ವಿಷ್ಣುದಾದ ಅಭಿನಯದ 'ಕೃಷ್ಣ ನೀ ಬೇಗನೆ ಬಾರೋ' ಸಿನಿಮಾಗೆ ಮತ್ತೆ ಬಿಡುಗಡೆ ಭಾಗ್ಯ
ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಆಂಗ್ರಿ ಯಂಗ್ ಮ್ಯಾನ್. ನಾಯಕ ನಟನಾದ ಮೊದಲ ಸಿನಿಮಾದಿಂದಲೇ ವಿಷ್ಣುವರ್ಧನ್ಗೆ ಆಂಗ್ರಿ ಯಂಗ್ಮ್ಯಾನ್ ಲುಕ್ ಬಂದಿತ್ತು. ಸ್ಯಾಂಡಲ್ವುಡ್ನ ಸುಂದರ ನಟ ಕನ್ನಡ ಸಿನಿಮಾರಂಗ ಮಾಸ್ ಹೀರೋ ಆಗಿದ್ದೇ ಒಂದು ರೋಚಕ ಕಥೆ. ಮನೆಯವರಿಗೆ, ಸ್ನೇಹಿತರಿಗೆ, ಆತ್ಮೀಯರಿಗೆ ಸಂಪತ್ ಕುಮಾರ್ ಆಗಿದ್ದವರು ಸಿನಿಮಾಗೆ ಕಾಲಿಟ್ಟ ಕೂಡಲೇ ಹೊಯ್ಸಳ ದೊರೆ ವಿಷ್ಣುವರ್ಧನನ ಹೆಸರನ್ನಿಟ್ಟುಕೊಂಡಿದ್ದರು. ಇದೇ ಹೆಸರು ಭಾರತೀಯ ಚಿತ್ರರಂಗ ಎಂದೂ ಮರೆಯದ ಹೆಸರಾಯಿತು.
ವಿಷ್ಣುವರ್ಧನ್ ತನ್ನ ಜೀವಿತಾವಧಿಯಲ್ಲಿ ಸುಮಾರು 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಸಂಪತ್ ಕುಮಾರ್ ವಿಷ್ಣುವರ್ಧನ್ ಆಗಿದ್ದು, ವಿಷ್ಣುವರ್ಧನ್ ವಿಷ್ಣುದಾದಾ ಆಗಿದ್ದು ಇವೆಲ್ಲವೂ ಒಂದು ಇತಿಹಾಸ. 'ವಂಶವೃಕ್ಷ' ಎನ್ನುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸಂಪತ್ ಕುಮಾರ್ ಸಾಹಸ ಸಿಂಹ ಆಗಿದ್ದೇ ಒಂದು ರೋಚಕ ಕಥೆ. ಆದರೆ, ಈ ಆಂಗ್ರಿ ಯಂಗ್ ಮ್ಯಾನ್ ಹಿಂದೆ, ಮಾಸ್ ಹೀರೋ ಹಿಂದೊಬ್ಬ ಸುಂದರ ನಟನಿದ್ದ. ಹೆಂಗಳೆಯ ಮನ ಗೆದ್ದ ಸಿನಿಮಾಗಳಿಗೆ ಇವರೇ ಹೀರೊ. ಅಂತಹದ್ದೊಂದು ಸಿನಿಮಾ 'ಕೃಷ್ಣ ನೀ ಬೇಗನೆ ಬಾರೋ'. ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದಿದ್ದ ಈ ಸಿನಿಮಾ ಈಗ ಮರುಬಿಡುಗಡೆಯಾಗುತ್ತಿದೆ.

ವಿಷ್ಣು ಸಿನಿಮಾಗೆ ಮತ್ತೆ ಬಿಡುಗಡೆ ಭಾಗ್ಯ
1986ರಲ್ಲಿ 'ಕೃಷ್ಣ ನೀ ಬೇಗನೆ ಬಾರೋ' ಸಿನಿಮಾ ಬಿಡುಗಡೆಯಾಗಿತ್ತು. ಭಾರ್ಗವ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದು 1983ರಲ್ಲಿ ಹಿಂದಿಯಲ್ಲಿ ತೆರೆಕಂಡಿದ್ದ ಸಿನಿಮಾ 'ಸೌತೇನ್' ಚಿತ್ರದ ರಿಮೇಕ್. ರಾಜೇಶ್ ಖನ್ನ, ಪದ್ಮಿನಿ ಕೊಲ್ಹಾಪುರೆ ಸೇರಿದಂತೆ ದಿಗ್ಗಜರೇ ನಟಿಸಿದ್ದ ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಹಿಟ್ ಆಗಿತ್ತು. ಅದೇ ಸಿನಿಮಾವನ್ನು ಕನ್ನಡಕ್ಕೆ 'ಕೃಷ್ಣ ನೀ ಬೇಗನೆ ಬಾರೋ' ಹೆಸರಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಸಿನಿಮಾ ಕನ್ನಡದಲ್ಲೂ ಸೂಪರ್ ಹಿಟ್ ಆಯ್ತು. ವಿಷ್ಣುವರ್ಧನ್, ಭವ್ಯ, ಕಿಮ್ ಹಾಗೂ ಮುಖ್ಯಮಂತ್ರಿ ಚಂದ್ರು ನಟಿಸಿದ ಸಿನಿಮಾ ಬಾಕ್ಸಾಫೀಸ್ ಹಿಟ್ ಆಗಿತ್ತು. ಅದೇ ಸಿನಿಮಾವನ್ನು ಈಗ ರಿ-ರಿಲೀಸ್ ಮಾಡಲಾಗುತ್ತಿದೆ.

