ತಮಿಳಿನ ಹಾಸ್ಯ ನಟ ಯೋಗಿ ಬಾಬು ಜೊತೆ ಪ್ರಮೋದ್ ಶೆಟ್ಟಿ: ಇದು ಪ್ಯಾನ್ ಇಂಡಿಯಾ ಸಿನಿಮಾ!
ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ಈಗ ಟ್ರೆಂಡ್ ಆಗಿಬಿಟ್ಟಿದೆ. 'ಕೆಜಿಎಫ್ 2', 'ವಿಕ್ರಾಂತ್ ರೋಣ', '777 ಚಾರ್ಲಿ' , 'ಕಾಂತಾರ' ಬಳಿಕ ಪ್ಯಾನ್ ಇಂಡಿಯಾ ಸಿನಿಮಾ ಕಡೆಗೆನೇ ಎಲ್ಲರೂ ಕಣ್ಣಿಟ್ಟಿದ್ದಾರೆ. ಕನ್ನಡದ ಮತ್ತೊಬ್ಬ ನಿರ್ಮಾಪಕರು ಈಗ ಇಂತಹದ್ದೇ ಸಾಹಸಕ್ಕೆ ಕೈ ಹಾಕಿದ್ದಾರೆ.
ಕನ್ನಡದಲ್ಲಿ 'ತೂತು ಮಡಿಕೆ' ಅನ್ನೋ ಸಿನಿಮಾ ಮಾಡಿ ಮೆಚ್ಚುಗೆ ಗಳಿಸಿದ್ದ ನಿರ್ಮಾಪಕ ಮಧುಸೂಧನ್ ರಾವ್ ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಮೊದಲ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡುವುದಕ್ಕೆ ರೆಡಿಯಾಗಿದ್ದಾರೆ. ಮುಂಬರುವ ಸಂಕ್ರಾಂತಿ ಹಬ್ಬದಂದು ಈ ಸಿನಿಮಾ ಸೆಟ್ಟೇರಲಿದೆ.
ವಿಶೇಷ ಅಂದ್ರೆ, ತಮಿಳುನಾಡಿನ ಹಾಸ್ಯ ನಟ ಯೋಗಿ ಬಾಬು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಕನ್ನಡ ಪ್ರತಿಭಾವಂತ ನಟ ಪ್ರಮೋದ್ ಶೆಟ್ಟಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾ ಸೆಟ್ಟೇರಲಿದೆ.

ಅಂದ್ಹಾಗೆ ಸಿನಿಮಾದ ಹೆಸರು 'ಸನ್ನಿದಾನ ಪಿ.ಒ'. ಟೈಟಲ್ ವಿಭಿನ್ನವಾಗಿದ್ದು, ಸ್ಟಾರ್ ಕಾಸ್ಟ್ ಕೂಡ ಡಿಫ್ರೆಂಟ್ ಆಗಿಯೇ ಇರುತ್ತೆ ಅನ್ನೋ ಸುಳಿವನ್ನು ಸಿನಿಮಾತಂಡ ನೀಡಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ಜನವರಿ 14 ಸಂಕ್ರಾಂತಿ ಹಬ್ಬದಂದು ಶಬರಿ ಮಲೆಯ ಸನ್ನಿದಾನದಲ್ಲಿಯೇ ಸೆಟ್ಟೇರಲಿದೆ.
'ಸನ್ನಿದಾನ ಪಿ.ಒ' ಈ ಸಿನಿಮಾ ಪಕ್ಕಾ ಡಿವೈನ್ ಲವ್ ಸ್ಟೋರಿ. ಮಲಯಾಳಂ ಸಿನಿಮಾದ ನಿರ್ದೇಶಕ ರಾಜೀವ್ ವೈದ್ಯ ಇದಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ತಮಿಳಿನ ಹಾಸ್ಯ ನಟ ಯೋಗಿ ಬಾಬು ಹಾಗೂ ಸ್ಯಾಂಡಲ್ವುಡ್ ನಟ ಪ್ರಮೋದ್ ಶೆಟ್ಟಿ ಕಾಂಬಿನೇಷನ್ ಅನ್ನು ಈ ಸಿನಿಮಾದಲ್ಲಿ ನೋಡಬಹುದಾಗಿದೆ.

ಇವರಷ್ಟೇ ಅಲ್ಲದೆ ದಕ್ಷಿಣ ಭಾರತದ ಸ್ಟಾರ್ ನಟರು ಹಾಗೂ ನಟಿಯರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಸಿನಿಮಾ ತಂಡ ಇನ್ನೂ ಆ ಸೀಕ್ರೆಟ್ ಅನ್ನು ಬಿಟ್ಟುಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ರಿವೀಲ್ ಮಾಡಲಿದೆ. ಮಧುಸುಧನ್ ರಾವ್ ಹಾಗೂ ಶಬೀರ್ ಪಠಾನ್ ಈ ಬಿಗ್ ಬಜೆಟ್ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಈ ಸಿನಿಮಾ ಮೂಲಕ ದಕ್ಷಿಣ ಭಾರತ ಮೂರು ಚಿತ್ರರಂಗದ ನಟರು, ತಂತ್ರಜ್ಞರು ಒಂದಾಗುತ್ತಿದ್ದಾರೆ.


Click it and Unblock the Notifications











