'ಭೀಮ್ಲಾ ನಾಯಕ್' ವಿರುದ್ಧ ಗುಂಟೂರು ಪೊಲೀಸ್ ಠಾಣೆಯಲ್ಲಿ ದೂರು: ಕಾರಣವೇನು?
ಪವರ್ಸ್ಟಾರ್ ಪವನ್ ಕಲ್ಯಾಣ್ ಹಾಗೂ ರಾಣದಗ್ಗುಬಾಟಿ ಅಭಿನಯದ 'ಭೀಮ್ಲಾ ನಾಯಕ್' ತೆರೆಕಂಡು ಬಾಕ್ಸಾಫೀಸ್ನಲ್ಲಿ ಜೋರಾಗೇ ಸದ್ದು ಮಾಡುತ್ತಿದೆ. ಅಲ್ಲಲ್ಲಿ ಮಿಶ್ರ ಪ್ರತಿಕ್ರಿಯೆ, ಅಪಸ್ವರಗಳು ಕೇಳಿ ಬರುತ್ತಿದ್ದರೂ, ಸಿನಿಮಾದ ಗಳಿಕೆಯಲ್ಲಿ ಸಿನಿಮಾ ಸೋತಿಲ್ಲ. ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಭೀಮ್ಲಾ ಸದ್ದು ಇನ್ನೂ ಕೇಳಿಸುತ್ತಲೇ ಇದೆ. ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವಾಗಲೇ ವಿವಾದಕ್ಕೆ ಸಿಕ್ಕಿಕೊಂಡಿದೆ. ಇದು ಉದ್ದೇಶ ಪೂರಿತವೋ? ಅಥವಾ ಯಾರದ್ದೋ ಕುಮ್ಮಕ್ಕಿನಿಂದ ನಡೆಯುತ್ತಿದೆಯೋ? ಅನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಹೌದು.. ಪವನ್ ಕಲ್ಯಾಣ್ ಸಿನಿಮಾ 'ಭೀಮ್ಲಾ ನಾಯಕ್' ವಿವಾದಕ್ಕೆ ಸಿಲುಕಿದೆ. ತಮ್ಮ ಸಮುದಾಯಕ್ಕೆ ಈ ಸಿನಿಮಾ ಒಂದು ದೃಶ್ಯ ಕಾರಣವಾಗಿದೆ. ನಮಗೆ ಇದರಿಂದ ತುಂಬಾನೇ ನೋವಾಗಿದೆ ಎಂದು ಗುಂಟೂರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ. ಅಷ್ಟಕ್ಕೂ ಈ ದೂರು ದಾಖಲಿದ್ದು, ಪವನ್ ಕಲ್ಯಾಣ್ ಮೇಲಿನ ದ್ವೇಷಕ್ಕಾ? ಇಲ್ಲಾ ನಿಜಕ್ಕೂ ಈ ದೂರಿನ ಹಿಂದೆ ಭಾವನೆಗಳ ಸತ್ಯ ಅಡಗಿದೆಯಾ? ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

'ಭೀಮ್ಲಾ ನಾಯಕ್' ವಿರುದ್ಧ ಕೇಸ್
ಕಳೆದ ತಿಂಗಳು ಫೆಬ್ರವರಿ 25ಕ್ಕೆ ತೆಲುಗು ಪವರ್ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ 'ಭೀಮ್ಲಾ ನಾಯಕ್' ತೆರೆಕಂಡು ಅದ್ಭುತ ಪ್ರದರ್ಶನ ಕಾಣುತ್ತಿದೆ. ಈ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗಲೇ ಕುಮ್ಮರಿ ಹಾಗೂ ಶಾಲಿವಾಹನ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ. ಈ ಸಮುದಾಯ ನಮ್ಮ ಧಾರ್ಮಿಕ ಭಾವನೆಗಳಿಗೆ ಈ ಸಿನಿಮಾ ಧಕ್ಕೆಯನ್ನುಂಟು ಮಾಡಿದೆ ಎಂದು ಗುಂಟೂರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈ ಮೂಲಕ ಪವನ್ ಸಿನಿಮಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ವಿವಾದಕ್ಕೀಡಾದ ಆ ದೃಶ್ಯ ಯಾವುದು?
ಇತ್ತೀಚೆಗೆ ಸಿನಿಮಾ ಮಂದಿ ನಿಜಕ್ಕೂ ಗೊಂದಲಕ್ಕೆ ಒಳಗಾಗಿದ್ದಾರೆ. ಯಾವ ದೃಶ್ಯ ಯಾವ ಸಮುದಾಯಕ್ಕೆ ನೋವುಂಟು ಮಾಡುತ್ತೋ ಎನ್ನುವ ಎಚ್ಚರಿಕೆಯಲ್ಲಿ ಸಿನಿಮಾದ ಸೀನ್, ಡೈಲಾಗ್ಗಳನ್ನು ಬರೆಯಬೇಕಿದೆ. 'ಭೀಮ್ಲಾ ನಾಯಕ್' ವಿರುದ್ಧ ದೂರು ದಾಖಲಾಗುವುದಕ್ಕೂ ಇದೇ ಕಾರಣ. ಆಂಧ್ರದಲ್ಲಿ ಕುಮ್ಮರಿ ಹಾಗೂ ಶಾಲಿವಾಹನ ಎಂಬುದು ಮಡಿಕೆಗಳನ್ನು ಮಾಡಿ, ಮಾರುವಂತಹ ಸಮುದಾಯ. ಈ ಸಿನಿಮಾ ರಾಣಾ ದಗ್ಗುಬಾಟಿ ಹಾಗೂ ಭೀಮ್ಲಾ ವಿರುದ್ಧ ಹೊಡೆದಾಟದಲ್ಲಿ ರಾಣಾ ಮಡಿಕೆಗಳನ್ನು ಇಟ್ಟಿರುವ ಗಾಡಿಯೊಂದಕ್ಕೆ ಒದೆಯುವ ದೃಶ್ಯವಿದೆ. ಈ ದೃಶ್ಯದ ವಿರುದ್ಧ ಈಗ ವಿವಾದ ಸುತ್ತಿಕೊಂಡಿದೆ.

