ದರ್ಶನ್, ಕಿಚ್ಚಗೆ ಲಾಯರ್ ನೋಟೀಸ್ ಕೊಟ್ಟಿದ್ದೇಕೆ?
ಬೆಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರಗಳಲ್ಲೊಂದಾದ ತ್ರಿವೇಣಿ ಚಿತ್ರಮಂದಿರ ಸದ್ಯದಲ್ಲೇ ಮಾರಾಟವಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದವು.
ಈ ಚಿತ್ರಮಂದಿರ ಇರುವುದು ಗಾಂಧಿನಗರದಲ್ಲಿ ತಾನೇ, ಹಾಗಾಗಿ ಗಾಳಿಸುದ್ದಿಗೇನೂ ಬರವಿರಲಿಲ್ಲ. ಅಂತೆ ಕಂತೆ ಕಥೆಗಳು ಬೆಳೆಯುತ್ತಲ್ಲೇ ಇದ್ದವು. ಈ ವಿಚಾರವೀಗ ಹೊಸ ಟ್ವಿಸ್ಟ್ ಪಡೆದು ಕೊಂಡಿದೆ.
ಈ ಚಿತ್ರಮಂದಿರವನ್ನು ಖರೀದಿಸಬಾರದೆಂದು ಮೂವರು ನಟರಿಗೆ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್ ಡಿ ಗಂಗರಾಜು ಅವರಿಗೆ ವಕೀಲರೊಬ್ಬರು ನೋಟೀಸ್ ಜಾರಿ ಮಾಡಿದ್ದಾರೆ.
ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಬಹುಭಾಷಾ ನಟ ಕಮಲಹಾಸನ್ ಈ ಮೂವರಿಗೂ ಚಿತ್ರಮಂದಿರ ಖರೀದಿಸುವ ಪ್ರಯತ್ನಕ್ಕೆ ಮುಂದಾಗಬಾರದೆಂದು ದಕ್ಷಾ ಗೌಡ ಪರ ವಕೀಲ ಶಂಕರಪ್ಪ ನೋಟೀಸ್ ಜಾರಿ ಮಾಡಿದ್ದಾರೆ.

ಯಾಕೆಂದರೆ ಈ ನಾಲ್ವರೂ ಹಲವಾರು ಹಿಟ್ ಚಿತ್ರಗಳನ್ನು ಪ್ರದರ್ಶಿಸಿರುವ ತ್ರಿವೇಣಿ ಚಿತ್ರಮಂದಿರವನ್ನು ಖರೀದಿಸಲು ಮುಂದಾಗಿದ್ದರು ಎನ್ನಲಾಗುತ್ತಿದೆ.
ಈ ದಕ್ಷಾ ಗೌಡ ಯಾರು? ಈ ಚಿತ್ರಮಂದಿರದ ಮಾಲೀಕರ ಮಗಳೇ ದಕ್ಷಾ ಗೌಡ. ಪ್ರಸಕ್ತ ದಕ್ಷಾ ಗೌಡ ತಂದೆ ಮತ್ತು ತಾಯಿ ಬೇರೆ ಬೇರೆಯಾಗಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.
ಈ ಚಿತ್ರಮಂದಿರವನ್ನು ಮಾಲೀಕರ ಸೊಸೆ ಮಾರಾಟ ಮಾಡಲು ಮುಂದಾಗಿರುವುದು ಸಮಸ್ಯೆ ಈಗ ಉಲ್ಭಣವಾಗಲು ಕಾರಣವಾಗಿದೆ.
ಇದು ಪಿತ್ರಾರ್ಜಿತ ಆಸ್ತಿ ನನ್ನ ಅನುಮತಿ ಇಲ್ಲದೇ ಮಾರಾಟ ಪ್ರಕ್ರಿಯೆಗೆ ಮುಂದಾಗಬಾರದು. ಈ ಆಸ್ತಿಯ ಮೇಲೆ ನಾಲ್ವರಿಗೆ ಹಕ್ಕಿದೆ (ಮಾಲೀಕ, ಮಾಲೀಕರ ಹೆಂಡತಿ, ಮಗಳು, ಸೊಸೆ) ಎಂದು ಚಿತ್ರಮಂದಿರದ ಮಾಲೀಕರ ಮಗಳು ದಕ್ಷಾ ಗೌಡ ತಮ್ಮ ವಕೀಲರ ಮೂಲಕ ದರ್ಶನ್, ಸುದೀಪ್, ಕಮಲಹಾಸನ್ ಮತ್ತು ಗಂಗರಾಜು ಅವರಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ಆಗಸ್ಟ್ 1, 2014ರ ವರೆಗೆ ಈ ಚಿತ್ರಮಂದಿರವನ್ನು ಕನ್ನಡದ ಹೆಸರಾಂತ ನಿರ್ಮಾಪಕ, ವಿತರಕ ಕೆಸಿಎನ್ ಕುಮಾರ್ ಗುತ್ತಿಗೆ ಪಡೆದಿದ್ದಾರೆ. ಸದ್ಯ ಇಲ್ಲಿ ಶಿವಣ್ಣ ಅಭಿನಯದ ಭಜರಂಗಿ ಚಿತ್ರ ಜನಭರಿತ ಪ್ರದರ್ಶನ ಕಾಣುತ್ತಿದೆ.


Click it and Unblock the Notifications











