ಭಯಂಕರ ಬಿರುಗಾಳಿಗೆ ಸಿಲುಕಿದ 'ದಿ ವಿಲನ್' ಚಿತ್ರತಂಡ: ಪಾರಾದ ಕಿಚ್ಚ ಸುದೀಪ್.!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಮೊಟ್ಟ ಮೊದಲ ಬಾರಿಗೆ ಒಟ್ಟಾಗಿ ಅಭಿನಯಿಸುತ್ತಿರುವ 'ದಿ ವಿಲನ್' ಚಿತ್ರದ ಚಿತ್ರೀಕರಣದಲ್ಲಿ ಇಂದು ಅಲ್ಲೋಲ ಕಲ್ಲೋಲ ಸಂಭವಿಸಿದೆ.
ಕುಂದಾನಗರಿ ಬೆಳಗಾವಿಯಲ್ಲಿ 'ದಿ ವಿಲನ್' ಚಿತ್ರದ ಶೂಟಿಂಗ್ ನಡೆಯುತ್ತಿರುವ ಸಮಯದಲ್ಲಿ ಭಾರಿ ಬಿರುಗಾಳಿ ಬೀಸಿದೆ. ಸುಮಾರು 15 ರಿಂದ 20 ನಿಮಿಷಗಳ ಕಾಲ ಬೀಸಿದ ಭಯಂಕರ ಬಿರುಗಾಳಿಯಿಂದ 'ದಿ ವಿಲನ್' ಚಿತ್ರದ ಸೆಟ್ ಸಂಪೂರ್ಣವಾಗಿ ಜಖಂಗೊಂಡಿದೆ.[ಕುಂದಾನಗರಿಯಲ್ಲಿ ಅಬ್ಬರಿಸುತ್ತಿರುವ ಖತರ್ನಾಕ್ 'ವಿಲನ್']
ಕೂದಲೆಳೆ ಅಂತರದಲ್ಲಿ ಕಿಚ್ಚ ಸುದೀಪ್, ನಿರ್ದೇಶಕ ಪ್ರೇಮ್ ಹಾಗೂ ಮಾಸ್ ಮಾದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿರುಗಾಳಿ ಜೊತೆ ದಪ್ಪ ಕಲ್ಲುಗಳು ಬಿದ್ದ ಪರಿಣಾಮ ಕೆಲವರಿಗೆ ಗಾಯಗಳಾಗಿವೆ.

ಘಟನೆಯ ಹಿನ್ನಲೆ...
ಕಳೆದ ಕೆಲ ದಿನಗಳಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ರಾಮತೀರ್ಥ ಎಂಬ ಗ್ರಾಮದಲ್ಲಿ 'ದಿ ವಿಲನ್' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸುದೀಪ್ ಭಾಗದ ಶೂಟಿಂಗ್ ಮಾಡಲಾಗುತ್ತಿದೆ. ಇವತ್ತು ಸುದೀಪ್ ರವರ ಫೈಟಿಂಗ್ ಹಾಗೂ ಚೇಸಿಂಗ್ ದೃಶ್ಯಗಳನ್ನ ಸೆರೆ ಹಿಡಿಯಲಾಗುತ್ತಿತ್ತು.

ಬಟ್ಟ ಬಯಲಿನಲ್ಲಿ ಬೀಸಿದ ಬಿರುಗಾಳಿ
ಬಟ್ಟ ಬಯಲಿನಲ್ಲಿ 'ದಿ ವಿಲನ್' ಚಿತ್ರದ ಕೆಲ ದೃಶ್ಯಗಳನ್ನ ಚಿತ್ರೀಕರಿಸಲಾಗುತ್ತಿತ್ತು. ಇವತ್ತಿನ ಲಾಸ್ಟ್ ಶಾಟ್ ಕ್ಯಾಮರಾದಲ್ಲಿ ರೋಲ್ ಆಗುತ್ತಿತ್ತು. ಸುತ್ತಲು ಕಾರುಗಳು... ನಡುವೆ ಸುದೀಪ್ ಸ್ಟಂಟ್ ಮಾಡಬೇಕಿತ್ತು. ಅಷ್ಟರಲ್ಲಿ ಬಿರುಗಾಳಿ ಬೀಸಲಾರಂಭಿಸಿತು.

ಬಚಾವ್ ಆದ ಸುದೀಪ್
ಭಯಂಕರ ಬಿರುಗಾಳಿ ಬೀಸುತ್ತಿದ್ದಂತೆಯೇ ಸುದೀಪ್ ಬಳಿ ಓಡಿ ಹೋದ ನಿರ್ದೇಶಕ 'ಜೋಗಿ' ಪ್ರೇಮ್, ಕಿಚ್ಚನನ್ನ ಹಿಡಿದುಕೊಂಡರು. ಕೂಡಲೆ ಇಬ್ಬರ ಬಳಿ ಬಂದ ಸಾಹಸ ನಿರ್ದೇಶಕ ಮಾಸ್ ಮಾದ, ಸುದೀಪ್ ಹಾಗೂ ಪ್ರೇಮ್ ರವರನ್ನ ರಕ್ಷಿಸಿದರು.

