20 ವರ್ಷಗಳ ಬಳಿಕ ರಜನಿ 'ಬಾಬಾ' ಮತ್ತೆ ರಿಲೀಸ್: ಅಸಲಿ ಟ್ವಿಸ್ಟ್ ಇರೋದೇ ಇಲ್ಲಿ!
ಸೂಪರ್ಸ್ಟಾರ್ ರಜನಿಕಾಂತ್ಗೂ ಆಧ್ಯಾತ್ಮಕ್ಕೂ ಬಿಡಲಾರದ ನಂಟು. ಮೊದಲಿನಿಂದಲೂ ರಜನಿ ಆಧ್ಯಾತ್ಮದ ಮೇಲೆ ಒಲವು ಬೆಳೆಸಿಕೊಂಡಿರುವುದು ಗೊತ್ತೇ ಇದೆ. ಪ್ರತಿ ಸಿನಿಮಾ ಮುಗಿಸಿದ ಬಳಿಕ ಹಿಮಾಲಯಕ್ಕೆ ಹೋಗಿ ಅಲ್ಲಿ ಧ್ಯಾನ ಮಾಡಿ ಬರುತ್ತಿದ್ದರು.
ರಜನಿಕಾಂತ್ ಸುಮಾರು 20 ವರ್ಷಗಳ ಹಿಂದೆನೇ ಆಧ್ಯಾತ್ಮಕ್ಕೆ ಸಂಬಂಧಿಸಿದ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾನೇ 'ಬಾಬಾ'. 2002ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಆದರೆ, ರಜನಿ ನಿರೀಕ್ಷೆ ಮಾಡಿದ ಹಾಗೆ ಗೆಲ್ಲಲೇ ಇಲ್ಲ. ಬಾಕ್ಸಾಫೀಸ್ನಲ್ಲಿ 'ಬಾಬಾ' ಹೀನಾಯವಾಗಿ ಸೋಲುಂಡಿತ್ತು. ಈಗ ಅದೇ ಸಿನಿಮಾ ಮತ್ತೆ ಬಿಡುಗಡೆ ಸಜ್ಜಾಗಿದೆ. ಅಷ್ಟಕ್ಕೂ 'ಬಾಬಾ' ರಿಲೀಸ್ ಆಗುತ್ತಿರೋದು ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ರೀ-ರಿಲೀಸ್ ಆಗುತ್ತಿದೆ ರಜನಿ 'ಬಾಬಾ'
ಆಗಸ್ಟ್ 15, 2002ರಲ್ಲಿ ರಜನಿಕಾಂತ್ ಬಹಳ ಇಷ್ಟು ನಿರ್ಮಾಣ ಮಾಡಿದ್ದ ಸಿನಿಮಾ ರಿಲೀಸ್ ಆಗಿತ್ತು. ಸ್ವತ: ರಜನಿಕಾಂತ್ ಕಥೆ, ಚಿತ್ರಕಥೆ ಬರೆದಿದ್ದರು. ಅವರೇ ತಮ್ಮ ಲೋಟಸ್ ಇಂಟರ್ನ್ಯಾಷನಲ್ ಬ್ಯಾನರ್ನಲ್ಲಿ ನಿರ್ಮಾಣ ಕೂಡ ಮಾಡಿದ್ದರು. ರಜನಿಕಾಂತ್ ಯಶಸ್ಸಿನ ತುತ್ತ ತುದಿಯಲ್ಲಿದ್ದಾಗಲೇ ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಗೆದ್ದೇ ಗೆಲ್ಲುತ್ತೆ ಆಸೆಯಿಂದಲೇ ನಿರ್ಮಾಣ ಕೂಡ ಮಾಡಿದ್ದರು. ಆದರೆ, ಸಿನಿಮಾ ಹೀನಾಯವಾಗಿ ಸೋಲುಂಡಿತ್ತು.

