ಮಮತಾ ಬ್ಯಾನರ್ಜಿ ರೀತಿ ನೀವೂ ಮನೆಗೆ ಎಣ್ಣೆ ಸಪ್ಲೈ ಮಾಡಿ ಎಂದು ಕೇಳಿದ ನಿರ್ದೇಶಕ
ಕೊರೊನಾ ವೈರಸ್ ಲಾಕ್ಡೌನ್ ವಿವಿಧ ಬಗೆಯ ಸಾವುಗಳಿಗೆ ಕಾರಣವಾಗುತ್ತಿವೆ. ಕೊರೊನಾ ವೈರಸ್ನಿಂದ ಗುಣಮುಖರಾದರೆ ಕೆಲವರು ಸಾಯುತ್ತಿದ್ದರೆ, ಇನ್ನು ಅನೇಕರು ಈ ಸಂದರ್ಭದಲ್ಲಿ ತುರ್ತು ಚಿಕಿತ್ಸೆಯ ವ್ಯವಸ್ಥೆ ಸಿಗದೆ ಕೊನೆಯುಸಿರೆಳೆಯುತ್ತಿದ್ದಾರೆ. ಹಾಗೆಯೇ ಲಾಕ್ಡೌನ್ ಕಾರಣದಿಂದಾಗಿ ಆಹಾರ ಸಿಗದೆ ಹಸಿವಿನಿಂದ ನರಳಿ ಸಾಯುತ್ತಿರುವುದೂ ವರದಿಯಾಗಿದೆ. ಇನ್ನೊಂದು ಆಘಾತಕಾರಿ ಸಾವಿನ ವರದಿಗಳನ್ನೂ ನೋಡುತ್ತಿದ್ದೇವೆ. ಅದು 'ಎಣ್ಣೆ' ಸಿಗದೆ ಸಾಯುತ್ತಿರುವುದು.
ನಿಜ. ದೇಶದಲ್ಲಿ ಲಕ್ಷಾಂತರ ಮಂದಿ ಮದ್ಯ ಪ್ರಿಯರಿದ್ದಾರೆ. ಅವರಲ್ಲಿ ಅನೇಕರು ಮದ್ಯ ವ್ಯಸನಿಗಳು. ಅಂದರೆ ದಿನವೂ ಕುಡಿಯದೇ ಇದ್ದರೆ ಬದುಕಲು ಸಾಧ್ಯವೇ ಇಲ್ಲ ಎನ್ನುವಷ್ಟು ಮಟ್ಟಿಗೆ ಆಲ್ಕೋಹಾಲ್ಗೆ ಅಡಿಕ್ಟ್ ಆಗಿರುವವರು. ವಾರಗಳಿಂದ ಮದ್ಯ ಸಿಗದೆ, ಅನೇಕರು ಚಡಪಡಿಸುತ್ತಿದ್ದಾರೆ. ಎಣ್ಣೆಗಾಗಿ ಹುಡುಕಾಡಿ ಸುಸ್ತಾಗಿದ್ದಾರೆ. ಲಾಕ್ಡೌನ್ಗೂ ಮುನ್ನ ಸ್ಟಾಕ್ ತಂದಿಟ್ಟುಕೊಂಡವರ ಖಜಾನೆಯೂ ಖಾಲಿಯಾಗಿದೆ. ಮುಂದೆ ಓದಿ...

ಆಲ್ಕೋಹಾಲ್ ಸಿಗದೆ ಆತ್ಮಹತ್ಯೆ
ಮದ್ಯ ವ್ಯಸನಕ್ಕೆ ಒಳಗಾದವರ ದೇಹ ಮಾತ್ರವಲ್ಲ, ಮಾನಸಿಕ ಸ್ಥಿತಿಯೂ ಹದಗೆಟ್ಟಿರುತ್ತದೆ. ಕುಡಿದರೆ ಮಾತ್ರ ಆ ದಿನ ತಮ್ಮಿಂದ ಬದುಕಲು ಸಾಧ್ಯವಿಲ್ಲ ಎಂಬ ಮನಸ್ಥಿತಿಯನ್ನು ರೂಪಿಸಿಕೊಂಡಿದ್ದಾರೆ. ಈಗ ಆಲ್ಕೋಹಾಲ್ ಸಿಗದೆ ಅವರು ಪರದಾಡುತ್ತಿದ್ದಾರೆ. ಅನೇಕರು ಆತ್ಮಹತ್ಯೆಯಂತ ಕೃತ್ಯಕ್ಕೂ ಕೈಹಾಕುತ್ತಿದ್ದಾರೆ.

