ಸೂಪರ್ಸ್ಟಾರ್ ರಜನಿಕಾಂತ್ ರಾಜ್ಯಪಾಲರಾಗುತ್ತಾರಾ? ತಮಿಳು ನಾಡಿನಲ್ಲೇನಿದು ಸುದ್ದಿ?
ಸೂಪರ್ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಅಭಿಮಾನಿಗಳಿಗೆ ಕಗ್ಗಂಟಾಗಿ ಉಳಿದಿದೆ. ಸೂಪರ್ಸ್ಟಾರ್ ಅನಾರೋಗ್ಯಕ್ಕೀಡಾದ ಬಳಿಕ ಬಹಿರಂಗ ಪತ್ರ ಬರೆದಿದ್ದರು. ಈ ಪತ್ರದಲ್ಲಿ " ಇನ್ನು ಮುಂದ ರಾಜಕೀಯಕ್ಕೆ ಬರುವುದಿಲ್ಲ. ಭವಿಷ್ಯದಲ್ಲಿಯೂ ನನ್ನ ನಿರ್ಣಯವನ್ನು ಬದಲಾವಣೆ ಮಾಡುವುದಿಲ್ಲ." ಎಂದು ಪತ್ರದಲ್ಲಿ ಹೇಳಿದ್ದರು.
ಅಲ್ಲಿಗೆ ತಲೈವಾ ರಾಜಕೀಯ ಪ್ರವೇಶಕ್ಕೆ ಬಹುತೇಕ ಬ್ರೇಕ್ ಬಿದ್ದಂತೆ. ಇನ್ಮುಂದೆ ರಜನಿಕಾಂತ್ ಮತ್ತೆಂದೂ ರಾಜಕೀಯದ ಬಗ್ಗೆ ಮಾತಾಡುವುದಿಲ್ಲ ಅನ್ನೋದು ಕನ್ಪರ್ಮ್ ಆಗಿತ್ತು. ರಾಜಕೀಯ ಉದ್ದೇಶಕ್ಕೆಂದೇ ಸ್ಥಾಪಿಸಲಾಗಿದ್ದ'ರಜನಿ ಮಕ್ಕಳ್ ಮಂಡ್ರಂ' ಪಕ್ಷವನ್ನು ರಜನಿಕಾಂತ್ 'ರಜನಿ ರಸಿಗರ್ ಮಂಡ್ರಂ' ಸಂಘವಾಗಿ ಬದಲಾಯಿಸಿದ್ದರು. ಇಷ್ಟೆಲ್ಲಾ ಬೆಳವಣಿಗಳ ಬಳಿಕ ರಜನಿಕಾಂತ್ ರಾಜಕೀಯ ಪ್ರವೇಶ ಮುಗಿದ ಅಧ್ಯಾಯವೆಂದೇ ಭಾವಿಸಲಾಗಿತ್ತು.
ಇಷ್ಟೆಲ್ಲಾ ಆಗಿದ್ದರೂ, ಈಗ ಮತ್ತೆ ರಜನಿಕಾಂತ್ ರಾಜಕೀಯ ಪ್ರವೇಶದ ಸದ್ದು ಮಾಡುತ್ತಿದೆ. ತಮಿಳುನಾಡು ಹಾಗೂ ಆಂಧ್ರದಲ್ಲಿ ರಜನಿಕಾಂತ್ ರಾಜಕೀಯದ ಬಗ್ಗೆ ಕಳೆದೆರಡು ದಿನಗಳಿಂದ ಚರ್ಚೆಯಾಗುತ್ತಲೇ ಇದೆ. ಇತ್ತೀಚೆಗೆ ರಜನಿಕಾಂತ್ ಅವರ ಎರಡು ನಡೆಯೇ ಇಷ್ಟೆಕ್ಕೆಲ್ಲಾ ಕಾರಣ ಎನ್ನಲಾಗುತ್ತಿದೆ.

ರಜನಿ ರಾಜಕೀಯ ಬಗ್ಗೆ ಮತ್ತೆ ಚರ್ಚೆ
ರಜನಿಕಾಂತ್ ರಾಜಕೀಯ ಪ್ರವೇಶ ಒಂದೆರಡು ವರ್ಷದ ಪ್ರಯತ್ನ ಅಲ್ಲವೇ ಅಲ್ಲ. ಕಳೆದ ಎರಡ್ಮೂರು ದಶಕಗಳಿಂದಲೂ ರಜನಿಕಾಂತ್ ರಾಜಕೀಯಕ್ಕೆ ಧುಮುಕುವ ಬಗ್ಗೆ ಚರ್ಚೆಯಾಗುತ್ತಲೇ ಇತ್ತು. ಆದರೆ, ಕಳೆದ ವರ್ಷ ರಜನಿಕಾಂತ್ ರಾಜಕೀಯ ಎಂಟ್ರಿ ಕೊಡುವ ಬಗ್ಗೆ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿದ್ದರು. ಬಳಿಕ ರಾಜಕೀಯಕ್ಕೆ ಬರೋದಿಲ್ಲ ಎಂದು ಭರವಸೆಯನ್ನು ಹುಸಿಗೊಳಿಸಿದ್ದರು. ಈಗ ಮತ್ತೆ ಅವರ ರಾಜಕೀಯ ಎಂಟ್ರಿ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ರಜನಿಕಾಂತ್ ಗವರ್ನರ್ ಆಗಲಿದ್ದಾರೆ ಅಂತ ಚರ್ಚೆಯಾಗುತ್ತಿದೆ.

