'ಆಚಾರ್ಯ'ದಲ್ಲಿ ರಾಮ್ ಚರಣ್ ಜತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್?
ಮೆಗಾ ಸ್ಟಾರ್ ಚಿರಂಜೀವಿ ಅವರ ಮುಂದಿನ ಸಿನಿಮಾ 'ಆಚಾರ್ಯ' ನಾಯಕಿಯರ ಕಾರಣದಿಂದಲೇ ಹೆಚ್ಚು ಸುದ್ದಿಯಲ್ಲಿದೆ. ಕೊರತಲಾ ಶಿವ ನಿರ್ದೇಶನದ 'ಆಚಾರ್ಯ'ದ ನಾಯಕಿ ಯಾರಾಗಲಿದ್ದಾರೆ ಎಂಬ ಚರ್ಚೆ ಟಾಲಿವುಡ್ನಲ್ಲಿ ಜೋರಾಗಿದೆ. ಚಿತ್ರದ ಕಥೆಯ ಕುರಿತು ಉಂಟಾದ ಮನಸ್ತಾಪದಿಂದ ಸಿನಿಮಾದಿಂದ ಹೊರ ಬರುತ್ತಿರುವುದಾಗಿ ತ್ರಿಶಾ ತಿಳಿಸಿದ್ದರು. ಅವರ ಜಾಗಕ್ಕೆ ಕಾಜಲ್ ಅಗರವಾಲ್ ಬರಲಿದ್ದಾರೆ ಎಂದೂ ಹೇಳಲಾಗುತ್ತಿದೆ.
Recommended Video
ಈ ನಡುವೆ 'ಆಚಾರ್ಯ' ಚಿತ್ರತಂಡ ಮೂಲದಿಂದ ಮತ್ತೊಂದು ಸುದ್ದಿ ಹೊರಬಂದಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕೂಡ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಈ ವರ್ಷ ತೆರೆ ಕಾಣಲಿದೆ ಎಂದು ನಿರೀಕ್ಷಿಸಲಾಗಿರುವ 'ಆಚಾರ್ಯ'ದಲ್ಲಿ ರಶ್ಮಿಕಾ ಅವರಿಗೆ ವಿಶೇಷ ಪಾತ್ರವೊಂದು ಸಿಗಲಿದ್ದು, ಅದಕ್ಕಾಗಿ ಅವರಿಗೆ ಆಫರ್ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ರಾಮ್ಚರಣ್ ಜತೆ ರಶ್ಮಿಕಾ
'ಆಚಾರ್ಯ' ಚಿತ್ರದಲ್ಲಿ ಚಿರಂಜೀವಿ ಮಗ ರಾಮ್ ಚರಣ್ ಕೂಡ ನಟಿಸುತ್ತಿದ್ದು, ರಾಮ್ ಚರಣ್ ಎದುರು ಅತಿಥಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಬೇಕು ಎಂದು ಮೆಗಾಸ್ಟಾರ್ ಚಿರಂಜೀವಿ ಬಯಸಿದ್ದಾರೆ.

ಚಿರಂಜೀವಿ ಶಿಫಾರಸು
ರಶ್ಮಿಕಾ ಮಂದಣ್ಣ ಅಭಿನಯವನ್ನು ಮೆಚ್ಚಿಕೊಂಡಿರುವ ಚಿರಂಜೀವಿ, ತಮ್ಮ ಮಹತ್ವಾಕಾಂಕ್ಷೆಯ 'ಆಚಾರ್ಯ' ಚಿತ್ರದ ಪುಟ್ಟ ಪಾತ್ರದಲ್ಲಿ ಅವರು ಕಾಣಿಸಿಕೊಂಡರೆ ಚೆನ್ನಾಗಿರುತ್ತದೆ ಎಂದು ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಸಲಹೆ ನೀಡಿದ್ದಾರಂತೆ.

ಕಿಯಾರಾ ಅಡ್ವಾಣಿಗೆ ಆಹ್ವಾನ
ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಚಿತ್ರದಲ್ಲಿಯೂ ಬಿಜಿಯಾಗಿರುವ ರಾಮ್ ಚರಣ್, ತಮ್ಮ ಉತ್ತಮ ಸ್ನೇಹಿತೆಯಾಗಿರುವ ಕಿಯಾರಾ ಅಡ್ವಾಣಿ ಅವರನ್ನು ಈ ಪಾತ್ರದಲ್ಲಿ ನಟಿಸುವಂತೆ ಆಹ್ವಾನ ನೀಡಿದ್ದರು ಎಂದೂ ಹೇಳಲಾಗುತ್ತಿದೆ. ಆದರೆ ಈಗ ಚಿರಂಜೀವಿ ತಮ್ಮ ಆದ್ಯತೆಯನ್ನು ವ್ಯಕ್ತಪಡಿಸಿರುವುದರಿಂದ ರಶ್ಮಿಕಾ ಮಂದಣ್ಣ 'ಆಚಾರ್ಯ' ಚಿತ್ರತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.

ತ್ರಿಶಾ ಜಾಗಕ್ಕೆ ಅನುಷ್ಕಾ ಶೆಟ್ಟಿ?
ರಶ್ಮಿಕಾ ನಟಿಸಿದರೂ ಅದು ಅತಿಥಿ ಪಾತ್ರವಾಗಿರಲಿದೆ. ಆದರೆ ಚಿತ್ರದ ಮುಖ್ಯ ನಾಯಕಿಯ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎನ್ನುವುದೇ ಇನ್ನೂ ಬಗೆಹರಿದಿಲ್ಲ. ಸಿನಿಮಾ ಕುರಿತು ಆರಂಭದಲ್ಲಿ ಹೇಳಿದ ಕಥೆಗೂ ಈಗ ಅದು ಸಾಗಿರುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದು ಕಾರಣ ನೀಡಿ ತ್ರಿಷಾ ಚಿತ್ರದಿಂದ ಹೊರ ನಡೆದಿದ್ದಾರೆ. ಅವರ ಜಾಗಕ್ಕೆ ಕಾಜಲ್ ಅಗರವಾಲ್ ಹೆಸರು ಕೇಳಿಬಂದಿದ್ದರೂ, ನಿರ್ದೇಶಕರು ಅನುಷ್ಕಾ ಶೆಟ್ಟಿ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.


Click it and Unblock the Notifications











