ಒಂದೇ ದಿನ ಎರಡು ಸಂಕಷ್ಟದಲ್ಲಿ ಸಿಲುಕಿದ ರಾಮ್ ಗೋಪಾಲ್ ವರ್ಮಾ
ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಲಾಕ್ ಡೌನ್ ಅವಧಿಯಲ್ಲಿಯೂ ಒಂದಿಲ್ಲೊಂದು ಕಿರಿಕ್ಗಳನ್ನು ಮಾಡಿಕೊಳ್ಳುತ್ತಲೇ ಇದ್ದಾರೆ. ಇತ್ತೀಚೆಗೆ ಪವನ್ ಕಲ್ಯಾಣ್ ಕುರಿತು 'ಪವರ್ ಸ್ಟಾರ್' ಎಂಬ ಸಿನಿಮಾ ಮಾಡುವುದಾಗಿ ಪವನ್ ಅಭಿಮಾನಿಗಳನ್ನು ಕೆರಳಿಸಿರುವ ಅವರು ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಸಿನಿಮಾ ಕುರಿತಂತೆ ಹೊಸದೊಂದು ಕೇಸ್ ಅವರ ಮೇಲೆ ದಾಖಲಾಗಿದೆ. ಅದರ ನಡುವೆ ಆರ್ಜಿವಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ ಎಂಬ ವದಂತಿಯನ್ನು ಹಬ್ಬಿಸಲಾಗಿದೆ.
Recommended Video
ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿರುವ ಮೈಸೂರು ಮೂಲದ ನಟಿ ನವ್ಯಾ ಸ್ವಾಮಿ ಅವರಲ್ಲಿ ಕೊರೊನಾ ವೈರ್ ಪಾಸಿಟಿವ್ ಕಂಡುಬಂದ ಬೆನ್ನಲ್ಲೇ ಅಲ್ಲಿನ ಕಿರುತೆರೆಯ ನಾಲ್ವರು ಕಲಾವಿದರಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದ ಅನೇಕ ಸೆಲೆಬ್ರಿಟಿಗಳು ತಮ್ಮ ಶೂಟಿಂಗ್ಗಳನ್ನು ರದ್ದುಪಡಿಸುತ್ತಿದ್ದಾರೆ. ಆದರೆ ರಾಮ್ ಗೋಪಾಲ್ ವರ್ಮಾ ತಂಡ ನಿರಂತರ ಚಿತ್ರೀಕರಣ ನಡೆಸುವ ಮೂಲಕ ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಲೇ ಇದೆ. ಮುಂದೆ ಓದಿ...

ಪಾಸಿಟಿವ್ ವದಂತಿ
ಹೈದರಾಬಾದ್ನ ಹೊರವಲಯದಲ್ಲಿರುವ ಮೊಯಿನಾಬಾದ್ನಲ್ಲಿರುವ ಫಾರ್ಮ್ಹೌಸ್ನಲ್ಲಿ ಆರ್ಜಿವಿ ತಂಡ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆ ಮಾಡಲು ಸಿನಿಮಾಗಳನ್ನು ಮಾಡುತ್ತಿದ್ದು, ರಾಮ್ ಗೋಪಾಲ್ ವರ್ಮಾ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ ಎಂಬ ಸುದ್ದಿ ಹರಡಿದೆ.

