ಡಬ್ಬಿಂಗ್ & ರಾಜ್ ಬಗ್ಗೆ 'ಬಾಹುಬಲಿ' ಕಥೆಗಾರ ಹೇಳಿದ ಮಾತುಗಳಿವು!
ತಮಿಳು ನಟ ಅಜಿತ್ ಅವರ 'ಎನ್ನೈ ಅರಿಂಧಾಲ್' ಕನ್ನಡಕ್ಕೆ 'ಸತ್ಯದೇವ್ ಐಪಿಎಸ್' ಹೆಸರಿನಲ್ಲಿ ಡಬ್ ಆಗಿ ಬಂದ ನಂತರ ಸ್ಯಾಂಡಲ್ ವುಡ್ ನಲ್ಲಿ ಡಬ್ಬಿಂಗ್ ವಿಚಾರ ಮತ್ತೆ ಕಾವೇರಿದೆ. ಅಲ್ಲದೆ ಸಮಾಜಿಕ ಜಾಲತಾಣಗಳಲ್ಲಿ ಡಬ್ಬಿಂಗ್ ಬೇಕು ಮತ್ತು ಬೇಡ ಎಂಬ ಚರ್ಚೆಗಳು ಆಗುತ್ತಿವೆ. ಈಗಾಗಲೇ 'ಬಾಹುಬಲಿ 2' ಚಿತ್ರದ ಕನ್ನಡ ಡಬ್ಬಿಂಗ್ ಗಾಗಿ ಟ್ವಿಟರ್ ಅಭಿಯಾನವು ನಡೆದಿದೆ.['ಗೋಕಾಕ್ ಚಳವಳಿ' ವೇಳೆ ಕನ್ನಡಿಗರಿಗಾಗಿ ಪತ್ರ ಬರೆದಿದ್ದ ಡಾ.ರಾಜ್]
ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳಿಗೆ ವಿರೋಧ ವ್ಯಕ್ತವಾಗುತ್ತಿರುವ ಈ ಸಂದರ್ಭದಲ್ಲಿ 'ಬಾಹುಬಲಿ', 'ಬಜರಂಗಿ ಭಾಯಿಜಾನ್'ಗಳಂಥ ಖ್ಯಾತ ಸಿನಿಮಾಗಳಿಗೆ ಕಥೆ ಬರೆದಿರುವ ವಿ.ವಿಜಯೇಂದ್ರ ಪ್ರಸಾದ್ ಅವರು, ಡಬ್ಬಿಂಗ್ ಮತ್ತು ಡಾ. ರಾಜ್ ಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ.
ಟಾಲಿವುಡ್ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ತಂದೆ ವಿ.ವಿಜಯೇಂದ್ರ ಪ್ರಸಾದ್ ಅವರ ಸಿನಿಮಾ 'ಶ್ರೀವಲ್ಲಿ' ತಮಿಳು, ತೆಲುಗು ಮತ್ತು ಕನ್ನಡದಲ್ಲಿಯೂ ರಿಲೀಸ್ ಆಗುತ್ತಿದೆ. ಈ ಚಿತ್ರದ ಆಡಿಯೋ ಬಿಡುಗಡೆಗೆ ಬೆಂಗಳೂರಿಗೆ ಬಂದಿದ್ದ ವೇಳೆ ಅವರು ಮಾಧ್ಯಮದ ಜೊತೆ ಡಬ್ಬಿಂಗ್ ಬಗ್ಗೆ ಮತ್ತು ಡಾ.ರಾಜ್ ಕುಮಾರ್ ಬಗ್ಗೆ ಹೇಳಿದ ಮಾತುಗಳು ಇಲ್ಲಿವೆ..

'ಬಾಹುಬಲಿ' ಕಥೆಗೆ ರಾಜ್ ಕುಮಾರ್ ಸ್ಫೂರ್ತಿ
ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಮಾಡಿದ ಸೂಪರ್ ಡೂಪರ್ ಹಿಟ್ ಸಿನಿಮಾ 'ಬಾಹುಬಲಿ' ಚಿತ್ರಕಥೆ ಬರೆಯಲು ರಾಜ್ ಕುಮಾರ್ ಅವರ ಸಿನಿಮಾಗಳು ಸ್ಪೂರ್ತಿ ಎಂದು ವಿ.ವಿಜಯೇಂದ್ರ ಅವರು ಹೇಳಿಕೊಂಡಿದ್ದಾರೆ.

