ದೇವಸ್ಥಾನದ ಕುರಿತು ವಿವಾದಾತ್ಮಕ ಹೇಳಿಕೆ: ಪತ್ನಿ ಜ್ಯೋತಿಕಾ ಬೆಂಬಲಕ್ಕೆ ನಿಂತ ಸೂರ್ಯ
ದೇವಸ್ಥಾನಗಳ ಕುರಿತು ನಟಿ ಜ್ಯೋತಿಕಾ ನೀಡಿದ್ದ ಹೇಳಿಕೆ ಇತ್ತೀಚೆಗೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಜ್ಯೋತಿಕಾ ಅಭಿಮಾನಿಗಳು ಸೇರಿದಂತೆ ವಿವಿಧ ಸಂಘಟನೆಗಳು ಕೂಡ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಜ್ಯೋತಿಕಾ ಬಹಿರಂಗ ಕ್ಷಮೆ ಕೇಳುವಂತೆ ಆಗ್ರಹಿಸಿದ್ದವು.
Recommended Video
ದೇವಸ್ಥಾನಗಳಿಗೆ ಹಣ ನೀಡುವ ಬದಲು ಅದನ್ನು ಆಸ್ಪತ್ರೆಗಳ ನಿರ್ಮಾಣ ಮತ್ತು ಶಾಲೆಗಳ ಮೇಲೆ ವಿನಿಯೋಗಿಸಬೇಕು ಎಂದು ಜ್ಯೋತಿಕಾ ಹೇಳಿದ್ದರು. ಜಸ್ಟ್ ಫಾರ್ ವಿಮೆನ್ ಪ್ರಶಸ್ತಿ ಸಮಾರಂಭದ ವೇಳೆ ಜ್ಯೋತಿಕಾ ಆಡಿದ್ದ ಮಾತು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
'ರಾಚಸಿ' ಚಿತ್ರದ ನಟನೆಗೆ ನಟಿ ಸಿಮ್ರಾನ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದ ಜ್ಯೋತಿಕಾ, ಆ ಚಿತ್ರದ ಚಿತ್ರೀಕರಣದ ವೇಳೆ ತಂಜಾವೂರ್ನಲ್ಲಿ ತಮಗಾದ ಅನುಭವವನ್ನು ಜ್ಯೋತಿಕಾ ಆ ಸಂದರ್ಭದಲ್ಲಿ ಹೇಳಿದ್ದರು. ಮುಂದೆ ಓದಿ...

ಸುಂದರವಾದ ದೇವಸ್ಥಾನ
'ಪಟ್ಟಣದಿಂದ ಹೊರಡುವ ಮುನ್ನ ಅಲ್ಲಿನ ಬೃಹದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಅದರ ವೈಭೋಗವನ್ನು ಸವಿಯಬೇಕು ಎಂದಿದ್ದರು. ನಾನು ಆಗಲೇ ಅಲ್ಲಿಗೆ ಹೋಗಿದ್ದೆ. ಅದು ಬಹಳ ಸುಂದರವಾಗಿತ್ತು. ಉದಯಪುರದ ಅರಮನೆಯಂತೆಯೇ ಅದನ್ನು ನಿರ್ವಹಣೆ ಮಾಡಿದ್ದರು.

ದೇವಸ್ಥಾನದ ಹಣ ಆಸ್ಪತ್ರೆಗೂ ನೀಡಿ
ನನ್ನ ಮರುದಿನದ ಶೂಟಿಂಗ್ ಆಸ್ಪತ್ರೆಯಲ್ಲಿತ್ತು. ಅದು ಬಹಳ ಕೆಟ್ಟದಾಗಿ ನಿರ್ವಹಣೆಯಾಗಿತ್ತು. ಆಸ್ಪತ್ರೆಯಲ್ಲಿ ನಾನು ಏನು ನೋಡಿದೆ ಎಂಬುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನನ್ನ ಮನವಿಯೇನೆಂದರೆ ದೇವಸ್ಥಾನವೊಂದರ ನಿರ್ವಹಣೆಗಾಗಿ ಜನರು ಅಪಾರ ಹಣವನ್ನು ವಿನಿಯೋಗಿಸುತ್ತಿದ್ದಾರೆ. ಭಕ್ತರಾಗಿ ದೇವಸ್ಥಾನಗಳಿಗೆ ತುಂಬಾ ಹಣ ನೀಡುತ್ತಿದ್ದಾರೆ. ದಯವಿಟ್ಟು ಅದೇ ಮೊತ್ತದ ಹಣವನ್ನು ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲು ಬಳಸಿ' ಎಂದು ಜ್ಯೋತಿಕಾ ಹೇಳಿದ್ದರು.

