ಆರ್ಆರ್ಆರ್ ಚಿತ್ರತಂಡದಿಂದ ಹೊಸ ಸುದ್ದಿ: ಮೂರು ಅವತಾರಗಳಲ್ಲಿ ಜೂ. ಎನ್ಟಿಆರ್?
ಎಸ್. ಎಸ್. ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಚಿತ್ರೀಕರಣ ವಿಳಂಬವಾದರೂ ಚಿತ್ರತಂಡದಿಂದ ಹೊಸ ಹೊಸ ಸುದ್ದಿಗಳು ಹೊರಬೀಳುತ್ತಲೇ ಇವೆ. ಹೀಗಾಗಿ ಸಿನಿಮಾ ಬಗ್ಗೆ ಕುತೂಹಲ ಮತ್ತಷ್ಟು ತೀವ್ರವಾಗುತ್ತಿದೆ. ಜತೆಗೆ ಅದರ ತಾರಾಬಳಗವು ಚಿತ್ರದ ಕುರಿತಾಗಿ ಗಮನ ಸೆಳೆಯುತ್ತಲೇ ಇದೆ. ಬಾಹುಬಲಿಗಿಂತಲೂ ದೊಡ್ಡ ಮಟ್ಟದಲ್ಲಿ ಈ ಚಿತ್ರ ಬರಲಿದೆ ಎಂದು ಹೇಳಲಾಗುತ್ತಿದೆ.
Recommended Video
ಇದು ವಿವಿಧ ಕಾಲಘಟ್ಟದ ಕಥೆಯಾಗಿದ್ದು, ಜೂನಿಯರ್ ಎನ್ಟಿಆರ್ ಮೂರು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಸಿನಿ ಪ್ರಿಯರಲ್ಲಿ ಮತ್ತಷ್ಟು ಥ್ರಿಲ್ ಮೂಡಿಸಿದೆ. ಆದರೆ ಈ ಬಗ್ಗೆ ರಾಜಮೌಳಿ ಹಾಗೂ ಚಿತ್ರತಂಡದ ಯಾವುದೇ ಸದಸ್ಯರು ಖಚಿತಪಡಿಸಿಲ್ಲ. 'ಆರ್ಆರ್ಆರ್' ಎಂದರೆ 'ರಘುಪತಿ ರಾಘವ ರಾಜಾರಾಮ್' ಎಂಬ ವಿಸ್ತೃತ ಪದದ ಸಂಕ್ಷಿಪ್ತ ರೂಪ ಎನ್ನಲಾಗಿದೆ.

ರೈಲಿನಲ್ಲಿ ಎನ್ಟಿಆರ್ ಸಾಹಸ
ವರದಿಗಳ ಪ್ರಕಾರ ಜೂನಿಯರ್ ಎನ್ಟಿಆರ್ ಕೊಮರಮ್ ಭೀಮ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜತೆಗೆ ಅವರು ಮತ್ತೊಂದು ವಿಭಿನ್ನ ಅವತಾರವನ್ನೂ ತಾಳಲಿದ್ದಾರೆ. ಆಕ್ಷನ್ ದೃಶ್ಯವೊಂದರಲ್ಲಿ ರೈಲಿನಿಂದ ಗನ್ಗಳು ಮತ್ತು ಬಾಂಬ್ಗಳನ್ನು ಕದಿಯುವ ಸನ್ನಿವೇಶವಿದೆ. ಇದು ಸಿನಿಮಾದ ಮೇಜರ್ ಹೈಲೇಟ್ಗಳಲ್ಲಿ ಒಂದು. ಈ ಪಾತ್ರದಲ್ಲಿ ಅವರು ಕಾಡಿನಲ್ಲಿ ವಾಸಿಸುವ ಹೋರಾಟಗಾರ. ಅವರ ಮತ್ತೊಂದು ಅವತಾರ ಹೇಗಿದೆಯೋ ಕಾದು ನೋಡಬೇಕು.

