ಶಿವರಾಜ್ ಕುಮಾರ್ ಮಾನವೀಯತೆಗೆ ಬೆನ್ನುತಟ್ಟಿದ ಸಿಎಂ
ನಿರ್ಮಾಪಕರ ಮತ್ತು ನಿರ್ದೇಶಕರ ಪಾಲಿಗೆ ಮಿಸ್ಟರ್ ಜಂಟಲ್ ಮ್ಯಾನ್ ನಟನೆಂದೇ ಹೆಸರು ಪಡೆದಿರುವ ಡಾ.ರಾಜ್ ವಂಶದ ಕುಡಿ ಶಿವರಾಜ್ ಕುಮಾರ್ ತನ್ನ 51ನೇ ಹುಟ್ಟುಹಬ್ಬವನ್ನು ಜುಲೈ 12ರಂದು ವಿಭಿನ್ನವಾಗಿ ಮತ್ತು ಸರಳವಾಗಿ ಆಚರಿಸಿದ್ದು ನಿಮಗೆ ತಿಳಿದೇ ಇದೆ.
ಅಂದು ಶಿವಣ್ಣನಿಗೆ ಹಾರ ತುರಾಯಿ, ಕೇಕ್ ತರಬೇಡಿ ಬದಲಾಗಿ ಉತ್ತಾರಖಂಡದ ಪ್ರವಾಹ ಸಂತ್ರಸ್ತರಿಗೆ ನಿಮ್ಮ ಕೈಲಾದ ದೇಣಿಗೆ ನೀಡಿ ಎಂದು ಅಖಿಲ ಕರ್ನಾಟಕ ಶಿವಣ್ಣ ಅಭಿಮಾನಿಗಳ ಸಂಘ ಕರೆ ನೀಡಿತ್ತು.
ಸಂಘದ ಕರೆಗೆ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಸ್ಪಂಧಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಶಿವರಾಜ್ ಕುಮಾರ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಕೈಕುಲುಕಿ ಹುಟ್ಟುಹಬ್ಬದ ಶುಭಾಷಯ ಕೋರಿ ದೇಣಿಗೆ ನೀಡಿದ್ದರು.

ಅಭಿಮಾನಿಗಳಿಂದ ಅಂದು ಸಂಗ್ರಹಿಸಿದ ದೇಣಿಗೆ ಹಣದ ಜೊತೆ ತಾವೂ ಉತ್ತರಾಖಂಡದ ಪ್ರವಾಹ ಸಂತ್ರಸ್ತರಿಗೆ ಶಿವಣ್ಣ ಸಹಾಯಹಸ್ತ ಚಾಚಿದ್ದಾರೆ. ಶನಿವಾರ (ಜು 20) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಶಿವಣ್ಣ ದೇಣಿಗೆ ಮೊತ್ತವನ್ನು ಹಸ್ತಾಂತರಿಸಿದ್ದಾರೆ.
ಅಭಿಮಾನಿಗಳಿಂದ ಸಂಗ್ರಹವಾದ ಆರು ಲಕ್ಷ ರೂಪಾಯಿ ಜೊತೆಗೆ ತನ್ನ ಸ್ವಂತದ ಐದು ಲಕ್ಷ ರೂಪಾಯಿ ಸೇರಿ ಒಟ್ಟು ಬರೋಬ್ಬರಿ ಹನ್ನೊಂದು ಲಕ್ಷ ರೂಪಾಯಿ ದೇಣಿಗೆ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
ಶಿವಣ್ಣನ ಜೊತೆ ನಿರ್ಮಾಪಕ ಮತ್ತು ಅಖಿಲ ಕರ್ನಾಟಕ ಡಾ. ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಮತ್ತು ಮತ್ತೊಬ್ಬ ನಿರ್ಮಾಪಕರಾದ ಶ್ರೀಕಾಂತ್ ಕೂಡಾ ಜೊತೆಗಿದ್ದರು.
ಶಿವಣ್ಣ ಮತ್ತು ಅವರ ಅಭಿಮಾನಿಗಳ ಮಾನವೀಯ ಕೆಲಸಕ್ಕೆ ಮುಖ್ಯಮಂತ್ರಿ ಭೇಷ್ ಶಿವಣ್ಣ, ಶಹಬ್ಬಾಸ್ ಎಂದು ಬೆನ್ನುತಟ್ಟಿ ಕಳುಹಿಸಿದ್ದಾರೆ.


Click it and Unblock the Notifications











