ಟ್ರೋಲ್ ಆದ್ಮೇಲೆ ಶೂಟಿಂಗ್ ನಿಲ್ಲಿಸಿದ ದಿಲ್ ರಾಜು: 'ವಾರಸುಡು'ಗೆ ಬ್ರೇಕ್!
ಆಗಸ್ಟ್ 1ರಿಂದ ಟಾಲಿವುಡ್ ಕಂಪ್ಲೀಟ್ ಸೈಲೆಂಟ್ ಆಗಿದೆ. ತೆಲುಗು ಸಿನಿಮಾ ನಿರ್ಮಾಣ ಮಾಡುತ್ತಿರುವ ನಿರ್ಮಾಪಕರೆಲ್ಲರೂ ಒಕ್ಕೊರಲಿನಿಂದ ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದಾರೆ. ಈಗಾಗಲೇ ಶುರು ಮಾಡಿರುವ ಸಿನಿಮಾ ಶೂಟಿಂಗ್ ಸ್ಥಗಿತಗೊಳಿಸಿರೋದ್ರ ಹಿಂದೆ ಹಲವು ಕಾರಣಗಳಿವೆ. ಆ ಬಗ್ಗೆನೇ ಚರ್ಚೆಯಾಗುತ್ತಿದೆ.
ಕೊರೊನಾ ಬಳಿಕ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಇದರಿಂದ ನಾವು ಹಾಕಿದ ಬಂಡವಾಳ ನಮಗೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ತೆಲುಗು ಚಿತ್ರರಂಗವನ್ನು ಮತ್ತೆ ಮೇಲೆತ್ತಬೇಕಿದೆ. ಹೀಗಾಗಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಸಿಗುವವರೆಗೂ ಚಿತ್ರೀಕರಣವನ್ನು ನಡೆಸದೆ ಇರಲು ತೀರ್ಮಾನಿಸಲಾಗಿದೆ. ಈ ಕಾರಣಕ್ಕೆ ತೆಲುಗು ಸಿನಿಮಾ ಶೂಟಿಂಗ್ ನಿಂತಿದೆ. ಆದರೆ, ದಿಲ್ ರಾಜು ಮಾತ್ರ ತಮ್ಮ ಸಿನಿಮಾದ ಶೂಟಿಂಗ್ ಮಾಡುತ್ತಲೇ ಇದ್ದರು.
ನಿರ್ಮಾಪಕರೆಲ್ಲಾ ಒಟ್ಟಿಗೆ ಸೇರಿ ಮೀಟಿಂಗ್ ಮಾಡಿದ್ದರೂ ದಿಲ್ ರಾಜು 'ವಾರಸುಡು' ಚಿತ್ರದ ಚಿತ್ರೀಕರಣ ಮುಂದುವರೆಸಿದ್ದರು. ಈ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ದೊಡ್ಡ ಚರ್ಚೆ ಆಗಿತ್ತು. ಅಲ್ಲದೆ ದಿಲ್ ರಾಜ್ರನ್ನು ಟ್ರೋಲ್ ಮಾಡಿದ್ದರು. ಟಾಲಿವುಡ್ ನಿರ್ಮಾಪಕರೇ ಒತ್ತಡ ತಂದಿದ್ದರು. ಕೊನೆಗೂ ಈಗ ಆ ಒತ್ತಡಕ್ಕೆ ನಿರ್ಮಾಪಕರು ಮಣಿದಿದ್ದಾರೆ.

ತೆಲುಗು ನಿರ್ಮಾಪಕ ದಿಲ್ ರಾಜು ಟ್ರೋಲ್
ತೆಲುಗಿನ ಎಲ್ಲಾ ನಿರ್ಮಾಪಕರು ಸಿನಿಮಾ ಶೂಟಿಂಗ್ ಬ್ರೇಕ್ ಹಾಕಿರುವಾಗ, ದಿಲ್ ರಾಜು ಮಾತ್ರ ಶೂಟಿಂಗ್ ಮಾಡಿದರೆ ಯಾರು ತಾನೇ ಸುಮ್ಮನಿರುತ್ತಾರೆ? ಅದರಲ್ಲೂ ದಿಲ್ ರಾಜು ಪ್ರಡ್ಯೂಸರ್ ಗಿಲ್ಡ್ನ ಆಕ್ಟಿವ್ ಮೆಂಬರ್ ಕೂಡ ಹೌದು. ಹೀಗಿರುವಾಗ ದಿಲ್ ರಾಜು ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಾಣ ಆಗುತ್ತಿರುವ ತಮ್ಮ ಸಿನಿಮಾದ 'ವಾರಸುಡು' ಚಿತ್ರೀಕರಣ ಮುಂದುವರೆಸಿದ್ದರು. ಅದಕ್ಕೆ ಕೆಲವು ದಿನಗಳಿಂದ ಟ್ರೋಲ್ ಆಗುತ್ತಿದ್ದರು. ಜೊತೆಗೆ ನಿರ್ಮಾಪಕರು ಕೂಡ ದಿಲ್ ರಾಜು ಮೇಲೆ ಒತ್ತಡ ತಂದಿದ್ದರು. ಕೊನೆಗೂ ಆ ಒತ್ತಡಕ್ಕೆ ಮಣಿದಿದ್ದಾರೆ ಎನ್ನಲಾಗಿದೆ.