ಎಲ್ಲರಲ್ಲೂ ನೆಗೆಟಿವ್ ಬಂದಿದೆ
ಈ ವದಂತಿಯನ್ನು ನಿರಾಕರಿಸಿರುವ ಆರ್ಜಿವಿ, ತಮಗಾಗಲೀ ತಮ್ಮ ತಂಡ ಯಾರೊಬ್ಬರಿಗಾಗಲೀ ಕೊರೊನಾ ವೈರಸ್ ಸೋಂಕು ಬಂದಿಲ್ಲ. ಇಲ್ಲಿ ಪ್ರತಿಯೊಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಕೊರೊನಾ ವೈರಸ್ ಬಂದಿರುವುದರಿಂದ ಚಿತ್ರೀಕರಣ ನಿಲ್ಲಿಸಲಾಗಿದೆ ಎಂಬ ಸುದ್ದಿ ಸುಳ್ಳು. ಚಿತ್ರೀಕರಣ ಆರಂಭಿಸುವ ಮುನ್ನ ನಮ್ಮ ತಂಡದ ಎಲ್ಲರೂ ಕೊರೊನಾ ವೈರಸ್ ತಪಾಸಣೆಗೆ ಒಳಪಟ್ಟಿದ್ದು, ಪ್ರತಿಯೊಬ್ಬರಲ್ಲೂ ನೆಗೆಟಿವ್ ಬಂದಿದೆ. ಮಾರ್ಗದರ್ಶಿಗಳಿಗೆ ಬದ್ಧವಾಗಿ ಚಿತ್ರೀಕರಣ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಆರ್ಜಿವಿ ವಿರುದ್ಧ ಕೇಸ್!
ಈ ನಡುವೆ ಮತ್ತೊಂದು ವಿವಾದ ರಾಮ್ ಗೋಪಾಲ್ ವರ್ಮಾ ಅವರನ್ನು ಸುತ್ತಿಕೊಂಡಿದೆ. ಇಡೀ ದೇಶದಾದ್ಯಂತ ಚರ್ಚೆಯಾಗಿದ್ದ ಹೈದರಾಬಾದ್ನ ಮರಿಯಾಲಗುಡ ಮರ್ಯಾದೆಗೇಡು ಹತ್ಯೆ ಪ್ರಕರಣದ ಬಗ್ಗೆ ಸಿನಿಮಾ ಮಾಡಲು ಆರ್ಜಿವಿ ಮುಂದಾಗಿದ್ದರು. ಮೃತ ಪ್ರಣಯ್ ತಂದೆ, ರಾಮ್ ಗೋಪಾಲ್ ವರ್ಮಾ ವಿರುದ್ಧ ನೀಡಿರುವ ದೂರಿನಂತೆ ಈಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಏನಿದು ಘಟನೆ?
2018ರ ಸೆ. 14ರಂದು ಆರೋಗ್ಯ ತಪಾಸಣೆಗೆ ಹೋಗಿದ್ದ ಗರ್ಭಿಣಿ ಅಮೃತಾ ಎದುರೇ ಆಕೆಯ ತಂದೆಯ ಕಡೆಯವರು ಪತಿ ಪ್ರಣಯ್ ಅವರನ್ನು ಕೊಲೆ ಮಾಡಿದ್ದರು. ಮಗಳು ಅನ್ಯಜಾತಿಯ ಯುವಕನನ್ನು ತನ್ನ ಇಚ್ಛೆ ಮೀರಿ ಮದುವೆಯಾಗಿದ್ದನ್ನು ಸಹಿಸದೆ ಕೊಲೆ ಮಾಡಿದ್ದ ಆರೋಪ ಅಮೃತಾ ತಂದೆ ಟಿ. ಮಾರುತಿ ರಾವ್ ಮೇಲೆ ಇತ್ತು. ಕೆಲವು ಕಾಲ ಜೈಲಿನಲ್ಲಿದ್ದ ಮಾರುತಿ ರಾವ್, ಕಳೆದ ಮಾರ್ಚ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇಬ್ಬರ ವಿರುದ್ಧ ಪ್ರಕರಣ
ಪ್ರಣಯ್ ಹತ್ಯೆಯ ನೈಜ ಘಟನೆ ಆಧಾರದಲ್ಲಿ ಸಿನಿಮಾ ಮಾಡಲು ರಾಮ್ ಗೋಪಾಲ್ ವರ್ಮಾ ಮತ್ತು ನಿರ್ಮಾಪಕ ನಟ್ಟಿ ಕರುಣಾ ಮುಂದಾಗಿದ್ದರು. ಈಗ ಪ್ರಣಯ್ ತಂದೆ ಪೆರುಮುಲ್ಲಾ ಬಾಲಸ್ವಾಮಿ ಅವರು ನಾಲ್ಗೊಂಡಾ ಎಸ್ಸಿ ಎಸ್ಟಿ ವಿಶೇಷ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದು, ಅದರಂತೆ ಪೊಲೀಸರು ಈ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಯಾಡ್ ಫಾದರ್ನ ಕಥೆ!
ಈ ಪ್ರಕರಣದ ಆಧಾರದಲ್ಲಿ ಸಿನಿಮಾ ಮಾಡುವುದಾಗಿ ಆರ್ಜಿವಿ ಇತ್ತೀಚೆಗೆ ಅಪ್ಪಂದಿರ ದಿನಾಚರಣೆ ಸಂದರ್ಭದಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದರು. ಮಗಳನ್ನು ತಂದೆ ಅತಿಯಾಗಿ ಪ್ರೀತಿಸುವುದರ ಅಪಾಯದ ಬಗ್ಗೆ ಅಮೃತಾ ಮತ್ತು ಮಾರುತಿರಾವ್ ಪ್ರಸಂಗದ ಹೃದಯ ಕಲಕುವ ಕಥೆ ಇದು. ಹ್ಯಾಪಿ ಫಾದರ್ಸ್ ಡೇ ದಿನ ಸ್ಯಾಡ್ ಫಾದರ್ನ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೇನೆ ಎಂದು ಆರ್ಜಿವಿ ಪೋಸ್ಟರ್ ಜತೆ ಟ್ವೀಟ್ ಮಾಡಿದ್ದರು. ಆರ್ಜಿವಿ ಸಿನಿಮಾ ಮಗನನ್ನು ನೆಗೆಟಿವ್ ಛಾಯೆಯಲ್ಲಿ ತೋರಿಸಲಿದ್ದು, ಅದು ಮಗನ ಹತ್ಯೆ ಪ್ರಕರಣದ ಮೇಲೆ ಪರಿಣಾಮ ಬೀರಲಿದೆ ಎಂದು ಬಾಲಸ್ವಾಮಿ ಆರೋಪಿಸಿದ್ದಾರೆ.


Click it and Unblock the Notifications











