ನಿರ್ಮಾಪಕರ ಮೀಟಿಂಗ್ನಲ್ಲಿ ಮಹೇಶ್ ಬಾಬು, ಪವನ್ ಕಲ್ಯಾಣ್ ಬಗ್ಗೆ ಗಂಭೀರ ಚರ್ಚೆಯಾಗಿದ್ದೇಕೆ?
ಟಾಲಿವುಡ್ನಲ್ಲಿ ಕಳೆದ ಕೆಲವು ದಿನಗಳಿಂದ ಸಾಕಷ್ಟು ಚರ್ಚೆಯಾಗುತ್ತಿದೆ. ನಿರ್ಮಾಪಕರೆಲ್ಲಾ ಒಟ್ಟಿಗೆ ಸೇರಿಕೊಂಡು ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಹಲವು ಮೀಟಿಂಗ್ಗಳು ನಡೆದಿದ್ದು, ಚಿತ್ರರಂಗದ ಏಳಿಗೆ ಬಗ್ಗೆ ಚರ್ಚೆ ಮಾಡಿದ್ದಾರೆ.
ಇತ್ತೀಚೆಗೆ ಟಾಲಿವುಡ್ನಲ್ಲಿ ನಿರ್ಮಾಪಕರೆಲ್ಲ ಸೇರಿಕೊಂಡು ಮೀಟಿಂಗ್ ಮಾಡಿದ್ದಾರೆ. ಹೈದರಾಬಾದ್ನ ದಾಸ್ಪಲ್ಲಾ ಹೋಟೆಲ್ನಲ್ಲಿ ಮೀಟಿಂಗ್ ನಡೆದಿತ್ತು. ಇಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ.
ಈ ಮೀಟಿಂಗ್ ಬಳಿಕ ಟಾಲಿವುಡ್ನಲ್ಲಿ ಕೆಲವು ಮಹತ್ತರ ವಿಷಯಗಳ ಬಗ್ಗೆ ಚರ್ಚೆಯಾಗಿದೆ. ಅದರಲ್ಲಿ ಸೂಪರ್ಸ್ಟಾರ್ ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಬಗ್ಗೆ ಮಹತ್ತರ ಚರ್ಚೆಯಾಗಿದೆಯಂತೆ. ಅಷ್ಟಕ್ಕೂ ನಿರ್ಮಾಪಕರು ಈ ಇಬ್ಬರು ನಟರ ಬಗ್ಗೆ ನಡೆಸಿರೋ ಚರ್ಚೆ ಏನು? ಎಂದು ತಿಳಿಯಲು ಮುಂದೆ ಓದಿ.

ಮಹೇಶ್, ಪವನ್ ಬಗ್ಗೆ ಚರ್ಚೆ
ಟಾಲಿವುಡ್ ಮಾಧ್ಯಮಗಳು ಮಾಡಿರುವ ವರದಿ ಪ್ರಕಾರ, ಟಾಲಿವುಡ್ ನಿರ್ಮಾಪಕರ ಗಿಲ್ಡ್ನಲ್ಲಿ ಸೂಪರ್ಸ್ಟಾರ್ ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಸಂಭಾವನೆ ಬಗ್ಗೆ ಗಂಭೀರ ಚರ್ಚೆ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಇಬ್ಬರೂ ಅತೀ ಹೆಚ್ಚು ಸಂಭಾವನೆ ಕೇಳುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ನಿರ್ಮಾಪಕರ ಮೀಟಿಂಗ್ನಲ್ಲಿ ಇಬ್ಬರ ಸಂಭಾವನೆ ಗಗನಕ್ಕೇರಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರಂತೆ.