ರಜನಿಕಾಂತ್ ಗವರ್ನರ್?
ರಜನಿಕಾಂತ್ರನ್ನು ರಾಜಕೀಯಕ್ಕೆ ಕರೆದುಕೊಂಡು ಬರಲು ಬಿಜೆಪಿ ಶತ ಪ್ರಯತ್ನ ನಡೆಸಿತ್ತು. ಆದರೆ, ಬಿಜೆಪಿ ಮುಖಂಡ ಪ್ರಯತ್ನ ಯಶಸ್ವಿಯಾಗಲಿಲ್ಲ. ಈ ಕಾರಣಕ್ಕಾಗಿಯೇ ರಾಜ್ಯಪಾಲರ ಹುದ್ದೆಗೆ ಆಮಿಷ ಒಡ್ಡಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಈ ರೀತಿಯ ಚರ್ಚೆಗೆ ಎರಡು ಕಾರಣವಿದೆ. ರಜನಿ ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ಇನ್ನೊಂದು ಕಡೆ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರನ್ನು ಭೇಟಿ ಮಾಡಿದ್ದು ಕೂಡ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಈ ಬೆನ್ನಲ್ಲೇ ರಜನಿಕಾಂತ್ ಗವರ್ನರ್ ಆಗುತ್ತಾರೆ ಎಂಬ ಸುದ್ದಿನೂ ಹರಿದಾಡುತ್ತಿದೆ.

ಮೋದಿಗೆ ಇಷ್ಟ.. ಅಮಿತ್ ಶಾಗೆ ಕಷ್ಟ
ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರಲೇಬೇಕು ಅಂತ ಬಿಜೆಪಿ ನೂರೆಂಟು ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಅದಕ್ಕಾಗಿಯೇ ರಜನಿಕಾಂತ್ರನ್ನು ಮತ್ತೆ ಬಳಸಿಕೊಳ್ಳಲು ಯತ್ನಿಸಿದ್ದಾರೆ ಅನ್ನೋ ಮಾತೂ ಕೂಡ ಕೇಳಿಬರುತ್ತಿದೆ. ಇದರ ಮೊದಲ ಪ್ರಯತ್ನದಂತೆ ಚಿಕ್ಕ ರಾಜ್ಯಕ್ಕೆ ರಜನಿಕಾಂತ್ರನ್ನು ರಾಜ್ಯಪಾಲರನ್ನಾಗಿ ನೇಮಿಸಿದರೆ, ತಮಿಳರ ಮನಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿದ್ದಾರೆ ಅನ್ನೋ ಮಾತಿದೆ. ಈ ಮಧ್ಯೆ ರಜನಿಯನ್ನು ಗವರ್ನರ್ ಮಾಡೋದು ಪ್ರಧಾನಿ ನರೇಂದ್ರ ಮೋದಿ ಇಷ್ಟವಿದ್ದರೂ, ಅಮಿತ್ ಶಾ ವಿರುದ್ಧವಾಗಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಆದರೆ, ಚುನಾವಣೆ ಇನ್ನೂ ಸಮಯವಿರೋದ್ರಿಂದ ಏನು ಬೇಕಾದರೂ ಆಗಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರ. ಅಲ್ಲದೆ ಈ ಸುದ್ದಿ ನಿಜವೇ? ಇಲ್ಲ ಕೇವಲ ಗಾಳಿ ಸುದ್ದಿಯೇ ಅನ್ನೋದು ಕೂಡ ಕನ್ಫರ್ಮ್ ಆಗಬೇಕಿದೆ.

169ನೇ ಸಿನಿಮಾದಲ್ಲಿ ಬ್ಯುಸಿ
ಸೂಪರ್ಸ್ಟಾರ್ ರಜನಿಕಾಂತ್ ಸದ್ಯ 169ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಅನಿರುದ್ಧ್ ಸಂಗೀತವಿದೆ. ವಿಶೇಷ ಅಂದರೆ, ಬಹಳ ದಿನಗಳ ಬಳಿಕ ರಮ್ಯಾ ಕೃಷ್ಣ ಮತ್ತೆ ರಜನಿಗೆ ಜೊತೆಯಾಗಿದ್ದಾರೆ. ಅಲ್ಲದೆ ತಮನ್ನಾ ಇದೇ ಮೊದಲ ಬಾರಿಗೆ ರಜನಿಕಾಂತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗೇ ಶಿವಣ್ಣ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