ಆಸ್ಪತ್ರೆ, ಶಾಲೆಗಳೂ ಮುಖ್ಯ
'ನನಗೆ ಬಹಳ ಬೇಸರವಾಯಿತು. ನಾನು ಬಳಿಕ ದೇವಸ್ಥಾನಕ್ಕೆ ಹೋಗಲಿಲ್ಲ. ಆಸ್ಪತ್ರೆಯ ಸ್ಥಿತಿ ನೋಡಿದ ನಂತರ ನಾನು ದೇವಸ್ಥಾನಕ್ಕೆ ಹೋಗಲಿಲ್ಲ. ದೇವಸ್ಥಾನದಂತೆಯೇ ಆಸ್ಪತ್ರೆಗಳು ಮತ್ತು ಶಾಲೆಗಳು ಮುಖ್ಯ' ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಜ್ಯೋತಿಕಾ ಪರ-ವಿರೋಧ
ಜ್ಯೋತಿಕಾ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚರ್ಚ್ ಮತ್ತು ಮಸೀದಿಗಳಿಗೆ ಹಣ ಒದಗಿಸಬಾರದು ಎಂದು ಸರ್ಕಾರಕ್ಕೆ ಏಕೆ ನೀವು ಹೇಳಬಾರದು ಎಂದು ಕೆಲವರು ಪ್ರಶ್ನಿಸಿದ್ದರು. ಇನ್ನು ಅನೇಕರು ಜ್ಯೋತಿಕಾ ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ ಎಂದು ಬೆಂಬಲಿಸಿದ್ದರು.

ವಿವಾದ ಸೃಷ್ಟಿಸುತ್ತಿದ್ದಾರೆ
ಈಗ ನಟ ಸೂರ್ಯ ಪತ್ನಿಯ ಬೆಂಬಲಕ್ಕೆ ನಿಂತಿದ್ದಾರೆ. 'ವಿವೇಕಾನಂದ ಮತ್ತು ತಿರುಮುಲರ್ ಅವರಂತಹ ಅನೇಕ ವಿದ್ವಾಂಸರು ಹಾಗೂ ಸಂತರು ಇದನ್ನೇ ಹೇಳಿದ್ದರು. ಆದರೆ ಅಂತಹ ಉತ್ತಮ ಸಂದೇಶಗಳಿಗೆ ಕಿವುಡರಾಗಿದ್ದವರು ಈಗ ಜ್ಯೋತಿಕಾ ಮಾತಿನಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ' ಎಂದು ಕಿಡಿಕಾರಿದ್ದಾರೆ.

ಮಕ್ಕಳಿಗೆ ಮಾನವೀಯತೆ ಕಲಿಸುತ್ತಿದ್ದೇವೆ
'ದೇವರನ್ನು ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಲ್ಲಿ ದೇವರನ್ನು ಕಾಣಬಹುದು ಎಂಬ ಸತ್ಯವನ್ನು ಎಲ್ಲ ಧರ್ಮಗಳೂ ಒಪ್ಪಿಕೊಂಡಿವೆ. ಜ್ಯೋತಿಕಾ ಹೇಳಿದ್ದೂ ಅದನ್ನೇ. ಧರ್ಮಕ್ಕಿಂತಲೂ ಮುಖ್ಯವಾಗಿ ಮಾನವೀಯತೆಯನ್ನು ನಮ್ಮ ಮಕ್ಕಳಿಗೆ ಕಲಿಸುತ್ತಿದ್ದೇವೆ. ಕೆಲವರು ದ್ವೇಷ ಹಂಚಿದರೂ ಮಾಧ್ಯಮ ಸಂಸ್ಥೆಗಳು, ಅಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ನಮ್ಮ ಬೆಂಬಲಕ್ಕೆ ನಿಂತಿರುವುದು ಖುಷಿ ನೀಡಿದೆ' ಎಂದು ಹೇಳಿದ್ದಾರೆ.


Click it and Unblock the Notifications











