ಕೇರಳದ ನರ್ಸಿಂಗ್ ವಿದ್ಯಾರ್ಥಿನಿಗೆ ಟಾಲಿವುಡ್ ನಟ ಅಲ್ಲು ಅರ್ಜುನ್ ನೆರವು!
ಕೆಲ ಸ್ಟಾರ್ ನಟರು ಸಿನಿಮಾದ ಜೊತೆ ಜೊತೆಗೆ ಸಾಮಾಜಿಕ ಕೆಲಸಗಳಲ್ಲೂ ಭಾಗಿಯಾಗಿದ್ದಾರೆ. ಇದು ಅತ್ಯುತ್ತಮ ಉದಾಹರಣೆ ಅಂದರೆ, ಅದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್. ಬಡ ವಿದ್ಯಾರ್ಥಿಗಳಿಗೆ ಅಪ್ಪು ನೆರವು ನೀಡಿ ಮಾದರಿಯಾಗಿದ್ದರು. ಈಗ ಟಾಲಿವುಡ್ ನಟ ಅಲ್ಲು ಅರ್ಜುನ್ ಇಂತಹದ್ದೇ ಒಂದೊಳ್ಳೆ ನೆರವು ನೀಡಿ ಮಾದರಿಯಾಗಿದ್ದಾರೆ.
ಹೌದು, ಕೇರಳದ ನರ್ಸಿಂಗ್ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ನೆರವು ನೀಡುವ ಮೂಲಕ ಅಲ್ಲು ಅರ್ಜುನ್ ಮೆಚ್ಚುಗೆ ಗಳಿಸಿದ್ದಾರೆ. ಕೇರಳದ ವಿದ್ಯಾರ್ಥಿನಿ ನರ್ಸಿಂಗ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಅಸಹಾಯಕಳಾಗಿದ್ದಳು. ಈ ವಿದ್ಯಾರ್ಥಿನಿಗೆ ಅಲ್ಲು ಅರ್ಜುನ್ ನಾಲ್ಕು ವರ್ಷದ ಶಿಕ್ಷಣದ ಸಂಪೂರ್ಣ ಖರ್ಚನ್ನು ಭರಿಸಲು ಮುಂದೆ ಬಂದಿದ್ದಾರೆ.

ಕೇರಳದ ಅಲಪ್ಪುಳ ಜಿಲ್ಲಾಧಿಕಾರಿ ವಿ ಆರ್ ಕೃಷ್ಣ ತೇಜ ತಮ್ಮ ಫೇಸ್ಬುಕ್ ಖಾತೆಯಲ್ಲಿ ಅಲ್ಲು ಅರ್ಜುನ್ ಅವರ ಉದಾರ ಗುಣವನ್ನು ಹಂಚಿಕೊಂಡಿದ್ದಾರೆ. ಫೇಸ್ ಬುಕ್ ಪೋಸ್ಟ್ನಲ್ಲಿ ಕೇರಳದ ಮುಸ್ಲಿಂ ವಿದ್ಯಾರ್ಥಿನಿ ತಮ್ಮ ಬಳಿ ಸಹಾಯ ಕೇಳಿ ಬಂದಿದ್ದ ಘಳಿಗೆಯನ್ನು ವಿವರಿಸಿದ್ದಾರೆ. ಮುಸ್ಲಿಂ ಹುಡುಗಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಹಾಯಕೋರಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದರು. ಪಿಯುಸಿಯಲ್ಲಿ ಶೇ.92ರಷ್ಟು ಅಂಕಪಡೆದಿದ್ದರೂ, ಆರ್ಥಿಕವಾಗಿ ಸಬಲರಾಗಿಲ್ಲದೆ ಇರೋದ್ರಿಂದ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಆಕೆಯ ತಂದೆ ಕಳೆದ ವರ್ಷ ಕೊರೊನಾ ಕಾರಣದಿಂದ ಮೃತಪಟ್ಟಿದ್ದರು.
"ನಾನು ಆಕೆಯ ಕಣ್ಣುಗಳಲ್ಲಿ ಆತ್ಮಸ್ಥೈರ್ಯ ಹಾಗೂ ಭರವಸೆಯನ್ನು ಕಂಡೆ. ಹೀಗಾಗಿ ನಾವು ಅಲ್ಲೆಪ್ಪಿ ಯೋಜನೆಯ ಭಾಗವಾಗಿ ಆಕೆಗೆ ಎಲ್ಲಾ ರೀತಿಯ ನೆರವು ನೀಡಲು ನಿರ್ಧರಿಸಿದ್ದೆವು" ಎಂದು ಜಿಲ್ಲಾಧಿಕಾರಿ ವಿ ಆರ್ ಕೃಷ್ಣ ತೇಜ ಹೇಳಿದ್ದಾರೆ. ಬಳಿಕ ಅಧಿಕಾರಿಗಳು ಹಲವು ಸಹೋದ್ಯೋಗಿಗಳನ್ನು ಸಂಪರ್ಕ ಮಾಡಿದ್ದರು. ಈ ವೇಳೆ ಖಾಸಗಿ ಕಾಲೇಜಿನಲ್ಲಿ ಅವರಿಗೆ ಸೀಟ್ ಸಿಕ್ಕಿತ್ತು. ಆದರೆ, ನಾಲ್ಕು ವರ್ಷ ಶಿಕ್ಷಣವನ್ನು ಮುಗಿಸಲು ಪ್ರಾಯೋಜಕರನ್ನು ಹುಡುಕಬೇಕಿತ್ತು. ಆಗ ಆಂಧ್ರ ಪ್ರದೇಶದ ಈ ಜಿಲ್ಲಾಧಿಕಾರಿಗೆ ಟಾಲಿವುಡ್ ಸೂಪರ್ಸ್ಟಾರ್ ಅಲ್ಲು ಅರ್ಜುನ್ ನೆನಪಾಗಿದ್ದರು.

ಕೇರಳದ ಅಲಪ್ಪುಳ ಜಿಲ್ಲಾಧಿಕಾರಿ ವಿ ಆರ್ ಕೃಷ್ಣ ತೇಜ ಟಾಲಿವುಡ್ ಸೂಪರ್ಸ್ಟಾರ್ ಅಲ್ಲು ಅರ್ಜುನ್ಗೆ ಕರೆ ಮಾಡಿದ್ದರು. " ಅಲ್ಲು ಅರ್ಜುನ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಅವರು ಕೂಡಲೇ ಸ್ಪಂದಿಸಿದ್ರು. ಒಂದು ವರ್ಷಕ್ಕೆ ನೀಡುವ ನೆರವನ್ನು ನಾಲ್ಕು ವರ್ಷಕ್ಕೆ ನೀಡಿದ್ರು. ಹಾಸ್ಟೆಲ್ ಫೀಸ್ನಿಂದ ಹಿಡಿದು, ಶಿಕ್ಷಣಕ್ಕೆ ಬೇಕಾಗಿರೋ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ಒಪ್ಪಿಕೊಂಡರು. " ಎಂದು ಅಲ್ಲು ಅರ್ಜುನ್ಗೆ ಜಿಲ್ಲಾಧಿಕಾರಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.


Click it and Unblock the Notifications











