230 ಚಿತ್ರಮಂದಿರದಲ್ಲಿ ಏಕಕಾಲಕ್ಕೆ ಬಿಡುಗಡೆ.ಭಲೇ ಆರ್ಯನ್!
ಭಜರಂಗಿ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಮ್ಯಾ ಪ್ರಮುಖ ಭೂಮಿಕೆಯಲ್ಲಿರುವ 'ಆರ್ಯನ್' ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಡಲು ಸಜ್ಜಾಗಿದೆ. ಸುಮಾರು 230ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದ್ದು ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಇದಾಗಿದೆ.
ನಾಳೆ ಶುಭ ಶುಕ್ರವಾರ (ಆಗಸ್ಟ್ 1) ರಾಜ್ಯಾದ್ಯಂತ ಮತ್ತು ದೇಶದ ಪ್ರಮುಖ ನಗರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಇದೇ ಮೊದಲ ಬಾರಿಗೆ ಮುಂಬೈನ ಹತ್ತು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ. ಇದಲ್ಲದೇ, ಚೆನ್ನೈ, ಹೈದರಾಬಾದ್, ಪುಣೆ, ದೆಹಲಿ, ಸೂರತ್, ಪಣಜಿ, ಗುರಗಾಂ, ಅಹಮದಾಬಾದ್ ನಗರಗಳಲ್ಲೂ ಆರ್ಯನ್ ಚಿತ್ರ ಬಿಡುಗಡೆಯಾಗುತ್ತಿದೆ.
ಖ್ಯಾತ ನಿರ್ದೇಶಕ ಡಿ.ರಾಜೇಂದ್ರಬಾಬು ನಿರ್ದೇಶಿಸಿದ ಕಟ್ಟಕಡೆಯ ಈ ಚಿತ್ರ ಇದಾಗಿದೆ. ಇದೇ ಮೊಟ್ಟ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕ್ರೀಡಾ ತರಬೇತುದಾರನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಚಿತ್ರದಲ್ಲಿ ಅವರದು ಅಥ್ಲೀಟ್ ಕೋಚ್ ಪಾತ್ರ.
ರಾಜೇಂದ್ರ ಬಾಬು ನಿಧನದ ನಂತರ ಅರ್ಧಕ್ಕೇ ನಿಂತಿದ್ದ ಈ ಚಿತ್ರವನ್ನು ನಂತರ ಚಿ ಗುರುದತ್ ಮುನ್ನಡೆಸಿದರು. ಆದರೆ ಚಿತ್ರದ ಎಲ್ಲಾ ಪ್ರೊಮೋಗಳಲ್ಲಿ ರಾಜೇಂದ್ರ ಬಾಬು ಅವರ ಹೆಸರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. (ಆರ್ಯನ್ ಆಡಿಯೋ ವಿಮರ್ಶೆ)
80 ಹಾಗೂ 90 ದಶಕದಲ್ಲಿ ಕನ್ನಡದ ಪ್ರಮುಖ ನಿರ್ದೇಶಕರಾಕರಲ್ಲೊಬ್ಬರಾಗಿದ್ದ ಡಿ.ರಾಜೇಂದ್ರ ಬಾಬುರವರ ಚಿತ್ರಗಳು ತಾಂತ್ರಿಕತೆಯಲ್ಲಿ ಉತ್ತಮ ಗುಣಮಟ್ಟದ್ದಾಗಿದ್ದವು. ಅಂತೆಯೇ ಅವರ ಬಹುತೇಕ ಚಿತ್ರಗಳು ಸೂಪರ್ ಹಿಟ್ ಚಿತ್ರಗಳಾಗಿದ್ದವು. ಈ ಎಲ್ಲಾ ಕುತೂಹಲದ ನಡುವೆ ಬಾಬು ನಿರ್ದೇಶನದ ಆರ್ಯನ್ ಚಿತ್ರದ ಬಗ್ಗೆ ಒಂದು ಮುನ್ನೋಟ.

