ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಶಿವಣ್ಣ ಅಭಿಮಾನಿಗಳು
ಚಿತ್ರ ಬಿಡುಗಡೆಯಾದ ನಂತರ ತಮ್ಮ ತಮ್ಮ ನಾಯಕರ ಕಟೌಟ್ ಗಳಿಗೆ ಹೂವಿನ ಹಾರ, ಹಾಲಿನ ಅಭಿಷೇಕ ಮಾಡುವುದು ನಾವೆಲ್ಲಾ ಕೇಳಿದ್ದೇವೆ, ಕಂಡಿದ್ದೇವೆ ಕೂಡಾ.
ಆದರೆ ಚಿತ್ರ ಬಿಡುಗಡೆಗೆ ಮಹೂರ್ತವೇ ಇನ್ನೂ ನಿಗದಿಯಾಗಿಲ್ಲ, ಆಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳು ಶಿವಣ್ಣನ ಪೋಸ್ಟರಿಗೆ ಭಾರೀ ಹೂವಿನ ಹಾರ ಹಾಕಿ ಸಂಭ್ರಮಿಸಲು ನಿರ್ಧರಿಸಿದ್ದಾರೆ.
ನಗರದ ಹೃದಯ ಭಾಗದಲ್ಲಿರುವ ಓಕಳೀಪುರಂ ಜಂಕ್ಷನಿನಲ್ಲಿ ಶಿವಣ್ಣನ 'ಭಜರಂಗಿ' ಚಿತ್ರದ ಭಾರೀ ವಿನೈಲ್ ಪೋಸ್ಟರ್ ವೊಂದನ್ನು ಹಾಕಲಾಗಿದೆ. ಆ ಪೋಸ್ಟರಿಗೆ ಶಿವಣ್ಣ ಅಭಿಮಾನಿಗಳು ಭಾರೀ ಹೂವಿನ ಹಾರ ಹಾಕಲಿದ್ದಾರೆ.
ಗುರುವಾರ ಸೆಪ್ಟಂಬರ್ 11, 2013ರ ಸಂಜೆ ಆರು ಗಂಟೆಗೆ (peak hours) ಶಿವಣ್ಣನ ಐದು ಅಭಿಮಾನಿ ಸಂಘಗಳಾದ ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಸೇನಾ ಸಮಿತಿ, ಗಂಡುಗಲಿ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಶ್ರೀರಾಮ್ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಶಿವು ಅಡ್ದ ಮತ್ತು ಶಿವ ಸೈನ್ಯ ಜಂಟಿಯಾಗಿ ಈ ಕಾರ್ಯಕ್ರಮ ಹಮ್ಮಿ ಕೊಂಡಿದೆ.
ತಮಟೆ ವಾದ್ಯಗಳ ಸದ್ದಿನೊಂದಿಗೆ ಶಿವಣ್ಣನ ವಿನೈಲಿಗೆ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ, ಸಂಭ್ರಮಿಸಲು ಕನ್ನಡ ಚಿತ್ರರಂಗದ ಬಾಕ್ಸೀಫಿಸ್ ಸೃಷ್ಟಿಕರ್ತ ಶಿವರಾಜ್ ಕುಮಾರ್ ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ.
ಭಜರಂಗಿ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಐಂದ್ರಿತಾ ರೇ, ಊರ್ವಶಿ, ಬುಲೆಟ್ ಪ್ರಕಾಶ್, ಸಾಧುಕೋಕಿಲಾ, ತಬ್ಲಾನಾಣಿ, ಹೊನ್ನವಳ್ಳಿ ಕೃಷ್ಣ, ಶಿವರಾಂ, ಎಂ.ಎಸ್.ಉಮೇಶ್, ಬಿರಾದಾರ್, ಚಿಕ್ಕಣ್ಣ, ಎಂ.ಎನ್.ಲಕ್ಷ್ಮೀದೇವಿ, ಶ್ರುತಿ, ಸಿಲ್ಲಿಲಲ್ಲಿ ಆನಂದ್ ಹಾಗೂ ರಂಗಭೂಮಿ ಕಲಾವಿದರಾದ ಲೋಕಿ, ರಾಜಕುಮಾರ್, ಮಧು, ಚೇತನ್ ಮುಂತಾದವರಿದ್ದಾರೆ.
ಹರ್ಷ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅರ್ಜುನ್ ಜನ್ಯಾ ಅವರ ಸಂಗೀತ ಚಿತ್ರಕ್ಕಿದ್ದು, ಮಂಜುನಾಥ್ ಗೌಡ ಮತ್ತು ನಟರಾಜ್ ಗೌಡ ಚಿತ್ರದ ನಿರ್ಮಾಪಕರು.


Click it and Unblock the Notifications