'ವಾರಸುಡು' ನಿಲ್ಲಿಸಿದ ದಿಲ್ ರಾಜು
ದಿಲ್ ವಿರುದ್ಧ ಟಾಲಿವುಡ್ನ ಕೆಲವು ನಿರ್ಮಾಪಕರು ತಿರುಗಿಬಿದ್ದಿದ್ದರು. ದಿಲ್ ರಾಜು ನಡೆಯನ್ನು ನಿರ್ಮಾಪಕರೇ ನೇರ ಪ್ರಶ್ನೆ ಮಾಡಿದ್ದರು. ಹೀಗಾಗಿ ತೆಲುಗು ನಿರ್ಮಾಪಕ 'ವಾರಸುಡು' ಸಿನಿಮಾದ ಶೂಟಿಂಗ್ ಅನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ. ದಳಪತಿ ವಿಜಯ್ ತೆಲುಗು ಹಾಗೂ ತಮಿಳಿನಲ್ಲಿ ನಟಿಸುತ್ತಿರುವ ಸಿನಿಮಾದ ಶೂಟಿಂಗ್ ವೈಜಾಗ್ನಲ್ಲಿ ನಡೆಯುತ್ತಿತು. ಆ ಶೆಡ್ಯೂಲ್ ಮುಗಿದಿದ್ದು, ಶೂಟಿಂಗ್ಗೆ ಬ್ರೇಕ್ ಹಾಕಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

'ವಾರಸುಡು' ಶೂಟಿಂಗ್ ಚೆನ್ನೈಗೆ ಶಿಫ್ಟ್
ತೆಲುಗು ನಿರ್ಮಾಪಕರು ತಿರುಗಿಬಿದ್ದಿದ್ದರಿಂದ 'ವಾರಸುಡು' ಶೂಟಿಂಗ್ ಅನ್ನು ಚೆನ್ನೈಗೆ ಶಿಫ್ಟ್ ಮಾಡಲಾಗಿದೆ. ಇಲ್ಲಿ ಸಿನಿಮಾದಲ್ಲಿ ಉಳಿಸಿದ ಎಪಿಸೋಡ್ಗಳನ್ನು ಚಿತ್ರೀಕರಣ ಮಾಡಲಿದ್ದಾರೆ. ಅಲ್ಲದೆ ತೆಲುಗು ನಿರ್ಮಾಪಕರು ಪ್ರತಿದಿನ ಚಿತ್ರರಂಗದ ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿದ್ದು, ಆದಷ್ಟು ಬೇಗ ಜನರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರಲು ಏನು ಪರಿಹಾರ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆನೂ ಚರ್ಚೆ ಮಾಡುತ್ತಿದ್ದಾರೆ. ಆದರೆ, ಈ ಬಗ್ಗೆ ಕ್ಲಾರಿಟಿ ಯಾವಾಗ ಸಿಗುತ್ತೆ ಅನ್ನೋದು ಮಾತ್ರ ಇನ್ನೂ ಗೊತ್ತಾಗಿಲ್ಲ.

'ವಾರಸುಡು' ಶೂಟಿಂಗ್ ನಡೆದಿದ್ದು ಏಕೆ?
ದಿಲ್ ರಾಜು ಶೂಟಿಂಗ್ ನಿಲ್ಲಿಸದೆ ಇದ್ದಿದ್ದಕ್ಕೆ ಆರಂಭದಿಂದ ಅಪಸ್ವರ ಎದ್ದಿತ್ತು. ಆದರೆ, ದಿಲ್ ರಾಜು ಎರಡು ಭಾಷೆಯಲ್ಲಿ 'ವಾರಸುಡು' ಸಿನಿಮಾ ನಿರ್ದೇಶಿಸುತ್ತಿದ್ದಾರೆ. ತೆಲುಗು ಹಾಗೂ ತಮಿಳು ಎರಡೂ ಭಾಷೆಯಲ್ಲಿಯೂ ಶೂಟಿಂಗ್ ನಡೆಯುತ್ತಿದೆ. ಈ ಕಾರಣಕ್ಕೆ ವಿಶೇಷವಾಗಿ ಶೂಟಿಂಗ್ ಮಾಡಲು ಪರ್ಮಿಷನ್ ಸಿಕ್ಕಿದೆ ಎನ್ನಲಾಗಿತ್ತು. ಅಲ್ಲದೆ ದಳಪತಿ ವಿಜಯ್ ತೆಲುಗು ನಟ ಅಲ್ಲದೆ ಇರೋದ್ರಿಂದ ಅನುಮತಿ ನೀಡಲಾಗಿದೆ ಅನ್ನೋ ಮಾತು ಕೇಳಿ ಬಂದಿತ್ತು.


Click it and Unblock the Notifications