ಕುತೂಹಲ ಉಳಿಸಿಕೊಂಡ ಚಿತ್ರತಂಡ
ಈ ಹಿಂದೆ ಯಾವ ಸಿನಿಮಾಗಳಲ್ಲಿಯೂ ಜೂನಿಯರ್ ಎನ್ಟಿಆರ್ ಹೀಗೆ ಮೂರು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಅವರು ಹೊಸ ಅವತಾರಗಳನ್ನು ತಾಳಲಿದ್ದಾರೆ, ಈ ಅವತಾರಗಳು ಹೇಗಿವೆ ಎಂಬ ಕುತೂಹವನ್ನು ಉಳಿಸಿಕೊಳ್ಳಲು ಚಿತ್ರತಂಡ ರಹಸ್ಯ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ.

ಅಲಿಯಾ, ಅಜಯ್ ದೇವಗನ್ ಟಾಲಿವುಡ್ಗೆ
ಆರ್ಆರ್ಆರ್ನಲ್ಲಿ ರಾಮ ಚರಣ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ಸಮುದ್ರಖಣಿ, ರಾಹುಲ್ ರಾಮಕೃಷ್ಣ, ಒಲಿವಿಯಾ ಮಾರಿಸ್ ಮತ್ತು ರೇ ಸ್ಟೀವನ್ಸನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಬೃಹತ್ ಸಿನಿಮಾ ಮೂಲಕ ಬಾಲಿವುಡ್ ಸ್ಟಾರ್ಗಳಾದ ಅಲಿಯಾ ಭಟ್ ಹಾಗೂ ಅಜಯ್ ದೇವಗನ್ ಟಾಲಿವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಅಲಿಯಾ ಭಟ್ ಇನ್ನೂ ಬಂದಿಲ್ಲ
ಆರ್ಆರ್ಆರ್ ಚಿತ್ರದ ಶೇ 90ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ ಎನ್ನಲಾಗಿದೆ. ಆದರೆ ಅಲಿಯಾ ಭಟ್ ಇನ್ನೂ ಚಿತ್ರತಂಡವನ್ನು ಸೇರಿಕೊಂಡಿಲ್ಲ. ಹೀಗಾಗಿ ಅಲಿಯಾ ಭಟ್ ಕೇವಲ ಸಣ್ಣ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಹೈದರಾಬಾದ್ನಲ್ಲಿ ಶೂಟಿಂಗ್ ನಡೆಸುತ್ತಿದ್ದ ಚಿತ್ರತಂಡ, ಈಗ ಕೊರೊನಾ ಕಾರಣದಿಂದ ಪುಣೆಯ ಚಿತ್ರೀಕರಣವನ್ನೂ ಸ್ಥಗಿತಗೊಳಿಸಿದೆ.

ರಾಮ್ ಚರಣ್ ಹುಟ್ಟುಹಬ್ಬಕ್ಕೆ...
2021ರ ಜನವರಿ 8ರಂದು ಮಕರ ಸಂಕ್ರಾಂತಿಯ ದಿನ ಸಿನಿಮಾ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. 2020ರ ಮಾರ್ಚ್ 27ರಂದು ರಾಮ್ ಚರಣ್ ಹುಟ್ಟುಹಬ್ಬದ ವೇಳೆ ಅವರ ಪಾತ್ರದ ಮೊದಲ ಲುಕ್ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಸ್ವಾತಂತ್ರ್ಯ ಹೋರಾಟಗಾರರ ಕಥೆ
1920ರ ಸ್ವಾತಂತ್ರ್ಯ ಪೂರ್ವ ಭಾರತದ ಕಾಲದ ಸಂಪೂರ್ಣ ಫಿಕ್ಷನಲ್ ಕಥೆ ಹೊಂದಿರುವ ಸಿನಿಮಾ, ಇಬ್ಬರು ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಕಥೆಯನ್ನು ಒಳಗೊಂಡಿದೆ. ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ನಟಿಸುತ್ತಿದ್ದರೆ, ಕೊಮರಮ್ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್ಟಿಆರ್ ನಟಿಸಿದ್ದಾರೆ.


Click it and Unblock the Notifications











