'ವಿರಾಟಪುರ ವಿರಾಗಿ' ರಥಯಾತ್ರೆಗೆ ಚಾಲನೆ ನೀಡಿದ ಸಿ ಎಂ ಬಸವರಾಜ ಬೊಮ್ಮಾಯಿ!
ಎರಡನೇ ಬಸವಣ್ಣ ಎಂದೇ ಜನಪ್ರಿಯರಾಗಿರುವ ಹಾನಗಲ್ಲ ಕುಮಾರಸ್ವಾಮಿಗಳ ಜೀವನವನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಅದರ ಹೆಸರೇ 'ವಿರಾಟಪುರ ವಿರಾಗಿ'. ಹಾನಗಲ್ಲ ಕುಮಾರಸ್ವಾಮಿಗಳ ಜೀವನ ಚರಿತ್ರೆಯನ್ನು ಸಾರಲು ರಥಯಾತ್ರೆ ನಡೆಸಲು ಮುಂದಾಗಿದ್ದರು. ಅದರಂತೆ ಈಗ ಚಾಲನೆ ಸಿಕ್ಕಿದೆ.
'ವಿರಾಟಪುರ ವಿರಾಗಿ' ಸಿನಿಮಾದ 'ರಥಯಾತ್ರೆ' ರಾಜ್ಯದ ಆರು ದಿಕ್ಕುಗಳಲ್ಲಿ ಸಂಚಾರ ಆರಂಭಿಸಿದೆ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯಿಂದ ರಥಯಾತ್ರೆಗೆ ಚಾಲನೆ ನೀಡಿದ್ದಾರೆ. ಹಾಗೇ ಇನ್ನು ಉಳಿದ ಐದು ಕಡೆಗಳಲ್ಲಿ ವಿವಿಧ ಮಠಾಧೀಶರಿಂದ ರಥಯಾತ್ರೆಗೆ ಚಾಲನೆ ಸಿಕ್ಕಿದೆ. ಈ ರಥಯಾತ್ರೆಗೆ ರಾಜ್ಯದ ಮೂಲೆ ಮೂಲೆಯಿಂದ ಅಭೂತಪೂರ್ವ ಸ್ವಾಗತ ಸಿಗುತ್ತಿದೆ.

ಹಾನಗಲ್ಲ ಶ್ರೀಕುಮಾರಸ್ವಾಮಿಗಳ ಭಕ್ತರು ಊರಿನ ಹಬ್ಬ ಎನ್ನುವಂತೆ ರಥಯಾತ್ರೆಗೆ ಸ್ವಾಗತ ಕೋರಿದ್ದಾರೆ. ಅಲ್ಲದೆ ಅವರೂ ಕೂಡ ರಥಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜಾನಪದ ವಾದ್ಯ, ಕುಣಿತ, ಪೂರ್ಣ ಕುಂಭ ಸ್ವಾಗತ ಸೇರಿದಂತೆ ತಮಗೆ ತಿಳಿದಂತೆ ಭಕ್ತಿಯ ಅನುಸಾರ ಸಂಭ್ರಮಿಸುತ್ತಿದ್ದಾರೆ.
'ವಿರಾಟಪುರ ವಿರಾಗಿ' ರಥಯಾತ್ರೆ ಹೋದ ಕಡೆಯಲ್ಲಾ ಅದ್ಧೂರಿ ಸ್ವಾಗತ ಹಾಗೂ ಬೆಂಬಲ ಸಿಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲಾ, ತಾಲ್ಲೂಕು ಮತ್ತು ಪ್ರಮುಖ ನಗರಗಲ್ಲಿ ಈ ರಥ ಸಂಚರಿಸಿ ಜನವರಿ 1 ರಂದು ಗದಗದಲ್ಲಿ ಅಂತ್ಯಗೊಳ್ಳಲಿದೆ.

'ವಿರಾಟಪುರ ವಿರಾಗಿ' ರಥಯಾತ್ರೆ ಚಾಲನೆ ಸಿಕ್ಕ ಸಂದರ್ಭದಲ್ಲಿಯೇ ಸಿನಿಮಾದ ಮಣಿಕಾಂತ ಕದ್ರಿ ಸಂಗೀತ ನೀಡಿರುವ, ರವೀಂದ್ರ ಸೊರಗಾಂವಿ ಹಾಡಿರುವ 'ನೋಡಲಾಗದೆ ದೇವಾ' ಹಾಡು ಕೂಡ ಬಿಡುಗಡೆ ಆಗಿದೆ. ಅಪಾರ ಸಂಖ್ಯೆಯ ಕೇಳುಗರು ಈ ಹಾಡನ್ನು ಕೇಳಿ ಸಂಗೀತ ಪ್ರಿಯರು ಮೆಚ್ಚಿಕೊಂಡಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಮತ್ತೊಂದು ಹಾಡು ಕೂಡ ರಿಲೀಸ್ ಆಗಲಿದೆ.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು 'ವಿರಾಟಪುರ ವಿರಾಗಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಹಿರಿಯ ನಟ ಸುಚೇಂದ್ರಪ್ರಸಾದ್ ಹಾನಗಲ್ಲ ಶ್ರೀ ಕುಮಾರಸ್ವಾಮಿಗಳ ಅವತಾರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಹಲವು ಕಲಾವಿದರು ಮತ್ತು ಮಠಾಧೀಶರು ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಮಾಧಾನ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಹಾನಗಲ್ಲ ಶ್ರೀಗಳ ಚರಿತ್ರೆಗೆ ಸಿನಿಮಾ ರೂಪ ನೀಡಲಾಗಿದೆ.


Click it and Unblock the Notifications











