆ ಗಟ್ಟಿ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳಲು ಆಗುವುದಿಲ್ಲ. ಹುಷಾರಾಗಿ ಇರಬೇಕು ಎಂದಿದ್ದಾರೆ.


Click it and Unblock the Notifications