ದಾಖಲೆ ಸಂಖ್ಯೆಯ ಚಿತ್ರಮಂದಿರಗಳು
ಕನ್ನಡ ಚಿತ್ರರಂಗದ ಮಟ್ಟಿಗೆ ದಾಖಲೆ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಆರ್ಯನ್ ಬಿಡುಗಡೆಯಾಗುತ್ತಿದೆ. ಸುಮಾರು 230 (ಚಿತ್ರತಂಡದ ಮಾಹಿತಿಯ ಪ್ರಕಾರ) ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ರಾಜ್ಯದ ಮೂವತ್ತು ಜಿಲ್ಲೆಗಳಲ್ಲೂ ಚಿತ್ರ ಬಿಡುಗಡೆಯಾಗುತ್ತಿದ್ದು, ಇದರಲ್ಲಿ ಬೆಂಗಳೂರಿನ 54, ಮೈಸೂರು 5, ಮಂಗಳೂರು ಮತ್ತು ಹುಬ್ಬಳ್ಳಿಯ ತಲಾ 4, ಬೆಳಗಾವಿಯ 3 ಚಿತ್ರಮಂದಿರಗಳೂ ಸೇರಿವೆ.

ಚಿತ್ರದ ಪ್ರಮುಖ ತಾರಾಗಣದಲ್ಲಿ
ಚಿತ್ರದ ಪ್ರಮುಖ ತಾರಾಗಣದಲ್ಲಿ ಶಿವರಾಜ್ ಕುಮಾರ್, ರಮ್ಯಾ, ಶರತ್ ಬಾಬು, ಬುಲೆಟ್ ಪ್ರಕಾಶ್, ಸುಮಿತ್ರಾ ದೇವಿ, ರಘು ಮುಖರ್ಜಿ, ಅರ್ಚನಾ ಗುಪ್ತಾ ಇದ್ದಾರೆ. ಡ್ರೀಮ್ ವೀವರ್ ಎಂಟರ್ಟೈನ್ಮೆಂಟ್ ಬ್ಯಾನರಡಿಯಲಿ ಬರುತ್ತಿರುವ ಈ ಚಿತ್ರದ ನಿರ್ಮಾಪಕರು ಧ್ರುವ್ ದಾಸ್, ಛಾಯಾಗ್ರಾಹಕರು ಚಂದ್ರಶೇಖರ್, ಸಂಗೀತ ನೀಡಿದವರು ಜೆಸ್ಸಿ ಗಿಫ್ಟ್.

ಚಿತ್ರಕ್ಕೆ ಕಿಚ್ಚ ಸುದೀಪ್ ಧ್ವನಿ
ಶಿವರಾಜ್ ಕುಮಾರ್ ಚಿತ್ರವೊಂದಕ್ಕೆ ಕಿಚ್ಚ ಸುದೀಪ್ ಧ್ವನಿ ನೀಡುತ್ತಿರುವುದು ಆರ್ಯನ್ ಚಿತ್ರದ ವಿಶೇಷ. ಆರ್ಯನ್ ಚಿತ್ರದ ಪಾತ್ರ ಪರಿಚಯವನ್ನು ಸುದೀಪ್ ತನ್ನ ಧ್ವನಿ ಮೂಲಕ ಮಾಡುತ್ತಿರುವುದು ಚಿತ್ರದ ಪ್ಲಸ್ ಪಾಯಿಂಟ್ ಗಳಲ್ಲೊಂದು.

ಸುದೀಪ್ ಟ್ವೀಟ್ ವಿವಾದ
'ನಾನು ದಿವಂಗತ ಡಿ.ರಾಜೇಂದ್ರಬಾಬು ಅವರ ಮೇಲಿನ ಗೌರವಕ್ಕಾಗಿ ಆರ್ಯನ್ ಚಿತ್ರಕ್ಕೆ ಡಬ್ ಮಾಡಿದ್ದೇನೆ ಅದು ಬಿಟ್ರೆ ಇನ್ಯಾವುದೇ ಕಾರಣವಿಲ್ಲ. ಯಾವುದೇ ಕಮರ್ಶಿಯಲ್ ಉದ್ದೇಶಕ್ಕಾಗಲೀ, ಇನ್ಯಾರದ್ದೋ ಕಾರಣಕ್ಕಾಗಲೀ ನಾನು ವಾಯ್ಸ್ ನೀಡಿಲ್ಲ' ಎಂದು ಸುದೀಪ್ ಟ್ವೀಟ್ ಮಾಡಿರುವುದು ಶಿವಣ್ಣನ ಅಭಿಮಾನಿಗಳನ್ನು ಕೆರಳಿಸಿತ್ತು.