ಇಬ್ಬರ ಸ್ಟಾರ್ ನಟರ ಬಗ್ಗೆ ಚರ್ಚೆ ಏಕೆ?
ಸೂಪರ್ಸ್ಟಾರ್ ಮಹೇಶ್ ಬಾಬು ಹಾಗೂ ಪವರ್ಸ್ಟಾರ್ ಪವನ್ ಕಲ್ಯಾಣ್ ಇಬ್ಬರ ಸಂಭಾವನೆ 50 ಕೋಟಿ ರೂ. ದಾಟಿದೆ. ಇದು ನಿರ್ಮಾಪಕರಿಗೆ ದೊಡ್ಡ ಪೆಟ್ಟು ಬೀಳುತ್ತಿದೆಯಂತೆ. ಯಾಕಂದರೆ, ಈ ಇಬ್ಬರು ನಟರೂ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿಲ್ಲ. ಆದರೆ, ಸಂಭಾವನೆ ಮಾತ್ರ ಹೆಚ್ಚು ಕೇಳುತ್ತಿದ್ದಾರೆ ಎಂಬುದು ನಿರ್ಮಾಪಕರ ಆರೋಪ ಎನ್ನಲಾಗಿದೆ. ನಿರ್ಮಾಪಕರ ಲೆಕ್ಕಚಾರದ ಪ್ರಕಾರ ಈ ಇಬ್ಬರೂ ನಟರು ಅಗತ್ಯಕ್ಕಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ.

ಥಿಯೇಟರ್ಗೆ ಜನ ಬರುತ್ತಿಲ್ಲ
ನಿರ್ಮಾಪಕರು ಇವರಿಬ್ಬರ ಸಂಭಾವನೆ ಜೊತೆಗೆ ಥಿಯೇಟರ್ಗೆ ಜನರು ಬರುತ್ತಿಲ್ಲ. ಅವರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆನೂ ಚರ್ಚೆಯಾಗಿದೆ ಎನ್ನಲಾಗಿದೆ. ಈ ಮೂಲಕ ಆಗಸ್ಟ್ 1 ರಿಂದ ಥಿಯೇಟರ್ಗೆ ಬಂದ ಸಿನಿಮಾಗಳು 8 ವಾರಗಳ ಬಳಿಕ ಒಟಿಟಿಯಲ್ಲಿ ರಿಲೀಸ್ ಆಗಬೇಕೆಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು. ಈಗ 8 ವಾರದಿಂದ 10 ವಾರಕ್ಕೆ ಏರಿಕೆ ಮಾಡುವ ಬಗ್ಗೆ ಚರ್ಚೆ ನಡೆದಿದೆ ಅನ್ನೋ ಮಾತು ಕೇಳಿಬರುತ್ತಿದೆ.

ಶೂಟಿಂಗ್ ಬಂದ್ಗೆ ಚಿಂತನೆ!
ಇದೇ ವೇಳೆ ಆಗಸ್ಟ್ 1ರಿಂದ ತೆಲುಗು ಸಿನಿಮಾಗಳ ಶೂಟಿಂಗ್ ಅನ್ನು ಬಂದ್ ಮಾಡಲಿದ್ದಾರೆ. ಈಗಾಗಲೇ ಸಿನಿಮಾ ಬಜೆಟ್ ಹಾಗೂ ಶೂಟಿಂಗ್ಗೆ ಆಗುವ ಖರ್ಚನ್ನು ನಿಯಂತ್ರಿಸಲು ನಿರ್ಮಾಪಕರು ಚಿಂತಿಸಿದ್ದಾರೆ. ಅಲ್ಲದೆ ಈಗಾಗಲೇ ಚಾಲ್ತಿಯಲ್ಲಿರುವ ಶೂಟಿಂಗ್ ಅನ್ನು ಮುಗಿಸಿ, ಈಗಾಗಲೇ ಚರ್ಚೆಯಾಗಿರುವ ವಿಷಯಗಳ ಬಗ್ಗೆ ಸ್ಪಷ್ಟತೆ ಬಗ್ಗೆ ಸಿಗುವವರೆಗೂ ಸಿನಿಮಾ ನಿರ್ಮಾಣ ನಿಲ್ಲಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.


Click it and Unblock the Notifications