ಸಿನಿಮಾ ವಿರುದ್ಧದ ದೂರಿನಲ್ಲಿ ಏನಿದೆ?
ಕುಮ್ಮರಿ ಹಾಗೂ ಶಾಲಿವಾಹನ ಕಾರ್ಪೊರೇಷನ್ ಚೇರ್ಮನ್ ಪುರುಷೋತ್ತಮ್ ಎಂಬುವವರು ಗುಂಟೂರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿದ್ದಾರೆ. ಇವರ ಪ್ರಕಾರ, "ಕುಂಬಾರಿಕೆಯೇ ನಮಗೆ ಬದುಕು ನೀಡಿದ ವೃತ್ತಿ. ಪ್ರತಿ ದಿನ ನಾವು ಪೂಜೆ ಮಾಡುತ್ತೇವೆ. ಕುಂಬಾರಿಕೆ ಎಂಬುದು ನಮಗೆ ಹೆಮ್ಮೆಯ ವಿಷಯ. ರಾಣಾ ಈ ಕುಡಿಕೆಯ ಗಾಡಿಯನ್ನು ಕಾಲಿನಿಂದ ಒದ್ದಿರುವುದು ನಮಗೆ ಕೋಪ ತರಿಸುವಂತೆ ಮಾಡಿದೆ. ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ದೃಶ್ಯಗಳನ್ನು ಕೂಡಲೇ ತೆಗೆಯುವಂತೆ ಡಿಮ್ಯಾಂಡ್ ಮಾಡುತ್ತಿದ್ದೇವೆ." ಎಂದು ಪುರುಷೋತ್ತಮ್ ಹೇಳಿದ್ದಾರೆ.

ಪವನ್ ಅಲ್ಲ ರಾಣಾ ವಿರುದ್ಧ ಕೋಪ
ಗುಂಟೂರಿನಲ್ಲಿ ದಾಖಲಾದ ದೂರಿನಲ್ಲಿರುವ ಟ್ವಿಸ್ಟ್ ಏನೆಂದರೆ, ಈ ಸಮುದಾಯ ಪವನ್ ಕಲ್ಯಾಣ್ ವಿರುದ್ಧ ಅಲ್ಲ. ರಾಣಾ ವಿರುದ್ಧ ಕೋಪಗೊಂಡಿದೆ. ಸಿನಿಮಾ ಬಿಡುಗಡೆಯಾದಲ್ಲಿಂದ ಆಂಧ್ರದ ಜಗನ್ ಸರ್ಕಾರ 'ಭೀಮ್ಲಾ ನಾಯಕ್' ಸಿನಿಮಾ ಸೋಲಿಸಲು ಪ್ರತಿದಿನ ಶತಪ್ರಯತ್ನ ಮಾಡುತ್ತಿದೆ. ಹೀಗಂತಾ ಪವನ್ ಕಲ್ಯಾಣ್ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ವಿಚಿತ್ರ ಅಂದರೆ, ಈ ಬಾರಿ ಪವನ್ ಕಲ್ಯಾಣ್ ಅಲ್ಲ ಬದಲಿಗೆ ರಾಣಾ ವಿರುದ್ಧ ಆರೋಪ ಮಾಡಿದ್ದು, ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.


Click it and Unblock the Notifications