ಹೊಸ ರೂಪ ಪಡೆದು ಬರುತ್ತಿದೆ ವಿಷ್ಣು ಸಿನಿಮಾ
'ಕೃಷ್ಣ ನೀ ಬೇಗನೆ ಬಾರೋ' ಸಿನಿಮಾವನ್ನು ಮುನಿರಾಜು ಎಂಬ ವಿತರಕರು ರೀ-ರಿಲೀಸ್ ಮಾಡುತ್ತಿದ್ದಾರೆ. ಈ ಸಿನಿಮಾಗೆ ಹೊಸ ರೂಪ ನೀಡುತ್ತಿದ್ದಾರೆ. "ಕೃಷ್ಣ ನೀ ಬೇಗನೇ ಸಿನಿಮಾವನ್ನು ನಾನು ಸಿನಿಮಾಸ್ಕೋಪ್, 7.1 ಸೌಂಡ್ ಎಫೆಕ್ಟ್, ಡಿ ಐ, ಕಲರಿಂಗ್ ಎಲ್ಲಾ ಮಾಡಿಸಿ, ಹೊಚ್ಚ ಹೊಸ ಸಿನಿಮಾದ ಹಾಗೆ ಮಾಡಿದ್ದೇನೆ. ಆಗ ಈ ಸಿನಿಮಾ ಈಸ್ಟ್ಮನ್ ಕಲರ್ ಇತ್ತು. ಈಗಿನ ಟ್ರೆಂಡ್ ಇದೆಯಲ್ಲಾ ಹಾಗೇ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಏಪ್ರಿಲ್ ಮೊದಲವಾರ ಅಥವಾ ಎರಡನೇ ವಾರ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದೇನೆ." ಎನ್ನುತ್ತಾರೆ ವಿತರಕ ಮುನಿರಾಜು.

ವಿಷ್ಣು ಫ್ಯಾನ್ಸ್ ಒತ್ತಾಯಕ್ಕೆ ಈ ಚಿತ್ರ
"ನಾನು ಅಣ್ಣಾವ್ರ ಸಿನಿಮಾಗಳನ್ನು ರೀ-ರಿಲೀಸ್ ಮಾಡುತ್ತಿದ್ದೆ. ವಿಷ್ಣುವರ್ಧನ್ ಸಿನಿಮಾಗಳನ್ನು ರಿಲೀಸ್ ಮಾಡಬೇಕು ಅಂತ ಅಭಿಮಾನಿಗಳು ಕೇಳಿಕೊಂಡಿದ್ದರು. ಅವರಿಗಾಗಿ ಈ ಸಿನಿಮಾಗೆ ಡಿಜಿಟಲ್ ಟಚ್ ಕೊಟ್ಟು ಸಿನಿಮಾವನ್ನು ರಿಲೀಸ್ ಮಾಡುತ್ತಿದ್ದೇನೆ. ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದ್ದೇನೆ. ಕರ್ನಾಟಕದಾದ್ಯಂತ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮಾರ್ಚ್ ತಿಂಗಳಿನಲ್ಲಿಯೇ ಸಿನಿಮಾ ಬಿಡುಗಡೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದೆ. ಆದರೆ, ಅಪ್ಪು ಸಿನಿಮಾ ಇರುವುದರಿಂದ ಸಿನಿಮಾವನ್ನು ಏಪ್ರಿಲ್ ತಿಂಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಿದ್ದೇನೆ." ಎಂದು ವಿತರಕ ಮುನಿರಾಜು ಫಿಲ್ಮಿ ಬೀಟ್ಗೆ ಮಾಹಿತಿ ನೀಡಿದ್ದಾರೆ.

70 ಲಕ್ಷ ಖರ್ಚು
" ಕೃಷ್ಣ ನೀ ಬೇಗನೇ ಬಾರೊ ಸಿನಿಮಾಗೆ ಸುಮಾರು 70 ಲಕ್ಷ ಖರ್ಚು ಆಗಿದೆ. ಸಿನಿಮಾ ಖರೀದಿಯಿಂದ ಹಿಡಿದು ಸಿನಿಮಾ ಬಿಡುಗಡೆವರೆಗೆ ಸುಮಾರು 75 ಲಕ್ಷ ದಾಟಬಹುದು. ಈ ಸಿನಿಮಾ ಬಿಡುಗಡೆಗೂ ಮುನ್ನ ಸಿನಿಮಾದ ತಾರಾಗಣವನ್ನು ಕರೆಸುತ್ತಿದ್ದೇನೆ. ಈ ಸಿನಿಮಾ ಬಿಡುಗಡೆ ವೇಳೆ ನಟಿ ಭವ್ಯ ಅವರನ್ನು ಕರೆಸುತ್ತಿದ್ದೇನೆ. ಅವರು ಬಂದು ಕೃಷ್ಣ ನೀ ಬೇಗನೇ ಚಿತ್ರದ ಬಗ್ಗೆ ಮಾತಾಡಲಿದ್ದಾರೆ. " ಎನ್ನುತ್ತಾರೆ ಮುನಿರಾಜು. 'ಕೃಷ್ಣ ನೀ ಬೇಗನೆ ಬಾರೋ' ಸಿನಿಮಾ ಹೊಸ ರೂಪ ಪಡೆದು ಬಿಡುಗಡೆಯಾಗುತ್ತಿರುವುದು ವಿಷ್ಣು ಅಭಿಮಾನಿಗಳಿಗೆ ಖುಷಿಕೊಟ್ಟಿದೆ.


Click it and Unblock the Notifications











