ಚಂದ್ರಬಾಬುಗಿಂತ ಜೂ.ಎನ್ಟಿಆರ್ ಬೆಸ್ಟ್? ಅಮಿತ್ ಶಾ ಭೇಟಿ ರಹಸ್ಯ ಬಿಚ್ಚಿಟ್ಟ ಕೇಂದ್ರ ಸಚಿವ!
ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ಬಿಡುಗಡೆಯಾದಲ್ಲಿಂದ ಜೂ.ಎನ್ಟಿಆರ್ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಅದರಲ್ಲೂ ಓಟಿಟಿಯಲ್ಲಿ ಸಿನಿಮಾ ರಿಲೀಸ್ ಆದಲ್ಲಿಂದ ವಿದೇಶಿಗರಿಗೂ ಜೂ.ಎನ್ಟಿಆರ್ ತುಂಬಾನೇ ಇಷ್ಟ ಆಗಿದ್ದು, ಮನಸಾರೆ ಹೊಗಳುತ್ತಿದ್ದಾರೆ. ಈ ಮಧ್ಯೆ ಆಸ್ಕರ್ ಪ್ರಶಸ್ತಿಗೆ ಜೂ.ಎನ್ಟಿಆರ್ ನಾಮಿನೇಟ್ ಆಗಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.
ಹೀಗೆ ಚರ್ಚೆಯಲ್ಲಿರುವಾಗಲೇ ದಿಢೀರನೇ ಜೂ.ಎನ್ಟಿಆರ್ ಏಕಾಏಕಿ ಬಿಜೆಪಿ ಮುಖಂಡ ಅಮಿತ್ ಶಾರನ್ನು ಭೇಟಿಯಾಗಿದ್ದಾರೆ. ಇದು ಟಾಲಿವುಡ್ನಲ್ಲಷ್ಟೇ ಅಲ್ಲ. ತೆಲುಗು ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆಗೆ ವ್ಯಕ್ತವಾಗಿದೆ. ಸುಳಿವೇ ನೀಡದೇ ಯಂಗ್ ಟೈಗರ್ ಅಮಿತ್ ಶಾರನ್ನು ಭೇಟಿ ಮಾಡಿದ್ದು ಯಾಕೆ? ಎಂಬ ಚರ್ಚೆ ಆರಂಭ ಆಗಿದೆ.
ಒಂದ್ಕಡೆ ಜೂ.ಎನ್ಟಿಆರ್ ಹಾಗೂ ಅಮಿತ್ ಶಾ ಭೇಟಿ ಬಗ್ಗೆ ಚರ್ಚೆ ಆರಂಭ ಆಗಿದೆ. ಅದೇ ಇನ್ನೊಂದ್ಕಡೆ ಬಿಜೆಪಿ ಮುಖಂಡ ಈ ದಿಗ್ಗಜರ ಭೇಟಿಯ ಹಿನ್ನೆಲೆಯನ್ನು ರಿವೀಲ್ ಮಾಡಿದ್ದಾರೆ. ಇವೆರಡೂ ಒಂದಕ್ಕೊಂದು ಹೋಲಿಕೆಯಾಗುತ್ತಲೇ ಇಲ್ಲ. ಅಸಲಿಗೆ ಜೂ.ಎನ್ಟಿಆರ್ ಹಾಗೂ ಅಮಿತ್ ಶಾ ಭೇಟಿ ಬಗ್ಗೆ ನಡೆಯುತ್ತಿರೋ ಚರ್ಚೆ ಏನು? ತಿಳಿಯುವುದಕ್ಕೆ ಮುಂದೆ ಓದಿ.

ಅಮಿತ್ ಶಾ ಭೇಟಿಯ ಗುಟ್ಟೇನು?
ಜೂನಿಯರ್ ಎನ್ಟಿಆರ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ವಿಶ್ವದ ಮೂಲೆ ಮೂಲೆಯಲ್ಲೂ RRR ಸಿನಿಮಾದಲ್ಲಿ ಎನ್ಟಿಆರ್ ಪಾತ್ರದ ಬಗ್ಗೆನೇ ಮಾತಾಡುತ್ತಿದ್ದಾರೆ. ಆದರೆ, ಯಂಗ್ ಟೈಗರ್ ಸ್ಟಾರ್ ಪಟ್ಟಕ್ಕೆ ಏರುತ್ತಿದ್ದಂತೆ ರಾಜಕೀಯದಿಂದ ದೂರ ಉಳಿದಿದ್ದರು. ಈ ಹಿಂದೆ ಟಿಡಿಪಿ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದರೂ, ಬಳಿಕ ರಾಜಕೀಯ ಮುಖಂಡರೊಂದಿಗೆ ಗುರುತಿಸಿಕೊಂಡಿರಲಿಲ್ಲ. ಇನ್ನು ಪ್ಯಾನ್ ಇಂಡಿಯಾ ರೇಂಜ್ನಲ್ಲಿ ಸಿನಿಮಾ ಮಾಡುತ್ತಿರೋದ್ರಿಂದ ಎನ್ಟಿಆರ್ ರಾಜಕೀಯದಿಂದ ದೂರನೇ ಉಳಿದಿದ್ದಾರೆಂದು ಎಲ್ಲರೂ ಭಾವಿಸಿದ್ದರು. ಆದರೆ, ದಿಢೀರನೇ ಕೇಂದ್ರ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ್ದು ಅನೇಕ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಸದ್ಯ ಬಿಜೆಪಿ ತಂತ್ರದ ಬಗ್ಗೆನೇ ಚರ್ಚೆಯಾಗುತ್ತಿದೆ.

