ಸಮಾಜಕ್ಕೆ ಮಾದರಿಯಾದ 'ಸ್ಟೂಡೆಂಟ್ಸ್' ಚಿತ್ರತಂಡ
''ಸ್ಟೂಡೆಂಟ್ಸ್ ಗೆ ಪವರ್ ಬೇಕು. ಸ್ಟೂಡೆಂಟ್ಸ್ ಗೆ ಪವರ್ ಸಿಕ್ಕಿದ್ರೆ ಸಮಾಜದಲ್ಲಿ ಬದಲಾವಣೆ ತರಬಹುದು'' ಇದು 'ಸ್ಟೂಡೆಂಟ್ಸ್' ಚಿತ್ರದ ನಿರ್ದೇಶಕ ಸಂತೋಷ್ ಅವರ ಮಾತು.
ಸಮಾಜವನ್ನ ಬದಲಾವಣೆ ಮಾಡಲು ಸರ್ಕಾರವೇ ಬರಬೇಕು ಅಥವಾ ಅಧಿಕಾರಿಗಳೇ ಬರಬೇಕು ಎಂದಲ್ಲ. ಒಳ್ಳೆ ಮನಸ್ಸು, ಒಳ್ಳೆ ಆಶಯವಿದ್ದರೇ ಯಾರು ಬೇಕಾದರು ಸಮಾಜವನ್ನ ಬದಲಾವಣೆ ಮಾಡಬಹುದು. ಇದಕ್ಕೆ ತಾಜಾ ಉದಾಹರಣೆ 'ಸ್ಟೂಡೆಂಟ್ಸ್' ಚಿತ್ರತಂಡ. ಹೌದು, ನಮ್ಮ ಸುತ್ತಮುತ್ತಲಿನ ಪರಿಸರವನ್ನ ಸ್ವಚ್ಛವಾಗಿಟ್ಟುಕೊಳ್ಳಬೇಕು. ನಮ್ಮ ಹಿರಿಯರನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದನ್ನ ಇಂದಿನ ಪೀಳಿಗೆಗೆ ಹೇಳುವ ಸಣ್ಣ ಪ್ರಯತ್ನವನ್ನ 'ಸ್ಟೂಡೆಂಟ್ಸ್' ಚಿತ್ರತಂಡ ಮಾಡಿದೆ.[ಗಾಂಧಿನಗರಕ್ಕೆ ಬರ್ತಿದ್ದಾರೆ ಭರವಸೆಯ 'ಸ್ಟೂಡೆಂಟ್ಸ್']

ಇತ್ತೀಚೆಗಷ್ಟೇ ಬೆಂಗಳೂರಿನ ಕೆಲ ವೃದ್ಧಾಶ್ರಮಕ್ಕೆ ಹಾಗೂ ಸ್ಲಂ ನಗರಕ್ಕೆ ಭೇಟಿ ನೀಡಿದ್ದ 'ಸ್ಟೂಡೆಂಟ್ಸ್' ಚಿತ್ರತಂಡ ಸ್ಲಂ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ವೃದ್ಧರ ಯೋಗಕ್ಷೇಮದ ಬಗ್ಗೆ ಕಾಳಜಿ ತೋರಿಸಿದ್ದಾರೆ. ಬಸವೇಶ್ವರ ನಗರದಲ್ಲಿರುವ ಶ್ರೀ ಮಹಾಲಕ್ಷ್ಮಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಹಿರಿಯರ ಯೋಗಕ್ಷೇಮ ವಿಚಾರಿಸಿದ್ದಾರೆ. ಜೊತೆಗೆ ಮೂರು ತಿಂಗಳಿಗೆ ಬೇಕಾಗುವ ದವಸ ಧಾನ್ಯಗಳನ್ನ ನೀಡಿದ್ದಾರೆ. ಇನ್ನು ನಂದಿನಿ ಲೇಔಟ್ ನಲ್ಲಿರುವ ಸ್ಲಂ ನಗರಕ್ಕೆ ಹೋಗಿ, ಅಲ್ಲಿನ ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದ್ದಾರೆ.

ಈ ಮೂಲಕ, ಒಂದು ಸಿನಿಮಾ ಮಾಡಿ, ಆ ಸಿನಿಮಾ ಸಕ್ಸಸ್ ಆಯ್ತಾ ಅಥವಾ ಫೇಲ್ಯೂರ್ ಆಯ್ತಾ ಎಂದು ನಿರ್ಧರಿಸಿ ಸುಮ್ಮನಾಗುವ ಈ ಸಮಯದಲ್ಲಿ 'ಸ್ಟೂಡೆಂಟ್ಸ್' ಚಿತ್ರತಂಡ ಸ್ವಲ್ಪ ವಿಭಿನ್ನ ಮತ್ತು ವಿಶೇಷವೆನಿಸಿಕೊಂಡಿದೆ. ತಮ್ಮ ಸಿನಿಮಾದಲ್ಲಿ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವುದರ ಜೊತೆಗೆ ಅದನ್ನ ನಿಜಜೀವನದಲ್ಲೂ ಮಾಡಿ ತೋರಿಸಿದೆ.

ಅಂದ್ಹಾಗೆ, 'ಸ್ಟೂಡೆಂಟ್ಸ್' ಚಿತ್ರ ಜೂನ್ ತಿಂಗಳಲ್ಲಿ ತೆರೆಕಾಣುತ್ತಿದೆ. ಚಿತ್ರದಲ್ಲಿ ಸಚಿನ್ ಪುರೋಹಿತ್, ಸಚಿನ್ ಜಿ, ಮತ್ತು ಕಿರಣ್ ರಾಯಬಾಗಿ ಮೂವರು ನಾಯಕ ನಟರಾಗಿ ಅಭಿನಯಿಸಿದ್ದಾರೆ. ಇವರಿಗೆ ಭವ್ಯ ಕೃಷ್ಣ, ಅಂಕಿತ, ಮತ್ತು ಸುವರ್ಣ ಶೆಟ್ಟಿ ಜೋಡಿಯಾಗಿದ್ದಾರೆ. ಇನ್ನು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನದ ಜೊತೆ ನಿರ್ಮಾಣ ಮಾಡಿದ್ದಾರೆ ಸಂತೋಷ್ ಕುಮಾರ್. 'ಸ್ಟೂಡೆಂಟ್ಸ್' ಚಿತ್ರತಂಡದ ಸಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿರುವ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ


Click it and Unblock the Notifications











