ಪರಿಹಾರ ನಿಧಿಗೆ 1 ಕೋಟಿ ರೂ ಘೋಷಿಸಿದ ಪವನ್ ಕಲ್ಯಾಣ್, 70 ಲಕ್ಷ ನೀಡಲಿದ್ದಾರೆ ರಾಮ್ ಚರಣ್
ಕೊರೊನಾ ವೈರಸ್ ಭೀತಿಯಿಂದ ಇಡೀ ಭಾರತವೇ ಬಹುತೇಕ ಸ್ತಬ್ಧವಾಗಿದೆ. ಆರ್ಥಿಕ, ಕೃಷಿ, ಉದ್ಯಮ ಚಟುವಟಿಕೆಗಳು ಆತಂಕಕ್ಕೆ ಸಿಲುಕಿವೆ. ಈ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಮತ್ತಷ್ಟು ಬಿಗಡಾಯಿಸುವ ಭೀತಿ ಉಂಟಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ, ಲಾಕ್ಡೌನ್ನ ಎಲ್ಲ ದಿನಗಳಲ್ಲಿಯೂ ಅವರಿಗೆ ಅಗತ್ಯ ಸೇವೆಗಳು ಕೊರತೆಯಾಗದಂತೆ ನೋಡಿಕೊಳ್ಳಬೇಕಿದೆ.
ಈ ಎಲ್ಲವನ್ನೂ ಒದಗಿಸಲು ಭಾರಿ ಮೊತ್ತದ ಹಣಕಾಸಿನ ಅಗತ್ಯವಿದೆ. ಪ್ರಾಕೃತಿಕ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ಹೇಗೆ ಕೋಟಿಗಟ್ಟಲೆ ನಷ್ಟ ಉಂಟಾಗುತ್ತದೆಯೋ ಹಾಗೆಯೇ ಕೊರೊನಾ ವೈರಸ್ ಹಾವಳಿಯ ವೇಳೆಯೂ ಅಪಾರ ನಷ್ಟವುಂಟಾಗುತ್ತಿದೆ. ಈ ಸಂದರ್ಭದಲ್ಲಿ ಪರಿಹಾರ ಕಾರ್ಯಕ್ಕೆ ಸರ್ಕಾರದ ಜತೆ ಕೈಜೋಡಿಸಲು ಅನೇಕ ಸೆಲೆಬ್ರಿಟಿಗಳು ಮುಂದೆ ಬಂದಿದ್ದಾರೆ.
ಒಂದು ಕೋಟಿ ರೂ ಘೋಷಿಸಿದ ಪವನ್
ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲವಾಗಿರಲು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನಾನು 1 ಕೋಟಿ ರೂ. ದೇಣಿಗೆ ನೀಡಲಿದ್ದೇನೆ. ಅವರ ಅನುಕರಣೀಯ ಮತ್ತು ಸ್ಫೂರ್ತಿದಾಯಕ ನಾಯಕತ್ವವು ನಮ್ಮ ದೇಶವನ್ನು ಈ ಕೊರೊನಾ ಪಿಡುಗಿನಿಂದ ಖಂಡಿತಾ ಹೊರತರಲಿದೆ ಎಂದು ತೆಲುಗು ನಟ ಪವನ್ ಕಲ್ಯಾಣ್ ಹೇಳಿದ್ದಾರೆ.
ರಾಜ್ಯ ಸರ್ಕಾರಗಳಿಗೂ ದೇಣಿಗೆ
ಇಷ್ಟೇ ಅಲ್ಲದೆ ಪವನ್ ಕಲ್ಯಾಣ್ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ತಲಾ 50 ಲಕ್ಷ ರೂ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ. ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕಾಗಿ ಈ ದೇಣಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ರಾಮ್ ಚರಣ್ 70 ಲಕ್ಷ ರೂ ದೇಣಿಗೆ
ಪವನ್ ಕಲ್ಯಾಣ್ ಅವರ ಟ್ವೀಟ್ನಿಂದ ಪ್ರೇರಣೆ ಪಡೆದು ನಾನು ಕೇಂದ್ರ ಮತ್ತು ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಪರಿಹಾರ ನಿಧಿಗೆ ಈ ಬಿಕ್ಕಟ್ಟಿನ ಸಂದರ್ಭದಲ್ಲಿ 70 ಲಕ್ಷ ರೂ.ಗಳ ಕೊಡುಗೆ ನೀಡುತ್ತಿದ್ದೇನೆ ಎಂದು ಮತ್ತೊಬ್ಬ ತೆಲುಗು ಸ್ಟಾರ್ ರಾಮ್ ಚರಣ್ ಘೋಷಿಸಿದ್ದಾರೆ.
ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಮತ್ತು ನಮ್ಮ ರಾಜ್ಯಗಳ ಮುಖ್ಯಮಂತ್ರಿಳಾದ ಕೆಸಿಆರ್ ಹಾಗೂ ಜಗನ್ ಮೋಹನ್ ರೆಡ್ಡಿ ಅವರು ಕೋವಿಡ್ 19ರ ಪಿಡುಗನ್ನು ಹತ್ತಿಕ್ಕಲು ನಡೆಸುತ್ತಿರುವ ಶ್ಲಾಘನೀಯ ಪ್ರಯತ್ನಗಳನ್ನು ಮೆಚ್ಚಿಕೊಳ್ಳುತ್ತೇನೆ. ಜವಾಬ್ದಾರಿಯುತ ನಾಗರಿಕನಾಗಿ ಅವರ ನಿಯಮ ಮತ್ತು ಸಲಹೆಗಳಿಗೆ ಕಟ್ಟುನಿಟ್ಟಾಗಿ ಬದ್ಧರಾಗಿರುವಂತೆ ಎಲ್ಲರಿಗೂ ಕೋರುತ್ತೇನೆ ಎಂದು ರಾಮ್ ಚರಣ್ ಹೇಳಿದ್ದಾರೆ.
ನಟ ನಿತಿನ್ ದೇಣಿಗೆ
ಈ ನಟರಿಗೂ ಮುನ್ನ ಪರಿಹಾರ ನಿಧಿಗೆ ದೇಣಿಗೆ ಘೋಷಿಸಿದ್ದು ತೆಲುಗು ನಟ ನಿತಿನ್. ತೆಲಂಗಾಣ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಅವರು ತಲಾ 10 ಲಕ್ಷ ರೂಗಳನ್ನು ಘೋಷಿಸಿದ್ದರು.
ಸಂಚಾರಿ ವಿಜಯ್ ನೆರವು
ಕನ್ನಡ ನಟ ಸಂಚಾರಿ ವಿಜಯ್ ತಮ್ಮದೇ ರೀತಿಯಲ್ಲಿ ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ದಿನಗೂಲಿ ಮೇಲೆ ಅವಲಂಬಿತವಾಗಿರುವ 5-6 ಕುಟುಂಬಗಳಿಗೆ ಒಂದು ತಿಂಗಳಿಗೆ ಆಹಾರ ಪದಾರ್ಥ ಒದಗಿಸಲು ಅವರು ಮುಂದಾಗಿದ್ದರು. ಜನರು ಕೂಡ ಹೀಗೆ ಕಷ್ಟದಲ್ಲಿರುವವರಿಗೆ ನೆರವಾಗುವಂತೆ ಅವರು ವಿಡಿಯೋ ಮೂಲಕ ಮನವಿ ಮಾಡಿದ್ದರು.
ನಿರ್ದೇಶಕ ಅನಿಲ್ ರವಿಪುಡಿ
ತೆಲುಗಿನ ಖ್ಯಾತ ನಿರ್ದೇಶಕ, ಸಂಭಾಷಣೆಕಾರ ಅನಿಲ್ ರವಿಪುಡಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ ಐದು ಲಕ್ಷ ರೂ ನೀಡುವುದಾಗಿ ಘೋಷಿಸಿದ್ದಾರೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಮತ್ತು ಈ ಲಾಕ್ಡೌನ್ ಅವಧಿಯನ್ನು ಯಶಸ್ವಿಗೊಳಿಸಿ. ಒಬ್ಬರಿಂದೊಬ್ಬರು ಅಂತರ ಕಾಪಾಡಿಕೊಳ್ಳುವ ಮೂಲಕ ಸರಪಳಿಯನ್ನು ತುಂಡು ಮಾಡೋಣ ಎಂದು ಅವರು ಹೇಳಿದ್ದಾರೆ.


Click it and Unblock the Notifications