ಓಡಿ ಬಂದ ಅಭಿಮಾನಿಗಳು
ಬಿರುಗಾಳಿ ಬೀಸುತ್ತಿದ್ದರೂ, ಅಭಿಮಾನಿಗಳು ತಮ್ಮ ಪ್ರಾಣವನ್ನ ಲೆಕ್ಕಿಸದೆ.. ಚಿತ್ರತಂಡದ ರಕ್ಷಣೆಗೆ ಮುಂದಾದರು. ದಪ್ಪ ಕಲ್ಲುಗಳ ಸಮೇತ ಬಿರುಗಾಳಿ ಬೀಸುತ್ತಿದ್ದರಿಂದ ಅನೇಕ ಅಭಿಮಾನಿಗಳ ತಲೆ, ಕಾಲು, ಕೈಗಳಿಗೆ ಪೆಟ್ಟಾಗಿದೆ.

'ದಿ ವಿಲನ್' ಸೆಟ್ ಗೆ ಹಾನಿ
ಬಿರುಗಾಳಿಯಿಂದ 'ದಿ ವಿಲನ್' ಸೆಟ್ ಗೆ ಹಾನಿಯುಂಟಾಗಿದೆ. 'ದಿ ವಿಲನ್' ಶೂಟಿಂಗ್ ಗೆ ಬಳಸಲಾಗಿದ್ದ ಅನೇಕ ಉಪಕರಣಗಳು ಹಾಗೂ ವಸ್ತುಗಳು ಬಿರುಗಾಳಿಯಲ್ಲಿ ಹಾರಿ ಹೋಗಿವೆ.

ನಿರ್ದೇಶಕ ಪ್ರೇಮ್ ಏನಂತಾರೆ.?
''ನಾವು ಶೂಟಿಂಗ್ ಮಾಡುತ್ತಿದ್ವಿ. ಲಾಸ್ ಶಾಟ್ ತೆಗೆಯಬೇಕಾಗಿತ್ತು. ಇದಕ್ಕಿದ್ದಂತೆ ಬಿರುಗಾಳಿ ಬೀಸಿತು. ನಮಗೆಲ್ಲ ಶಾಕ್ ಆಗೋಯ್ತು. ನಾನು ಓಡಿ ಹೋಗಿ ಸುದೀಪ್ ರವನ್ನ ಹಿಡಿದುಕೊಂಡೆ, ನಮ್ಮನ್ನ ಮಾಸ್ ಮಾದ ಹಿಡಿದುಕೊಂಡರು. ಎಲ್ಲರೂ ಓಡಿ ಬಂದು ನಮ್ಮನ್ನ ಕಾಪಾಡಿದರು. ಕಲ್ಲುಗಳು ಬಿದ್ದಿದ್ರಿಂದ ಅಭಿಮಾನಿಗಳಿಗೆ ಸ್ವಲ್ಪ ಏಟು ಆಯ್ತು'' ಎಂದು ಗಾಬರಿಯಿಂದ ನುಡಿಯುತ್ತಾರೆ ನಿರ್ದೇಶಕ ಪ್ರೇಮ್.

ದೇವರ ದಯೆಯಿಂದ ಬದುಕಿದ್ದೇವೆ
''15-20 ನಿಮಿಷಗಳ ಕಾಲ ಬಿರುಗಾಳಿ ಬೀಸಿತು. ನಮಗೆ ಉಸಿರಾಡುವುದೇ ಕಷ್ಟ ಆಯ್ತು. ದೇವರ ದಯೆಯಿಂದ ನಾವು ಬದುಕಿದ್ದೇವೆ ಎಂದು ಭಾವಿಸುತ್ತೇನೆ. ದೇವರ ಆಶೀರ್ವಾದದಿಂದ ಯಾರಿಗೂ ಏನೂ ಆಗಲಿಲ್ಲ'' - ನಿರ್ದೇಶಕ ಪ್ರೇಮ್

ಸುದೀಪ್ ಗೆ ಏನೂ ಆಗಿಲ್ಲ
''ಸುದೀಪ್ ಗೆ ಏನೂ ಆಗಿಲ್ಲ. ಆರಾಮಾಗಿ ಇದ್ದಾರೆ. ನಮ್ಮನ್ನ ಕಾಪಾಡಿದ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳುತ್ತೇನೆ'' - ನಿರ್ದೇಶಕ ಪ್ರೇಮ್.

ನಾಳೆ ಪುನಃ ಶೂಟಿಂಗ್
ಇಂದು ಬಿರುಗಾಳಿ ಬೀಸಿರುವ ಜಾಗದಲ್ಲಿಯೇ ನಾಳೆ ಪುನಃ ಶೂಟಿಂಗ್ ಇದ್ಯಂತೆ. ಇಂದು ತೆಗೆಯಬೇಕಿದ್ದ ಶಾಟ್ ಪೂರ್ಣಗೊಂಡರೆ ಪ್ಯಾಕಪ್ ಮಾಡುತ್ತೇವೆ ಎನ್ನುತ್ತಾರೆ ನಿರ್ದೇಶಕ ಪ್ರೇಮ್

ವಿಡಿಯೋ ಇಲ್ಲಿದೆ ನೋಡಿ....
'ದಿ ವಿಲನ್' ಚಿತ್ರೀಕರಣ ನಡೆಯುವಾಗ ಬಿರುಗಾಳಿ ಬೀಸಿದ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

ಸುದೀಪ್ ಟ್ವೀಟ್ ಕೂಡ ಮಾಡಿದ್ದಾರೆ
''ದಿನದ ಕೊನೆ ಶಾಟ್ ತೆಗೆಯುವಾಗ ಏನು ಬಂತು ಅಂತ ನೋಡಿರಿ...'' ಎಂದು ಸುದೀಪ್ ಮಾಡಿರುವ ಟ್ವೀಟ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...


Click it and Unblock the Notifications











