ICUನಿಂದ ಯಶಿಕಾ ಶಿಫ್ಟ್: ಗೆಳತಿ ಸಾವಿಗೆ ಮರುಗಿದ ನಟಿ, ಟೀಕಾಕಾರರ ವಿರುದ್ಧ ಆಕ್ರೋಶ
ಕಾರು ಅಪಘಾತ ಸಂಭವಿಸಿದ ವಾರದ ಬಳಿಕ ನಟಿ ಯಶಿಕಾ ಆನಂದ್ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಪಘಾತದಲ್ಲಿ ಆತ್ಮೀಯ ಸ್ನೇಹಿತೆಯನ್ನು ಕಳೆದುಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ನಟಿ, 'ನನಗೆ ತಪ್ಪು ಮಾಡಿದ ಪಾಪಪ್ರಜ್ಞೆ ಕಾಡುತ್ತಿದೆ' ಎಂದು ಭಾವನಾತ್ಮಕವಾಗಿ ಪೋಸ್ಟ್ ಹಾಕಿದ್ದಾರೆ.
ಜುಲೈ 24 ರಂದು ನಟಿ ಯಶಿಕಾ ಆನಂದ್ ಮತ್ತು ಸ್ನೇಹಿತರು ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿತ್ತು. ಚೆನ್ನೈನ ಮಹಾಬಲಿಪುರಂ ಬಳಿಯ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಶನಿವಾರ (ಜುಲೈ 24, 2021) ರಾತ್ರಿ ನಡೆದ ಭೀಕರ ಅಪಘಾತದಲ್ಲಿ ಯಶಿಕಾ ಸ್ನೇಹಿತೆ ಪಾವನಿ ಪ್ರಾಣ ಕಳೆದುಕೊಂಡರು. ಗಂಭೀರವಾಗಿ ಗಾಯಗೊಂಡಿದ್ದ ಯಶಿಕಾರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.
ಇದೀಗ, ಘಟನೆ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ನಟಿ ''ನಾನು ಪ್ರಸ್ತುತ ಯಾವ ಪರಿಸ್ಥಿತಿಯಲ್ಲಿದ್ದೇನೆ ಎಂದು ಹೇಳಲು ಸಾಧ್ಯವಿಲ್ಲ. ನಾನು ಬದುಕಿರುವವರೆಗೂ ತಪ್ಪಿತಸ್ಥೆ ಎಂಬ ಭಾವನೆಯೊಂದಿಗೆ ಇರಬೇಕಾಗಿದೆ. ಈ ಅಪಘಾತದಲ್ಲಿ ನನ್ನ ಪ್ರಾಣ ಉಳಿಸಿದ್ದಕ್ಕಾಗಿ ಆ ದೇವರಿಗೆ ಧನ್ಯವಾದ ಹೇಳಬೇಕೆ ಅಥವಾ ನನ್ನ ಸ್ನೇಹಿತೆ ಪ್ರಾಣ ಕಳೆದುಕೊಂಡಿದ್ದಕ್ಕೆ ದೂಷಿಸಬೇಕೋ ತಿಳಿಯುತ್ತಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
''ಪಾವನಿಯನ್ನ ಪ್ರತಿ ಕ್ಷಣವೂ ನಾನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ನಿನ್ನನ್ನು ಕ್ಷಮೆ ಕೇಳುತ್ತಿದ್ದೇನೆ. ನನಗೆ ಗೊತ್ತು ನೀನು ಎಂದಿಗೂ ನನ್ನನ್ನು ಕ್ಷಮಿಸಲ್ಲ. ನಿನ್ನ ಕುಟುಂಬವನ್ನು ಇಂತಹ ಭಯಾನಕ ಪರಿಸ್ಥಿತಿಗೆ ದೂಕಿದ್ದೇನೆ. ಒಂದಲ್ಲ ಒಂದು ದಿನ ನಿನ್ನ ಕುಟುಂಬದವರು ನನ್ನ ಕ್ಷಮಿಸುತ್ತಾರೆ ಎಂದು ನಾನು ಭಾವಿಸಿದ್ದೇನೆ. ನನ್ನ ಪ್ರತಿ ಕ್ಷಣದಲ್ಲೂ ನಿನ್ನ ಜೊತೆಗಿನ ನೆನಪುಗಳಿವೆ. ನಿನ್ನ ಆತ್ಮಕೆ ಶಾಂತಿ ಸಿಗಲಿ ಎಂದು ನಾನು ಆಶಿಸುತ್ತೇನೆ'' ಎಂದು ಹೇಳಿದ್ದಾರೆ. ಮುಂದೆ ಓದಿ...

ಕಾನೂನು ಎಲ್ಲರಿಗೂ ಒಂದೇ
ಯಶಿಕಾ ಹಾಗೂ ಸ್ನೇಹಿತರು ಮದ್ಯಪಾನ ಸೇವಿಸಿ ಕಾರಿನಲ್ಲಿ ಸಾಗಿದ್ದರು ಎಂಬ ಆರೋಪ ಕೇಳಿಬಂತು. ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ನಟಿ, ಒಂದು ವೇಳೆ ನಾವು ಮದ್ಯಪಾನ ಮಾಡಿದ್ದರೆ ಇಷ್ಟೊತ್ತಿಗೆ ಜೈಲಿನಲ್ಲಿ ಕಂಬಿ ಎಣಿಸಬೇಕಾಗಿತ್ತು ಎಂದು ಆರೋಪಗಳನ್ನು ನಿರಾಕರಿಸಿದ್ದಾರೆ. ''ಕಾನೂನು ಎಲ್ಲರಿಗೂ ಒಂದೇ. ನಾನು ಮದ್ಯದ ಅಮಲಿನಲ್ಲಿರಲಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಒಂದು ವೇಳೆ ನಾನು ಮದ್ಯಪಾನ ಮಾಡಿದ್ದರೆ ಇಷ್ಟೊತ್ತಿಗೆ ಆಸ್ಪತ್ರೆಯಲ್ಲಿರುತ್ತಿರಲಿಲ್ಲ, ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದೆ. ಈ ಘಟನೆ ಬಗ್ಗೆ ಬಹಳಷ್ಟು ಜನರು ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಇದು ಬಹಳ ಸೂಕ್ಷ್ಮ ವಿಚಾರ. ವದಂತಿ ಹಬ್ಬಿಸುವುದು ಬಿಟ್ಟು ಸ್ನೇಹಿತೆಯ ಸಾವಿನ ಬಗ್ಗೆ ಅನುಕಂಪವಿರಲಿ'' ಎಂದಿದ್ದಾರೆ.

ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಬಿಡಿ
ಈ ಅಪಘಾತದ ಬಗ್ಗೆ ತೀವ್ರವಾಗಿ ಟೀಕಿಸಿದ ಮಾಧ್ಯಮಗಳ ವಿರುದ್ಧ ಯಶಿಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ನೀವೆಲ್ಲರೂ ಆಕೆಯ (ಪಾವನಿ) ಸಾವಿನ ಬಗ್ಗೆ ಸ್ವಲ್ಪ ಮಾನವೀಯತೆ ಮತ್ತು ದುಃಖ ಹೊಂದಿದ್ದೀರಾ ಎಂದು ಭಾವಿಸುತ್ತೇನೆ. ವೈದ್ಯರ ವರದಿ ಸಹ ಈಗಾಗಲೇ ಸ್ಪಷ್ಟಪಡಿಸಿವೆ. ಈ ನಕಲಿ ಮಾಧ್ಯಮ ಟಿಆರ್ಪಿ ಮತ್ತು ಚಂದಾದಾರರ ಸಲುವಾಗಿ ಸುಳ್ಳು ಸುದ್ದಿಗಳನ್ನು ಹರಡಿಸುತ್ತಿವೆ. 2 ವರ್ಷಗಳ ಹಿಂದೆಯೂ ನನ್ನ ಹೆಸರನ್ನು ಹಾಳು ಮಾಡಿದ್ದಕ್ಕಾಗಿ ನಾನು ಈಗಾಗಲೇ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ. ಆದರೆ ಈ ಜನರು ವದಂತಿಗಳಿಗಾಗಿ ಯಾವುದೇ ಮಟ್ಟಕ್ಕೂ ಹೋಗಬಹುದು'' ಎಂದು ಟೀಕಿಸಿದ್ದಾರೆ.

ಐಸಿಯುನಿಂದ ಯಶಿಕಾ ಶಿಫ್ಟ್
ಈ ಹಿಂದೆ 2019 ರಲ್ಲಿ, ಯಶಿಕಾ ಮತ್ತು ಸ್ನೇಹಿತ ಬಾಲಾಜಿ ಮುರುಗದಾಸ್ ಕುಡಿದ ಅಮಲಿನಲ್ಲಿ ತನ್ನ ಕಾರನ್ನು ಚಲಾಯಿಸಿ ಅಪಘಾತ ಮಾಡಿದ್ದರು. ಈ ಘಟನೆಯಲ್ಲಿ ವ್ಯಕ್ತಿಯೊಬ್ಬ ಗಾಯಗೊಂಡಿದ್ದ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಇತ್ತೀಚಿಗೆ ನಡೆದ ಅಪಘಾತದಲ್ಲಿ ನಟಿ ಯಶಿಕಾ ತೀವ್ರವಾಗಿ ಗಾಯಗೊಂಡಿದ್ದರು. ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ, ಐಸಿಯುನಿಂದ ಸಾಮಾನ್ಯ ವಾರ್ಡ್ಗೆ ಯಶಿಕಾರನ್ನು ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಅಪಘಾತದ ಪರಿಣಾಮ ಕಾಲಿಗೆ ತೀವ್ರ ಪೆಟ್ಟು ಬಿದ್ದಿದೆ ಎಂದು ವರದಿಯಾಗಿದೆ.

ಬಿಗ್ ಬಾಸ್ನಲ್ಲಿ ಯಶಿಕಾ ಭಾಗಿ
2016 ರಲ್ಲಿ ಬಿಡುಗಡೆಯಾದ 'ಕವಲೈ ವೆಂಡಮ್' ಚಿತ್ರದ ಮೂಲಕ ಯಶಿಕಾ ಆನಂದ್ ನಟನೆ ಆರಂಭಿಸಿದರು. ಕಾರ್ತಿಕ್ ನರೇನ್ ನಿರ್ದೇಶನದಲ್ಲಿ ಬಂದ 'ಧುರುವಾಂಗಳ್ ಪಾಥಿನಾರ್' ಚಿತ್ರ ಯಶಿಕಾ ಅವರಿಗೆ ಬ್ರೇಕ್ ಕೊಟ್ಟಿತ್ತು. ಈ ನಡುವೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಅಪಘಾತದಲ್ಲಿ ಗೆಳತಿಯನ್ನು ಕಳೆದುಕೊಂಡ ನೋವಿನಲ್ಲಿರುವ ನಟಿ ಅಗಸ್ಟ್ 4 ರಂದು ತನ್ನ ಬರ್ತಡೇ ಆಚರಿಸದಂತೆ ವಿನಂತಿಸಿಕೊಂಡಿದ್ದಾರೆ.


Click it and Unblock the Notifications