ಹೊಸ 'ಬಾಬಾ'ಗೆ ಹೊಸ ಟ್ವಿಸ್ಟ್
ಅಷ್ಟಕ್ಕೂ ದಿಢೀರನೇ 20 ವರ್ಷಗಳ ಬಿಡುಗಡೆಯಾಗಿದ್ದ 'ಬಾಬಾ' ಸಿನಿಮಾವನ್ನು ರೀ-ರಿಲೀಸ್ ಮಾಡೋಕೆ ಹೊರಟಿರೋದಕ್ಕೆ ಕಾರಣವಿದೆ. ಹಳೆಯ ಕಥೆಗೆ ಹೊಸ ಟ್ವಿಸ್ಟ್ ಕೊಟ್ಟು 'ಬಾಬಾ' ಸಿನಿಮಾವನ್ನು ಮರುಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೆ ಸಿನಿಮಾವನ್ನು ಸಂಪೂರ್ಣವಾಗಿ ಮತ್ತೆ ಎಡಿಟ್ ಮಾಡಲಾಗಿದೆ. ಪ್ರತಿಯೊಂದು ಫ್ರೇಮ್ಗೂ ಡಿಜಿಟಲ್ ರೂಪ ಕೊಡಲಾಗಿದೆ. ಕಲರ್ ಗ್ರೇಡಿಂಗ್ ಹಾಗೂ ಆಧುನಿಕ ತಂತ್ರಜ್ಞಾನವನ್ನು 'ಬಾಬಾ' ಸಿನಿಮಾಗೆ ಅಳವಡಿಸಲಾಗಿದೆಯಂತೆ.

'ಬಾಬಾ' ಹಾಡುಗಳಿಗೂ ಹೊಸ ರೂಪ
'ಬಾಬಾ' ಸಿನಿಮಾ ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದರು. 'ಮಾಯಾ ಮಾಯಾ..', 'ಶಕ್ತಿ ಕೊಡು' ಹಾಗೂ 'ಬಾಬಾ ಕಿಚ್ಚು' ಅನ್ನೋ ಹಾಡುಗಳು ಜನಪ್ರಿಯವಾಗಿದ್ದವು. ಹೀಗಾಗಿ ಈ ಹಾಡುಗಳಿಗೂ ಡಿಜಿಟಲ್ ರೂಪ ನೀಡಲಾಗಿದೆ. ಈ ಸಿನಿಮಾದ ಹಾಡುಗಳಿಗೆ ಡಾಲ್ಬಿ ಮಿಕ್ಸ್ ಸೌಂಡ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಹೀಗಾಗಿ ಡಿಜಿಟಲ್ ಟಚ್ ಕೊಟ್ಟು ರಿಲೀಸ್ ಮಾಡುತ್ತಿರೋದ್ರಿಂದ ಹೊಸ ಸಿನಿಮಾ ನೋಡಿದಂತೆಯೇ ಅನುಭವ ಆಗಲಿದೆ.

'ಬಾಬಾ' ಕಥೆಯೇನು?
ಸುಪ್ರೀಂ ಪವರ್ ಬಗ್ಗೆ ನಂಬಿಕೆನೇ ಇಲ್ಲದ ಉಡಾಫೆ ಯುವಕನಾಗಿ ರಜನಿಕಾಂತ್ ಆರಂಭದಲ್ಲಿ ಕಾಣಿಸಿಕೊಳ್ಳುತ್ತಾರೆ. ಭ್ರಷ್ಟ ರಾಜಕಾರಣಿಯಿಂದ ಜೀವನದಲ್ಲಿ ಹಲವು ಟ್ವಿಸ್ಟ್ ಹಾಗೂ ಸಮಸ್ಯೆಗಳು ಎದುರಾದಾಗ ಬಾಬಾಜಿ ಬಳಿಕ ಕರೆದುಕೊಂಡು ಹೋಗಲಾಗುತ್ತೆ. ಈ ವೇಳೆ ರಜನಿಗೆ 7 ವರಗಳನ್ನು ನೀಡುತ್ತಾರೆ. ತನ್ನಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಹೆಚ್ಚಿಸಿಕೊಳ್ಳಲು ಹಾಗೂ ಖಳನಾಯಕರನ್ನು ಎದುರಿಸಲು ಹೇಗೆ ಬಳಸಿಕೊಳ್ಳುತ್ತಾರೆ ಅನ್ನೋದೇ 'ಬಾಬಾ' ಕಥೆ. 20 ವರ್ಷಗಳ ಹಿಂದೆ ಸೋತಿದ್ದ ಸಿನಿಮಾದ ಕಥೆಗೆ ನಿರ್ದೇಶಕ ಸುರೇಶ್ ಕೃಷ್ಣ ಹೊಸ ಟ್ವಿಸ್ಟ್ ನೀಡಿದ್ದಾರೆ. ಸದ್ಯ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.


Click it and Unblock the Notifications