ಶಿವಣ್ಣ ಅಭಿಮಾನಿಗಳ ತಿರುಗೇಟು
'ಶಿವಣ್ಣ ಏನು ಸುದೀಪ್ ರಂತೆ ಊಸರವಳ್ಳಿಯಲ್ಲ' ಚಿತ್ರರಂಗದ ಅತ್ಯಂತ ಕೆಟ್ಟ ವ್ಯಕ್ತಿ. ಸುದೀಪ್ ನಿಮಗೆ ಚಿತ್ರರಂಗದಲ್ಲಿ ಏನೂ ಮರ್ಯಾದೆ ಉಳಿದಿಲ್ಲ. ಶಿವಣ್ಣನ ಮುಂದೆ ನೀವು ಏನೂ ಅಲ್ಲ ಎಂದು ಶಿವರಾಜ್ ಅಭಿಮಾನಿಗಳು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದರು. ಕೆಲವೊಂದು ಟ್ವೀಟ್ ಸಂದೇಶಕ್ಕೆ ಸುದೀಪ್ ಉತ್ತರಿಸಿದ್ದರೂ ಕೂಡಾ.

ರಮ್ಯಾ ಸೋಲಿನ ನಂತರ ಬಿಡುಗಡೆಯಾಗುತ್ತಿರುವ ಚಿತ್ರ
ಚುನಾವಣೆ ಸೋಲಿನ ನಂತರ ರಮ್ಯಾ ಅವರ ಕಮ್ ಬ್ಯಾಕ್ ಚಿತ್ರ ಇದಾಗಿದ್ದು, ಚಿತ್ರದ ಯಶಸ್ಸಿನ ಮೇಲೆ ಅವರ ಸಿನಿ ಭವಿಷ್ಯ ನಿಂತಿದೆ. ಪುನೀತ್ ಅಭಿನಯದ, ದುನಿಯಾ ಸೂರಿ ನಿರ್ದೇಶನದ 'ದೊಡ್ಮನೆ ಹುಡುಗ' ಚಿತ್ರದಿಂದ ಹೊರಬಂದ ನಂತರ ನನ್ನ ಮಂಡ್ಯ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

ಚಿತ್ರದ ಹಾಡಿಗೆ ಉತ್ತಮ ರೆಸ್ಪಾನ್ಸ್
ಜೆಸ್ಸಿಗಿಫ್ಟ್ ಸಂಗೀತ ನಿರ್ದೇಶನದ 'ಆರ್ಯನ್' ಚಿತ್ರದ ಹಾಡುಗಳನ್ನು ಜನ ಮೆಚ್ಚಿದ್ದಾರೆ. ಚಿತ್ರದ ಆಲ್ಬಂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಡಿಗೆ ಸಾಹಿತ್ಯವನ್ನು ಜಯಂತ ಕಾಯ್ಕಿಣಿ, ಕವಿರಾಜ್, ಯೋಗರಾಜಭಟ್, ನಾಗೇಂದ್ರ ಪ್ರಸಾದ್ ಬರೆದಿದ್ದಾರೆ.

ಶಿವಣ್ಣ ಕಟೌಟಿಗೆ ಕ್ಷೀರಾಭಿಷೇಕ
ಅಭಿಮಾನಿಗಳು ಡಾ.ಶಿವರಾಜ್ ಕುಮಾರ್ ಕಟೌಟಿಗೆ ಶುಕ್ರವಾರವೇ (ಜು.25) ರಾತ್ರಿ ಕ್ಷೀರಾಭಿಷೇಕ ಮಾಡಿದ್ದಾರೆ. ಬೆಂಗಳೂರು ರಾಜಾಜಿನಗರದ ನವರಂಗ್ ಚಿತ್ರಮಂದಿರದಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಶಿವಣ್ಣ ಅಭಿಮಾನಿಗಳು 'ಆರ್ಯನ್' ಚಿತ್ರದ ಬೃಹತ್ ಕಟೌಟಿಗೆ ಹಾಲೆರೆದಿದ್ದಾರೆ.


Click it and Unblock the Notifications