ರಾಜ್ ಕುಮಾರ್ ಅವರಿಗೆ ನಿರ್ದೇಶನ
ಕನ್ನಡದಲ್ಲಿ ಸಿನಿಮಾ ಮಾಡುವುದಾದರೇ ಯಾವ ನಟರಿಗೆ ನಿರ್ದೇಶನ ಮಾಡುತ್ತೀರಿ ಎಂದು ಮಾಧ್ಯಮದವರು ಕೇಳಿದಾಗ, ವಿ.ವಿಜಯೇಂದ್ರ ಪ್ರಸಾದ್ ಅವರು ಕನ್ನಡದಲ್ಲಿ ಸಿನಿಮಾ ಮಾಡುವುದಾದರೇ, ಅದು ರಾಜ್ ಕುಮಾರ್ ಗೆ ಮಾತ್ರ. ಅಂದರೆ ರಾಜ್ ಕುಮಾರ್ ಈಗ ಇಲ್ಲದಿದ್ದರೂ ಲೇಟೆಸ್ಟ್ ತಂತ್ರಜ್ಞಾನದ ಮೂಲಕ ಗ್ರಾಫಿಕ್ಸ್ ನಲ್ಲಿ ತೋರಿಸುತ್ತೇನೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

'ಬಾಹುಬಲಿ 2' ಡಬ್ಬಿಂಗ್ ಬಗ್ಗೆ...
'ಬಾಹುಬಲಿ 2' ಕನ್ನಡಕ್ಕೆ ಡಬ್ ಮಾಡಬೇಕು ಎನ್ನುವ ಬಗ್ಗೆ ನಡೆಯುತ್ತಿರುವ ಪರ ವಿರೋಧ ಚರ್ಚೆಯ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ ವಿ.ವಿಜಯೇಂದ್ರ ಪ್ರಸಾದ್ ಅವರು, "ಡಬ್ ಮಾಡಿದ್ರೆ ಚೆನ್ನಾಗಿರೋದು. ಯಾಕಂದ್ರೆ ಆ ಸಿನಿಮಾದ ಬಗ್ಗೆ ಕ್ರೇಜ್ ಹೆಚ್ಚಾಗಿಯೇ ಇದೆ. ಸಿನಿಮಾ ಹಣವನ್ನು ಮಾಡುತ್ತಿತ್ತು" ಎಂದಿದ್ದಾರೆ.

ರಾಜ್ ಕುಮಾರ್ ಇದ್ದಿದ್ದರೇ ಡಬ್ಬಿಂಗ್ ಗೆ ಓಕೆ ಎನ್ನುತ್ತಿದ್ದರೇನೋ?
'ರಾಜ್ ಕುಮಾರ್ ಪರಭಾಷಾ ಚಿತ್ರಗಳನ್ನು ಕನ್ನಡ ಡಬ್ ಮಾಡುವುದನ್ನು ವಿರೋಧಿಸುತ್ತಿದ್ದರು' ಅದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದಿದ್ದಕ್ಕೆ, "ಡಬ್ಬಿಂಗ್ ವಿಷಯದ ಕುರಿತು ಒಂದು ಉತ್ತರ ಹೇಳುವುದು ಕಷ್ಟ. ಅದೊಂದು ಸಂದಿಗ್ಧ ಪ್ರಶ್ನೆ. ಆದರೆ ಈಗ 'ಬಾಹುಬಲಿ' ಸಿನಿಮಾ ನೋಡಿದ್ದರೆ. ಚೆನ್ನಾಗಿದೆ. ಡಬ್ ಮಾಡಿ ಎಂದು ರಾಜ್ ಹೇಳುತ್ತಿದ್ದರೇನೋ?, ಯಾಕಂದ್ರೆ ಕೆಲವೊಂದು ವಿಷಯಗಳಿಗೆ ಕಾಲದ ಮಿತಿ ಇರುತ್ತದೆ. ಇದು ನನ್ನ ಪರ್ಸನಲ್ ಓಪಿನಿಯನ್" ಎಂದು ವಿ.ವಿಜಯೇಂದ್ರ ಪ್ರಸಾದ್ ಉತ್ತರಿಸಿದ್ದಾರೆ.

'ಶ್ರೀವಲ್ಲಿ' 3 ಭಾಷೆಗಳಲ್ಲಿ ರಿಲೀಸ್
ವಿ.ವಿಜಯೇಂದ್ರ ಪ್ರಸಾದ್ ಅವರು ಆಕ್ಷನ್ ಕಟ್ ಹೇಳಿರುವ 'ಶ್ರೀವಲ್ಲಿ' ಚಿತ್ರವು ತೆಲುಗು, ತಮಿಳು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ 2016 ರ ಮಿಸ್ ಇಂಡಿಯಾ ಗರಿ ಮುಡಿಗೇರಿಸಿಕೊಂಡ ನೇಹಾ ಮತ್ತು ರಜತ್ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಸುನೀತಾ-ರಾಜಕುಮಾರ್ ಬೃಂದಾವನ್ ದಂಪತಿ ಬಂಡವಾಳ ಹೂಡಿದ್ದಾರೆ.


Click it and Unblock the Notifications