ನಾಯ್ಡುಗೆ ಟಕ್ಕರ್ ಕೊಡುತ್ತಾ ಬಿಜೆಪಿ?
ಅಮಿತ್ ಶಾ ಹಾಗೂ ಜೂನಿಯರ್ ಎನ್ಟಿಆರ್ ಭೇಟಿಯ ಬಗ್ಗೆ ಆಂಧ್ರದಲ್ಲಿ ಹೊಸ ಲೆಕ್ಕಾಚಾರ ಹಾಕಲಾಗುತ್ತಿದೆ. ಅಮಿತ್ ಶಾಗೆ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಮೇಲೆ ಆಸಕ್ತಿ ಇಲ್ಲ. ಹೀಗಾಗಿ ಆಂಧ್ರ ಬಿಜೆಪಿಯನ್ನು ಗೆಲ್ಲಿಸುವುದಕ್ಕೆ ರಣತಂತ್ರ ಹೂಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಚಂದ್ರಬಾಬು ನಾಯ್ಡುಗೆ ಕೋಕ್ ಕೊಟ್ಟು ಪಕ್ಷದ ಫೇಸ್ ಮಾಡುವುದಕ್ಕೆ ಜೂ.ಎನ್ಟಿಆರ್ಗೆ ಮನ್ನಣೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಕೂಡ ಅಮಿತ್ ಶಾ ಉದ್ಯಮಿ ರಾಮೋಜಿ ರಾವ್ ಅವರನ್ನು ಭೇಟಿ ಮಾಡಿದ್ದರು. ಆಗ ಚಂದ್ರಬಾಬು ನಾಯ್ಡು ಕೂಡ ಸಭೆಗೆ ಬರುತ್ತಾರೆಂಬ ನಿರೀಕ್ಷೆ ಇತ್ತು. ಆದರೆ, ಅಂದು ಗೈರು ಹಾಜರಾಗಿದ್ದಕ್ಕೆ ಇಂದು ಟ್ವಿಸ್ಟ್ ಸಿಕ್ಕಿದೆ ಎನ್ನಲಾಗುತ್ತಿದೆ.

ಬಿಜೆಪಿ ಜೊತೆ ಜೈ ಜೋಡಿಸುತ್ತಾರಾ?
ಬೆಳವಣಿಗಳು ಏನೇ ನಡೆದಿದ್ದರೂ, ಜೂ.ಎನ್ಟಿಆರ್ ತಾತ ಕಟ್ಟಿದ ಟಿಡಿಪಿ ಪಕ್ಷ ತೊರೆದು ಬಿಜೆಪಿ ಸೇರುತ್ತಾರಾ? ಅನ್ನೋದೇ ಇಲ್ಲಿ ಯಕ್ಷ ಪ್ರಶ್ನೆ. ಅಲ್ಲದೆ ಜೂ.ಎನ್ಟಿಆರ್ ಈಗಷ್ಟೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ವೃತ್ತಿ ಬದುಕಿನ ಉತ್ತುಂಗದಲ್ಲಿದ್ದಾರೆ. ಹೀಗಾಗಿ ಸಿನಿಮಾ ಬಿಟ್ಟು ರಾಜಕೀಯಕ್ಕೆ ಬರೋದು ಅನುಮಾನ. ಅಲ್ಲದೆ ಆಂಧ್ರ ಬಿಜೆಪಿ ಅಲೆಯಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ತಾತನ ಪಕ್ಷದ ವಿರುದ್ಧವೇ ಫೈಟ್ ಮಾಡುವುದರ ಪರಿಣಾಮ ಅರಿವಿದೆ. ಹೀಗಾಗಿ ಜೂ.ಎನ್ಟಿಆರ್ ಬಿಜೆಪಿ ಸೇರಲ್ಲ ಅನ್ನೋದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಕೇಂದ್ರ ಸಚಿವ ಬಿಚ್ಚಿಟ್ಟ ಗುಟ್ಟೇನು?
ಅಮಿತಾ ಶಾ ಹಾಗೂ ಜೂ.ಎನ್ಟಿಆರ್ ಭೇಟಿ ಬಗ್ಗೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಸ್ಪಪ್ಟನೆ ನೀಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಜೂ.ಎನ್ಟಿಆರ್ ಜೊತೆ ಡಿನ್ನರ್ ಮಾಡಬೇಕೆಂದು ಅಮಿತ್ ಶಾ ಮುಂದಾಗಿದ್ದರು. ಈ ವೇಳೆ ಸಿನಿಮಾಕ್ಕೆ ಸಂಬಂಧಿಸಿದ ಚರ್ಚೆ ಮಾತ್ರ ನಡೆದಿದೆ. ಈ ವೇಳೆ ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ಚರ್ಚೆ ಮಾಡಿಲ್ಲ. ಅಲ್ಲದೆ ಸೀನಿಯರ್ ಎನ್ಟಿಆರ್ ಬಗ್ಗೆ ಅಮಿತ್ ಶಾ ಆಸಕ್ತಿಯಿಂದ ಮಾತಾಡಿದ್ದಾರೆ." ಎಂದು ಕಿಶನ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಆದರೆ ಅರ್ಧ ಗಂಟೆ ಇವಿಷ್ಟೇ ಚರ್ಚೆ ನಡೀತಾ ಅನ್ನೋ ಅನುಮಾನ ಖಂಡಿತಾ ಎಲ್ಲರನ್ನೂ ಕಾಡದೆ ಇರೋದಿಲ್ಲ.


Click it and Unblock the Notifications