ಮದ್ಯ ಮಾರಾಟಕ್ಕೆ ಬೇಡಿಕೆ
ಲಾಕ್ಡೌನ್ ಕಾರಣದಿಂದ ಎಲ್ಲಿಯೂ ಮದ್ಯ ಸಿಗದ ಪರಿಸ್ಥಿತಿ ಇದೆ. ಅನೇಕರು ಮದ್ಯ ಖರೀದಿಗೆ ಅವಕಾಶ ನೀಡಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದರೆ ಇನ್ನಷ್ಟು ಸಮಸ್ಯೆಗಳು ಎದುರಾಗಬಹುದು ಎಂಬ ಆತಂಕ ಇರುವುದರಿಂದ ಸರ್ಕಾರ ಅವರ ಮನವಿಗೆ ಕಿವಿಗೊಟ್ಟಿಲ್ಲ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ ಮನೆ ಮನೆಗೆ ಲಿಕ್ಕರ್ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂಬ ಸುಳ್ಳು ಸುದ್ದಿ ಹರಡಿತ್ತು.

ನಮ್ಮ ಸಿಎಂ ಕೂಡ ನಿರ್ಧಾರ ತೆಗೆದುಕೊಳ್ಳಲಿ
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ತೆಗೆದುಕೊಂಡಂತೆ ನಮ್ಮಲ್ಲಿಯೂ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಗ್ರಹಿಸಿದ್ದಾರೆ. ವಿವಾದಗಳಿಂದಲೇ ಹೆಚ್ಚು ಹೆಸರಾಗಿರುವ ರಾಮ್ ಗೋಪಾಲ್ ವರ್ಮಾ ಅವರ ಬೇಡಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ.

ಮಾನಸಿಕ ಆಸ್ಪತ್ರೆಗಳಿಗೆ ಸೇರುತ್ತಿದ್ದಾರೆ
ಮುಖ್ಯಮಂತ್ರಿಗಳಾದ ಕೆ. ಚಂದ್ರಶೇಖರ್ ರಾವ್ ಮತ್ತು ಜಗನ್ ಮೋಹನ್ ರೆಡ್ಡಿ ಅವರಿಗೆ ಮನವಿ ಮಾಡುತ್ತಿದ್ದೇನೆ. ಬೇಸರಗೊಂಡಿರುವ ಜನರು ತಮ್ಮ ಕೂದಲನ್ನು ಎಳೆದುಕೊಳ್ಳುತ್ತಾ, ಮಕ್ಕಳಂತೆ ಅಳುತ್ತಾ, ಮಾನಸಿಕ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ ಎಂದು ಆರ್ಜಿವಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ರೀತಿ ವಿಶಾಲ ಹೃದಯಿಗಳಾಗಿ
ಈ ರೀತಿ ಮಾನಸಿಕವಾಗಿ ನೊಂದಿರುವ ಪತಿಯರ ಹತಾಶೆಯಿಂದ ಪತ್ನಿಯರು ಹೊಡೆತ ತಿನ್ನುತ್ತಿದ್ದಾರೆ. ಮಮತಾ ಬ್ಯಾನರ್ಜಿ ಅವರಂತೆ ವಿಶಾಲ ಹೃದಯ ಹೊಂದಿ, ನಮಗೆ ಚಿಯರ್ಸ್ ಮಾಡಿ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಸಲಹೆ ನೀಡಿದ್ದ ರಿಷಿ ಕಪೂರ್
ಕೆಲವು ದಿನಗಳ ಹಿಂದೆ ಹಿಂದಿ ಚಿತ್ರರಂಗದ ಹಿರಿಯ ನಟ ರಿಷಿ ಕಪೂರ್ ಕೂಡ ಸರ್ಕಾರಕ್ಕೆ ಅಲ್ಕೋಹಾಲ್ ಮಾರಾಟದ ವಿಚಾರದಲ್ಲಿ ಸಲಹೆ ನೀಡಿದ್ದರು. ಜನರು ಈಗಲೂ ಕದ್ದುಮುಚ್ಚಿ ಕುಡಿಯುತ್ತಿದ್ದಾರೆ. ಸರ್ಕಾರಕ್ಕೆ ಅಬಕಾರಿ ಮೂಲಕ ಹಣ ಸಂಗ್ರಹಿಸುವ ಅನಿವಾರ್ಯತೆ ಇದೆ. ಹೀಗಾಗಿ ಲೈಸೆನ್ಸ್ ಇರುವ ಮದ್ಯದಂಗಡಿಗಳಿಂದ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ರಿಷಿ ಹೇಳಿದ್ದರು.


Click it and Unblock the Notifications











